ಇತ್ತೀಚಿನ ಸುದ್ದಿ
ಭಾರತದ ಆಯುರ್ವೇದ ವೈದ್ಯ ವ್ಯವಸ್ಥೆಯನ್ನು ವಿದೇಶಿಯರು ಸ್ವೀಕರಿಸುತ್ತಿರುವುದು ನಮ್ಮ ದೇಶಕ್ಕೆ ಸಂದ ಗೌರವ: ಸಂಸದ ಕ್ಯಾಪ್ಟನ್ ಚೌಟ
14/02/2026, 17:13
ಮಂಗಳೂರು(reporterkarnataka.com): ನಗರದ ಮೋರ್ಗನ್ಸ್ ಗೇಟ್ ನಲ್ಲಿರುವ ಈಝೀ ಆಯುರ್ವೇದ ಆಸ್ಪತ್ರೆಯು ಒಂದು ಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗೌರವಾನ್ವಿತ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿ ನೀಡಲಾಗುತ್ತಿರುವ ಶಾಸ್ತ್ರೀಯ ಆಯುರ್ವೇದ ಚಿಕಿತ್ಸೆಗಳು ಮತ್ತು ಶಾಂತಿಯುತ, ಸಮಗ್ರ ಹಾಗೂ ಉನ್ನತಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಪ್ರಶಂಸಿಸಿದರು.




7 ವಿವಿಧ ದೇಶಗಳಿಂದ ಬಂದ 15 ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಆಯುರ್ವೇದ ಕಲಿಕೆ ಮತ್ತು ತರಬೇತಿ ಆಸ್ಪತ್ರೆಯಲ್ಲಿ ಪೂರ್ಣಗೊಂಡಿದ್ದು ಈ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣಾ ಸಮಾರಂಭ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು! ಈ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಪಂಚಕರ್ಮ ಚಿಕಿತ್ಸೆಗಳು, ಆಯುರ್ವೇದ ಔಷಧ ತಯಾರಿಕೆ ಮತ್ತು ಭಾರತೀಯ ಸಾಂಪ್ರದಾಯಿಕ ಚಿಕಿತ್ಸೆಯ ಕಾಲಾತೀತ ತತ್ವಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಈ ತರಬೇತಿಯು ಸಹಾಯಕವಾಗಿತ್ತು.
ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ವಿದೇಶಿಯರು ಭಾರತ ಮೂಲದ ಈ ವೈದ್ಯ ವ್ಯವಸ್ಥೆಯನ್ನು ಸ್ವೀಕರಿಸುತ್ತಿರುವುದು ನಮ್ಮ ದೇಶದ ಜ್ಞಾನಕ್ಕೆ ಸಂದ ಜಾಗತಿಕ ಗೌರವವಾಗಿದೆ. ತಲೆಮಾರುಗಳಿಂದ ಸಾಗಿ ಬಂದ ನಮ್ಮ ಆಯುರ್ವೇದ ಪರಂಪರೆ ಇಂದು ವಿಶ್ವಕ್ಕೆ ಆರೋಗ್ಯದ ಬೆಳಕಾಗಿ ನಿಂತಿದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದಾಗಿ ಇಂದು ಭಾರತೀಯ ಆಯುರ್ವೇದ ಮತ್ತು ಯೋಗಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೆ ಇಲ್ಲದಷ್ಟು ಮನ್ನಣೆ ದೊರೆತಿದೆ” ಎಂದರು.
ಅವರ ಈ ಭಾವನಾತ್ಮಕ ಮಾತುಗಳು ಎಲ್ಲರ ಮನಸೂರೆಗೊಂಡಿತು ಮತ್ತು ಭಾರತದ ಪ್ರಾಚೀನ ಆರೋಗ್ಯ ವಿಜ್ಞಾನವು ವಿಶ್ವಾದ್ಯಂತ ಯೋಗ್ಯ ಮನ್ನಣೆ ಪಡೆಯುತ್ತಿದೆ ಎಂಬುದನ್ನು ನೆನಪಿಸಿತು. ಕ್ಯಾಪ್ಟನ್ ಚೌಟ ಅವರು ಆಯುರ್ವೇದವನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡುವ ಭರವಸೆಯನ್ನು ನೀಡಿದರು. ಇದು ಆಯುರ್ವೇದ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯಲು ಸ್ಫೂರ್ತಿದಾಯಕವಾಗಿದೆ.
ಈಝೀ ಆಯುರ್ವೇದ ಆಸ್ಪತ್ರೆಯುಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಇಂತಹ ಕ್ಷಣಗಳು ಆಯುರ್ವೇದವು ಕೇವಲ ಔಷಧವಲ್ಲ — ಅದು ಭಾರತದಿಂದ ವಿಶ್ವಕ್ಕೆ ನೀಡಲಾದ ಅಮೂಲ್ಯ ಉಡುಗೊರೆ ಎಂಬ ನಂಬಿಕೆಯನ್ನು ಮತ್ತಷ್ಟು ದೃಢಪಡಿಸುತ್ತವೆ.
ಈ ಸಂದರ್ಭದಲ್ಲಿ ಈಝಿ ಆಯುರ್ವೇದ ಆಸ್ಪತ್ರೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ| ಜನಾರ್ಧನ ಹೆಬ್ಬಾರ್, ಮಾಜಿ ಉಪಮೇಯರ್ ಪಿ.ಎಸ್. ಭಾನುಮತಿ, ಕಾರ್ಪೊರೇಟರ್ ರೇವತಿ, ಕವಿತಾರಾಜ್ ಕನ್ಸ್ಟ್ರಕ್ಷನ್ ನ ಪ್ರಶಾಂತ್ ಆಳ್ವ ಮತ್ತು ಇನ್ನಿತರರು ಉಪಸ್ಥಿತರಿದ್ದರು.













