ಇತ್ತೀಚಿನ ಸುದ್ದಿ
ಡ್ರೈವಿಂಗ್ ಮಾಡುತ್ತಿರುವಾಗಲೇ ಚಾಲಕ ಹೃದಯಾಘಾತಕ್ಕೆ ಬಲಿ: ಕೆಎಸ್ಸಾರ್ಟಿಸಿ ಬಸ್ ಪಲ್ಟಿ 14 ಮಂದಿಗೆ ಗಾಯ
25/10/2022, 18:26

ರಾಯಚೂರು(reporterkarnataka.com):ಡ್ರೈವಿಂಗ್ ಮಾಡುತ್ತಿರುವಾಗಲೇ ಕೆಎಸ್ಸಾರ್ಟಿಸಿ ಬಸ್ ಚಾಲಕರೊಬ್ಬರು ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದು, ಬಸ್ ನಿಯಂತ್ರಣಕ್ಕೆ ಸಿಗದೆ ಪಲ್ಟಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ಜಿಲ್ಲೆಯ ಚಿಕ್ಕಹೆಸರೂರು ಎಂಬಲ್ಲಿ ನಡೆದಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲಕ ರಾಯಚೂರು ವಿಭಾಗದ ಲಿಂಗಸೂಗುರ ಘಟಕದ ಚಾಲಕ ಶ್ರೀನಿವಾಸ್ ನಾರಾಯಣ ಗೌಡ (52) ಮೃತಪಟ್ಟ ಚಾಲಕರು.
ಸೋಮವಾರ ಸಂಜೆ ಬಸ್ ರಾಯಚೂರು-ಲಿಂಗಸೂಗುರ ಮಾರ್ಗವಾಗಿ ಬೆಳಗಾವಿಗೆ ಸಂಚರಿಸುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಚಾಲಕನಿಗೆ ಹೃದಯಾಘಾತವಾಗಿದೆ. ಚಾಲಕ ಅಸ್ವಸ್ಥಗೊಂಡ ಕಾರಣ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.ಅಪಘಾತದಲ್ಲಿ ನಿರ್ವಾಹಕ ಸೇರಿದಂತೆ 14 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಇವರಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯಗೊಂಡಿದ್ದು, ಲಿಂಗಸೂಗೂರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 31 ಮಂದಿ ಪ್ರಯಾಣಿಕರನ್ನು ಹೊತ್ತು ರಾಜಹಂಸ ಬಸ್ ರಾಯಚೂರಿನಿಂದ ಬೆಳಗಾವಿ ಕಡೆ ಸಂಚರಿಸುತ್ತಿತ್ತು. ಇದಕ್ಕಿದ್ದಂತೆ ಬಸ್ ಚಾಲಕನಿಗೆ ಹೃದಯಾಘಾತವಾಗಿದೆ. ತೀವ್ರ ಹೃದಯಾಘಾತದಿಂದ ಬಳಲಿದ ಚಾಲಕ ಬಸ್ ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಚಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪರಿಣಾಮ ಬಸ್ ಅಪಘಾತಕ್ಕೀಡಾಗಿದೆ. ಬಸ್ ರಾಯಚೂರಿನಿಂದ ಸುಮಾರು 90 ಕಿಲೋಮೀಟರ್ ದೂರ ಪ್ರಯಾಣಿಸಿದೆ. ಈ ವೇಳೆ ಈ ದುರ್ಘಟನೆ ನಡೆದಿದೆ.