ಇತ್ತೀಚಿನ ಸುದ್ದಿ
ಬಾಣಸವಾಡಿ, ಕಸ್ತೂರಿನಗರ ಅರಣ್ಯ ಪ್ರದೇಶಕ್ಕೆ ಸಚಿವ ಖಂಡ್ರೆ ಭೇಟಿ: ಬೆಂಗಳೂರಿನಲ್ಲಿ ಶ್ವಾಸತಾಣಗಳ ಸಂರಕ್ಷಣೆ ಅಗತ್ಯ ಎಂದ ಫಾರೆಸ್ಟ್ ಮಿನಿಸ್ಟರ್
23/06/2025, 11:52
ಬೆಂಗಳೂರು(reporterkarnataka.com): ರಾಜ್ಯದ ರಾಜಧಾನಿ ಕಾಂಕ್ರೀಟ್ ಕಾಡಾಗುತ್ತಿದ್ದು, ಅತ್ಯಾವಶ್ಯಕವಾದ ಶ್ವಾಸತಾಣಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಪಾದಿಸಿದ್ದಾರೆ.
ಕಸ್ತೂರಿನಗರದ ಬಿ ಚನ್ನಸಂದ್ರ ಕೆರೆಯ 2ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಬೆಂಗಳೂರು ಕೆಆರ್. ಪುರ ಹೋಬಳಿ ಬಾಣಸವಾಡಿ ಗ್ರಾಮದ ಸರ್ವೆ ನಂ. 64ರಲ್ಲಿ 19 ಎಕರೆ 17 ಗುಂಟೆ ಜಮೀನಿನ ಪೈಕಿ 13 ಎಕರೆ 27 ಗುಂಟೆ ಅರಣ್ಯ ಇಲಾಖೆಗೆ ಸೇರಿದೆ. ಆದರೆ ಈ ಪೈಕಿ 7 ಎಕರೆ ಅನ್ಯ ಉದ್ದೇಶಕ್ಕೆ ಬಳಕೆ ಆಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದರು.
ಹಾಲಿ ಇರುವ 6 ಎಕರೆ 26 ಗುಂಟೆ ಜಮೀನಿನಲ್ಲಿ ತುಂಬಿದ್ದ ಹೂಳು ತೆಗೆದು ಕಾಂಪೌಂಡ್ ಹಾಕಿ, ಸಸಿಗಳನ್ನು ನೆಟ್ಟು ಸಂರಕ್ಷಿಸಲಾಗಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆರೆಗಳನ್ನು ಅರಣ್ಯ ಎಂದು ಕಂದಾಯ ಇಲಾಖೆ ದಾಖಲೆಗಳಲ್ಲಿ ಪರಿವರ್ತಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕಸ್ತೂರಿ ನಗರ ಬಿ ಚನ್ನಸಂದ್ರ ಕೆರೆ ಅಭಿವೃದ್ಧಿಯ ಸ್ಥಳೀಯರ ಪಾತ್ರ ಮಹತ್ವದ್ದಾಗಿದ್ದು, ಇದೇ ರೀತಿ ಸರ್ಕಾರಿ ಆಸ್ತಿ ಉಳಿಸಲು ಆಯಾ ಪ್ರದೇಶದ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.


ಕಸ್ತೂರಿ ನಗರ ಕ್ಷೇಮಾಭಿವೃದ್ಧಿ ಸಂಘ ತಮಗೆ ಕಳೆದ ಫೆಬ್ರವರಿಯಲ್ಲಿ ಈ ಕುರಿತಂತೆ ದೂರು ನೀಡಿದ ಕೂಡಲೇ, ಒತ್ತುವರಿ ಆಗಿರುವ ಅರಣ್ಯ ಭೂಮಿ ತೆರವು ಮಾಡಿಸಲು ತಾವು ಫೆ.6ರಂದು ಲಿಖಿತ ಸೂಚನೆ ನೀಡಿದ್ದಾಗಿ ತಿಳಿಸಿದರು.
ಬೆಂಗಳೂರು ನಾಲ್ಕೂ ದಿಕ್ಕಿನಲ್ಲಿ ಅಭಿವೃದ್ಧಿ ಆಗಿದೆ. ವಿಶಾಲವಾಗಿ ಬೆಳೆದಿದೆ. ಈ ವೇಗದ ಬೆಳವಣಿಗೆಯಲ್ಲಿ ಹಲವು ಬಡಾವಣೆ ತಲೆಎತ್ತಿವೆ, ಲಕ್ಷಾಂತರ ಗಿಡ, ಮರ ಕಡಿಯಲಾಗಿದೆ. ಹಸಿರು ಹೊದಿಕೆ ಕ್ಷೀಣಿಸಿದರೆ ಮುಂದಿನ ಪೀಳಿಗೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಶ್ವಾಸ ತಾಣಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.
ಬೆಂಗಳೂರು ನಗರ ಉಪ ವಲಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.














