ಇತ್ತೀಚಿನ ಸುದ್ದಿ
ಜಾನಪದ ವಿದ್ವಾಂಸ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ಇನ್ನಿಲ್ಲ
15/03/2025, 18:02

ಬಂಟ್ವಾಳ(reporterkarnataka.com): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು, ಹೆಸರಾಂತ ಜಾನಪದ ವಿದ್ವಾಂಸರು, ಹಲವಾರು ಪುಸ್ತಕಗಳನ್ನು ಬರೆದ ಹೆಸರಾಂತ ಲೇಖರಾಗಿ ಜನಪ್ರೀತಿಗಳಿಸಿದ, ಹೇಮಾಂಶು ಪ್ರಕಾಶನದ ಮೂಲಕ ಅನೇಕ ಬರಹಗಾರರನ್ನು, ಕಲಾವಿದರನ್ನು ರೂಪಿಸಿದ ತುಳು ಕನ್ನಡ ವಿದ್ವಾಂಸರಾದ ಡಾ ವಾಮನ ನಂದಾವರ ಅವರು ಶನಿವಾರ ನಿಧನರಾದರು.
81 ವರ್ಷ ವಯಸ್ಸಿನ ವಾಮನ ನಂದಾವರ ಅವರು ಪತ್ನಿ ಚಂದ್ರಕಲಾ ನಂದಾವರ ಹಾಗೂ ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಉರ್ವಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕ ಅವಕಾಶ ಮಾಡಿಕೊಡಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ, ಪಾಣೆಮಂಗಳೂರು ಎಸ್ .ವಿ.ಎಸ್.ಶಾಲೆ, ಕುರ್ನಾಡು ಹಾಗೂ ಕೋಟೆಕಾರು ಆನಂದಾಶ್ರಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಪಡೆದಿದ್ದರು. ಮಂಗಳೂರು ಸರಕಾರಿ ಬಿಎಡ್ ಕಾಲೇಜಿನಲ್ಲಿ ಬಿಎಡ್ ಶಿಕ್ಷಣ ಪಡೆದು ಸೈಂಟ್ ಆ್ಯನ್ಸ್ ಮಹಿಳಾ ಶಿಕ್ಷಕ- ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿ,ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿದ್ದರು. ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ದರ್ಶನ ಯೋಜನೆಯ ಸಹಾಯಕ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಬಂಟ್ವಾಳದ ನಂದಾವರದಲ್ಲಿ ನಡೆದ ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ನ 12 ಸಾಹಿತ್ಯ ಸಮ್ಮೇಳಾಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದರು.