10:27 AM Thursday5 - February 2026
ಬ್ರೇಕಿಂಗ್ ನ್ಯೂಸ್
ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,… ಕಂಬನಿ ನಡುವೆ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್‌ ಅಂತಿಮವಿಧಿ: ಬನ್ನೇರುಘಟ್ಟದ ಕಾಸಾಗ್ರೌಂಡ್… ಯಾವ ಹೈಸ್ಪೀಡ್ ರೈಲೂ ಬರಲ್ಲ: ಕೇಂದ್ರ ಬಜೆಟ್ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್… ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿ; ಶಿಕ್ಷಣ, ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್…

ಇತ್ತೀಚಿನ ಸುದ್ದಿ

ಫೆಬ್ರವರಿ 12: ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾ ಮುಷ್ಕರ

05/02/2026, 10:27

ಮಂಗಳೂರು(reporterkarnataka.com): 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದ ತಿದ್ದುಪಡಿ ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ಫೆಬ್ರವರಿ 12ರಂದು ಅಖಿಲ ಭಾರತ ಮಹಾಮುಷ್ಕರ ನಡೆಯಲಿದೆ.

ಕೇಂದ್ರ ಸರಕಾರ ಭಾರತದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ನಾಶ ಮಾಡಲು ಕಾರ್ಮಿಕ ಚಳುವಳಿಯನ್ನು ಹತ್ತಿಕ್ಕಲು ಹಾಗೂ ಬಂಡವಾಳಿಗರ ಲಾಭದ ಹಿತಾಸಕ್ತಿಗಳನ್ನು ಕಾಪಾಡಲು ಪ್ರಮುಖ 29 ಕಾನೂನುಗಳನ್ನು ರದ್ದುಗೊಳಿಸಿದೆ. ಉದ್ಯಮಸ್ನೇಹಿ ಹೆಸರಿನಲ್ಲಿ 4 ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ, ಕೈಗಾರಿಕಾ ಸಂಬAಧ ಸಂಹಿತೆ, ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ ಹಾಗೂ ಸಾಮಾಜಿಕ ಭದ್ರತಾ ಸಂಹಿತೆಗಳನ್ನು 2025 ನವೆಂಬರ್ 21ರಿಂದ ಜ್ಯಾರಿಗೆ ಅಧಿಸೂಚನೆ ಹೊರಡಿಸಿದೆ. ಸ್ವಾತಂತ್ರö್ಯ ನಂತರ ಕಾರ್ಮಿಕರು ನಡೆಸಿದ ದೀರ್ಘ ಹೋರಾಟದ ಫಲವಾಗಿ ಕನಿಷ್ಠ ವೇತನ, ಕೆಲಸದ ಸಮಯದ ಮಿತಿ, ಸಂಘಟನೆ ಮತ್ತು ಮುಷ್ಕರದ ಹಕ್ಕು, ಸಾಮಾಜಿಕ ಭದ್ರತೆ ಕಾನೂನುಗಳು ಬಂದಿದ್ದು, ಆದರೆ ಈ ಎಲ್ಲಾ ಹಕ್ಕುಗಳನ್ನು ಹಿಂಪಡೆಯುವ ಪ್ರಯತ್ನವೇ ಈ 4 ಕಾರ್ಮಿಕ ಸಂಹಿತೆಗಳಾಗಿವೆ.
ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ 2014ರಿಂದ ದೇಶದ ಉನ್ನತ ತ್ರಿಪಕ್ಷೀಯ ವೇದಿಕೆಯಾದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಈವರೆಗೂ ಕರೆಯಲಾಗಿಲ್ಲ. ಎಲ್ಲಾ ಕೇಂದ್ರ ಕಾರ್ಮಿಕ ಸಂಘಗಳು ಒಕ್ಕೊರಳಿನಿಂದ ಈ ಸಂಹಿತೆಗಳನ್ನು ವಿರೋಧಿಸಿವೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇಲ್ಲದ ವೇಳೆ ಪ್ರಮುಖ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ಚರ್ಚೆ ಇಲ್ಲದೆ ಈ ಸಂಹಿತೆಗಳಿಗೆ ಅಂಗೀಕಾರ ಪಡೆದಿದೆ. ಕೇಂದ್ರ ಸರಕಾರ ನಿಗದಿ ಮಾಡಿದ ನೆಲಮಟ್ಟದ ಕನಿಷ್ಠ ಕೂಲಿ ದಿನಕ್ಕೆ ರೂ. 178/- ಮಾತ್ರ. ಈ ಹಣದಲ್ಲಿ ಯಾವುದೇ ಕಾರ್ಮಿಕನಿಗೆ ಬದುಕು ನಿರ್ವಹಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರವೇ ನೇಮಕ ಮಾಡಿದ ಡಾ.ಅನೂಪ್ ಸತ್ಪತಿ ಸಮಿತಿ ಕನಿಷ್ಠ ಕೂಲಿ ದಿನಕ್ಕೆ ರೂ. 375/-ರಷ್ಟು ನೀಡಬೇಕೆಂದು ಶಿಫಾರಸು ಮಾಡಿತ್ತು. 7ನೇ ವೇತನ ಆಯೋಗ ತಿಂಗಳಿಗೆ ರೂ. 18,000/- ಎಂದು ಹೇಳಿತ್ತು. ಆದರೆ ಸರಕಾರ ಇವೆಲ್ಲವನ್ನೂ ತಿರಸ್ಕರಿಸಿತ್ತು. ಪ್ರೊವಿಡೆಂಟ್ ಫಂಡ್ (EPF) ವೇತನ ಮಿತಿ ರೂ. 15,000/-. ESI ವೇತನ ಮಿತಿ ರೂ. 21,000/-ಕ್ಕೆ ಮಿತಿಗೊಳಿಸಿದ ಕೇಂದ್ರ ಸರಕಾರವು ಬಹುಸಂಖ್ಯಾತ ಕಾರ್ಮಿಕರನ್ನು ಈ ಯೋಜನೆಗಳಿಂದ ಹೊರಗಿಡುವ ಸಂಚು ರೂಪಿಸಿದೆ.
ಹೊಸ ಸಂಹಿತೆಯಲ್ಲಿ ಸಂಘಟನೆ ಮತ್ತು ಮುಷ್ಕರಕ್ಕೆ ಅವಕಾಶವಿಲ್ಲ, 1926ರ ಟ್ರೇಡ್ ಯೂನಿಯನ್ ಆಕ್ಟ್ನಲ್ಲಿ ಒಂದು ಕೈಗಾರಿಕೆಯ 7 ಕಾರ್ಮಿಕರು ಒಟ್ಟಾಗಿ ಸಂಘ ರಚಿಸಲು ಅವಕಾಶವಿತ್ತು. ಹಿಂದಿನ ಕಾನೂನಿನ ಪ್ರಕಾರ ಮುಷ್ಕರ ನಡೆಸಲು 15 ದಿನಗಳ ಮುಂಚಿತವಾಗಿ ನೋಟೀಸು ನೀಡಿದರೆ ಸಾಕಿತ್ತು. ಆದರೆ ಹೊಸ ಸಂಹಿತೆ ಪ್ರಕಾರ ಅದನ್ನು 60 ದಿವಸಗಳಿಗೆ ಏರಿಕೆ ಮಾಡಲಾಗಿದೆ. ಮಾತ್ರವಲ್ಲ ಸಂಧಾನ ನಡೆಯುವವರೆಗೆ ಮುಷ್ಕರ ನಡೆಸುವುದು ಅಕ್ರಮವೆಂದು ಘೋಷಿಸಲಾಗಿದೆ. ಅಲ್ಲದೆ ಇನ್ನೊಬ್ಬರ ಹೋರಾಟಕ್ಕೆ ಬೆಂಬಲ ಸೂಚಿಸಿ ಮುಷ್ಕರ ಮಾಡಿದರೆ ಅದು ಕೂಡಾ ಅಪರಾಧವಾಗಿದೆ. ಒಟ್ಟಿನಲ್ಲಿ ಇದು ಅಂತರಾಷ್ಟಿಯ ಕಾರ್ಮಿಕ ಸಂಘಟನೆ (ULO)ಯ ಒಪ್ಪಂದಗಳಿಗೂ ವಿರುದ್ಧವಾಗಿದೆ. ಹಾಗೂ ಸಂವಿಧಾನ ವಿರೋಧಿಯಾಗಿದೆ.

ಮಹಾತ್ಮಾ ಗಾಂಧಿ ಉದ್ಯೋಗಖಾತ್ರಿ ಯೋಜನೆಯನ್ನು ವಿಕಸಿತ್ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, 2025 ಎಂದು ಬದಲಾಯಿಸಲಾಗಿದೆ. ಈ ಹೊಸ ಕಾಯ್ದೆಯು ತೀವ್ರ ನಿರುದ್ಯೋಗದಿಂದ ಬಳಲುತ್ತಿರುವ ಗ್ರಾಮೀಣ ಜನತೆಯ ಬದುಕಿಗೆ ಗಂಭೀರ ಪೆಟ್ಟು ನೀಡಲಿದೆ ಹಾಗೂ ಹಣಕಾಸಿನ ಹೊರೆಯನ್ನು ರಾಜ್ಯಗಳ ಮೇಲೆ ವರ್ಗಾಯಿಸುತ್ತದೆ. ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದ್ದು, ಇದು ಪ್ರಾಯೋಗಿಕವಾಗಿ ವಿದೇಶಿ ಕಂಪನಿಗಳಿಗೆ ದೇಶೀಯ ವಿಮಾ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ನೀಡಿದೆ. ಕೇಂದ್ರ ಸರ್ಕಾರವು ಕರಡು ಬೀಜ ಮಸೂದೆ ಮತ್ತು ಕರಡು ವಿದ್ಯುತ್ (ತಿದ್ದುಪಡಿ) ಮಸೂದೆ, 2025ನ್ನು ಮಂಡಿಸಿದೆ. ಈ ಮಸೂದೆಗಳನ್ನು ಮಂಡಿಸಿ ಅಂಗೀಕರಿಸಿದರೆ, ಕೃಷಿ, ಗೃಹ ಬಳಕೆ, ವಿದ್ಯುತ್ ಗ್ರಾಹಕರು ಮತ್ತು ನಮ್ಮ ದೇಶದ ಸಾರ್ವಜನಿಕ ವಿದ್ಯುತ್ ಕ್ಷೇತ್ರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

*ಫೆಬ್ರವರಿ 5,6,7 – ಜಿಲ್ಲೆಯಾದ್ಯಂತ ವಾಹನ ಪ್ರಚಾರ ಜಾಥಾ:*
ಅಖಿಲ ಭಾರತ ಮಹಾಮುಷ್ಕರದ ಸಂದೇಶವನ್ನು ಜನಸಾಮಾನ್ಯರ ಮಧ್ಯೆ ಕೊಂಡೊಯ್ಯಲು ಫೆಬ್ರವರಿ 5,6,7ರಂದು ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾಹನ ಪ್ರಚಾರ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 5ರಂದು ಬೆಳಿಗ್ಗೆ 9.30ಕ್ಕೆ ನಗರದ ಲೇಡಿಗೋಷನ್ ಬಳಿಯಲ್ಲಿ ಜಾಥಾದ ಉದ್ಘಾಟನಾ ಸಮಾರಂಭವು ಜರುಗಲಿದೆ. ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರದಾನ ಕಾರ್ಯದರ್ಶಿ ಫಣೀಂದ್ರ ಕೆ. ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಬ್ಯಾಂಕ್ ನೌಕರರ ರಾಜ್ಯ ನಾಯಕರಾದ ವಿನ್ಸೆಂಟ್ ಡಿ.ಸೋಜ ಹಾಗೂ ಬಿ.ಎಂ. ಮಾಧವರವರು ಭಾಗವಹಿಸಲಿದ್ದಾರೆ. ಬಳಿಕ ಜಾಥಾವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಂಚರಿಸಿ ಫೆಬ್ರವರಿ 7ರಂದು ಸಂಜೆ 6 ಗಂಟೆಗೆ ನಗರದ ಯೆಯ್ಯಾಡಿ ಜಂಕ್ಷನ್‌ನಲ್ಲಿ ಸಮಾರೋಪಗೊಳ್ಳಲಿದೆ.

*ಫೆ. 12 – ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಚಳುವಳಿ:*
ಅಖಿಲ ಭಾರತ ಮುಷ್ಕರ ನಡೆಯಲಿರುವ ಫೆ. 12ರಂದು ಬೆಳಿಗ್ಗೆ 9 ಗಂಟೆಗೆ ದ.ಕ. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ತಾಲೂಕು, ವಲಯ ಕೇಂದ್ರಗಳು ಸೇರಿದಂತೆ ಸುಮಾರು 25ಕ್ಕೂ ಮಿಕ್ಕಿದ ಕಡೆಗಳಲ್ಲಿ ರಸ್ತೆತಡೆ ಚಳುವಳಿ ನಡೆಯಲಿದೆ. ನೂರಾರು ಸಂಖ್ಯೆಗಳಲ್ಲಿ ಕಾರ್ಮಿಕರು, ರೈತರು, ವಿದ್ಯಾರ್ಥಿ ಯುವಜನರು, ಮಹಿಳೆಯರು, ದಲಿತ ಆದಿವಾಸಿಗಳು ಸೇರಿದಂತೆ ಜಿಲ್ಲೆಯ ಪ್ರಜ್ಞಾವಂತ ಜನತೆ ರಸ್ತೆತಡೆ ಚಳುವಳಿಯಲ್ಲಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆರಿಂಜ ತಿಳಿಸಿದರು. ಬಿ. ಶೇಖರ್ (ಎಐಟಿಯುಸಿ ಜಿಲ್ಲಾ ಮುಖಂಡರು), ಯೋಗಿಶ್ ಜಪ್ಪಿನಮೊಗರು (ಸಿಐಟಿಯು ಜಿಲ್ಲಾ ಮುಖಂಡರು), ಕೆ. ಯಾದವ ಶೆಟ್ಟಿ (ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರು), ಓಸ್ವಾಲ್ ಪ್ರಕಾಶ್ ಫೆರ್ನಾಂಡೀಸ್ (ರಾಜ್ಯ ರೈತ ಸಂಘದ ನಾಯಕರು), ಬಿ.ಎಂ. ಮಾಧವ (ಬ್ಯಾಂಕ್ ನೌಕರರ ಮುಖಂಡರು), ಬಿ.ಎನ್. ದೇವಾಡಿಗ (ವಿಮಾ ನೌಕರರ ಸಂಘಟನೆಯ ಮುಖಂಡರು), ರಾಜನ್ ಡಿ.ಕೋಸ್ತ (ವಿಮಾ ಪ್ರತಿನಿಧಿಗಳ ಸಂಘಟನೆಯ ಜಿಲ್ಲಾ ಮುಖಂಡರು), ಪಿ.ಎಚ್. ಮೋಹನ್ (ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಹೊಟೇಲ್ ಕಾರ್ಮಿಕರ ಸಂಘ), ಕಿರಣ್ ರಾಜ್( ಹೋಟೇಲ್ ಕಾರ್ಮಿಕರ ಮುಖಂಡರು) ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು