ಇತ್ತೀಚಿನ ಸುದ್ದಿ
ಡ್ರಗ್ಸ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳೇ ಹೊಣೆಗಾರರು: ಗೃಹ ಸಚಿವ ಡಾ. ಪರಮೇಶ್ವರ್ ಎಚ್ಚರಿಕೆ
30/11/2024, 20:01

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ರಾಜ್ಯದ ಯಾವುದೇ ಮೂಲೆಯಲ್ಲೂ ಡ್ರಗ್ಸ್ ಕಂಡು ಬಂದರೆ ಆಯಾ ಪ್ರದೇಶದ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ನಗರದ ಪಾಂಡೇಶ್ವರ ಪೊಲೀಸ್ ಲೇನ್ ನಲ್ಲಿ 160 ಮನೆಗಳಿರುವ ವಸತಿ ಗೃಹಗಳ ಉದ್ಘಾಟನೆ ಹಾಗೂ ಸುಬ್ರಹ್ಮಣ್ಯ, ಬಂಟ್ವಾಳ ಸಂಚಾರ ಠಾಣೆಯ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆಯಾ ಪ್ರದೇಶದ ಕಮಿಷನರ್, ಎಸ್ ಪಿ, ಡಿಎಸ್ಪಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಯಾರು ಡ್ರಗ್ ಪೆಡ್ಲರ್ಸ್ ಇದ್ದಾರೆ, ಅವರನ್ನು ಬಂಧಿಸಬೇಕು. ಪೆಡ್ಲರ್ ಮೇಲೆ ಏನೇ ಕ್ರಮ ತಗೊಳ್ಳಿ, ನಾನು ನಿಮ್ಮ ಜೊತೆಗಿದ್ದೇನೆ ಎಂದರು.
ಗಾಂಜಾಗಿಂತಲೂ ಸಿಂಥೆಟಿಕ್ ಡ್ರಗ್ಸ್ ಅಪಾಯಕಾರಿ. ಗಾಂಜಾ ತಡವಾಗಿ ಪರಿಣಾಮ ಬೀರುತ್ತದೆ. ಆದರೆ ಸಿಂಥೆಟಿಕ್ ಡ್ರಗ್ಸ್ ನ್ಯೂರೋ ಸಿಸ್ಟಮ್ ಹಾಳು ಮಾಡುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಡ್ರಗ್ ವಿರುದ್ಧ ಯುದ್ಧ ಸಾರಿದೆ. ಸಮಾಜದ ಎಲ್ಲ ಮಕ್ಕಳನ್ನು ಪೊಲೀಸರು ತಮ್ಮ ಮಕ್ಕಳು ಎಂದೇ ಭಾವಿಸಿ ಕೆಲಸ ಮಾಡಿ. ಸಿಂಥೆಟಿಕ್ ಡ್ರಗ್ಸ್ ಬರದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು
ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 250 ಕೋಟಿ ಡ್ರಗ್ಸ್ ಹಿಡಿದಿದ್ದೇವೆ. ಅಪರಾಧ ಪತ್ತೆಗೆ ಎಐ ಇಂಟೆಲಿಜೆನ್ಸ್ ಕ್ಯಾಮೆರಾಗಳನ್ನು ಬಳಕೆ ಮಾಡುತ್ತಿದ್ದೇವೆ. ಒಮ್ಮೆ ಅಪರಾಧ ಎಸಗಿದವನನ್ನು ಪತ್ತೆ ಮಾಡಿದರೆ ಮತ್ತೆ ಅದು ಕೂಡಲೇ ಪತ್ತೆ ಮಾಡುತ್ತದೆ. ಟ್ರಾಫಿಕ್ ಸೇರಿದಂತೆ ವಿವಿಧ ಅಪರಾಧ ತನಿಖೆಯನ್ನು ಆಧುನಿಕ ರೀತಿಯಲ್ಲಿ ಮಾಡಲಾಗುತ್ತಿದೆ ಎಂದು ಅವರು ನುಡಿದರು.
ಪುತ್ತೂರಿಗೆ ಮಹಿಳಾ ಪೊಲೀಸ್ ಠಾಣೆ ಕಟ್ಟಡ ಬೇಕೆಂದು ಪುತ್ತೂರು ಶಾಸಕ ಅಶೋಕ ರೈ ಬೇಡಿಕೆ ಇಟ್ಟಿದ್ದಾರೆ, ಅದನ್ನು ಇಲ್ಲಿಯೇ ಮಂಜೂರು ಮಾಡುತ್ತೇನೆ. ಬಿ ಗ್ರೇಡ್ ಪೊಲೀಸ್ ಠಾಣೆಗೆ ಒಂದು ಕೋಟಿ ಅನುದಾನ ಇದೆ. ಅದನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ಗೃಹ ಸಚಿವರು ನುಡಿದರು.
ಪ್ರತಿ ಪೊಲೀಸ್ ಕುಟುಂಬಗಳು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಂಕಲ್ಪ ಮಾಡಬೇಕು. ಐಪಿಎಸ್ ಅಧಿಕಾರಿ ಮಾಡುತ್ತೇನೆಂದು ಸಂಕಲ್ಪ ಮಾಡಿ. ಅದಕ್ಕಾಗಿ ಒಂದೊತ್ತು ಊಟ ಬಿಟ್ಟರೂ ಯಾರೂ ಸಾಯುವುದಿಲ್ಲ. ಮುಂದಿನ ಭವಿಷ್ಯ ಕಷ್ಟವೂ ಇದೆ, ಅಷ್ಟೇ ಸವಾಲಿನಿಂದ ಕೂಡಿರುತ್ತದೆ ಎಂದು ಕಿವಿಮಾತು ಹೇಳಿದರು.
ನಮ್ಮಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬಂದಿ ಇದ್ದಾರೆ. ಪ್ರತಿಯೊಬ್ಬರಿಗೂ ಮನೆ ಕೊಡಬೇಕೆಂಬ ಉದ್ದೇಶ ಇದೆ. ಇದಕ್ಕಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಪೊಲೀಸರ ಮನೆ ಕಟ್ಟಲು ಅನುದಾನ ಕೇಳಿದ್ದೇನೆ. ಬೇರೇನು ಕೇಳುವುದಿಲ್ಲ, ಪೊಲೀಸರ ಮನೆಗಳಿಗೆ 5 ಸಾವಿರ ಕೋಟಿ ಕೊಡಿ ಎಂದು ಅಹವಾಲು ಮುಂದಿಟ್ಟಿದ್ದೇನೆ ಎಂದರು.
ವೇದಿಕೆಯಲ್ಲಿ ಶಾಸಕ ಅಶೋಕ್ ರೈ, ಎಂಎಲ್ಸಿ ಐವಾನ್ ಡಿಸೋಜ, ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಉಪಸ್ಥಿತರಿದ್ದರು.