ಇತ್ತೀಚಿನ ಸುದ್ದಿ
ಸಿದ್ದರಾಮಯ್ಯರಿಗೆ ಅಂಬೇಡ್ಕರ್ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ: ಬಸವರಾಜ ಬೊಮ್ಮಾಯಿ ಪ್ರಶ್ನೆ
28/06/2025, 22:05

ಹಾವೇರಿ:(reporterkarnataka.com): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಬೇಡ್ಕರ್ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ ಎಂದು ಹೇಳಬೇಕು. ರಾಜ್ಯದಲ್ಲಿಯೂ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಇತಿಹಾಸದಲ್ಲಿ ಯಾವ ರೀತಿ ತುರ್ತು ಪರಿಸ್ಥಿತಿಯ ಕರಾಳವಾಗಿ ಅಂತ್ಯವಾಗಿತ್ತೊ, ಅದೇ ರೀತಿ ರಾಜ್ಯ ಕಾಂಗ್ರೆಸ್ ಆಡಳಿತವೂ ಅಂತ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ಶ್ರೀ ನೀಲಕಂಠೇಶ್ವರ ಸಭಾಭವನದಲ್ಲಿ “ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್, ರಾಣೆಬೆನ್ನೂರ” ಏರ್ಪಡಿಸಿದ ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ನಾನು ಅನಂತಕುಮಾರ್ ಅವರು ಒಂದೇ ಕ್ಲಾಸ್ನಲ್ಲಿ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆಗ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗಿತ್ತು. ವಿರೋಧ ಪಕ್ಷಗಳ ನಾಯಕರ ಬಂಧನವಾಗಿತ್ತು. ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿತ್ತು. ಹುಬ್ಬಳ್ಳಿ ಧಾರವಾಡದಲ್ಲಿ ಮಾತ್ರ ಆಗಿರಲಿಲ್ಲ. ನಾವು ಅನಂತಕುಮಾರ್ ನಾನು ಸೇರಿ ಆರ್ಟ್, ಸೈನ್ಸ್, ಎಂಜನೀಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಬೇಕೆಂದು ತೀರ್ಮಾನ ಮಾಡಿದೆವು. ಎಲ್ಲ ವಿದ್ಯಾರ್ಥಿಗಳು ಬಸ್ಸಿನಲ್ಲಿ ಬಂದು ಪಿಸಿ ಜಾಬಿನ್ ಕಾಲೇಜ್ ಬಳಿ ಇಳಿದರು. ಪೊಲಿಸರಿಗೆ ಗೊತ್ತಿರಲಿಲ್ಲ. ನಾವು ಪ್ರತಿಭಟನೆ ಮಾಡಿದೆವು. ಆಗ ಐದಾರು ಜನರನ್ನು ಬಂಧಿಸಿದ್ದರು. ಅನಂತ ಕುಮಾರ್ ಅವರನ್ನು ಬಿಡಿಸಲು ಹೋಗಿದ್ದರು. ಅವರನ್ನೂ ಬಂಧಿಸಿದ್ದರು ಎಂದು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವನ್ನು ನೆನಪಿಸಿಕೊಂಡರು.
ನಮಗೆ ರಾಜಕಾರಣ ಗೊತ್ತಿರಲಿಲ್ಲ. ದೇಶ ಅಂದರೆ, ಸ್ವಾತಂತ್ರ್ಯ ಅಂದರೆ ಗೊತ್ತು. ಈ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂದಿದೆ ಅಂತ ಗೊತ್ತಿತ್ತು. ಅದಕ್ಕೆ ದಕ್ಕೆ ಬಂದಿದೆ ಅಂದಾಗ ನಮ್ಮ ರಕ್ತ ಕುದಿಯುತ್ತಿತ್ತು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರ ವಿರುದ್ಧ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಇಂದಿರಾ ಗಾಂಧಿ ಸುಪ್ರೀಂ ಕೊರ್ಟ್ಗೆ ಹೋಗಿದ್ದರು. ಅಲ್ಲಿ ನ್ಯಾ. ಕೃಷ್ಣ ಐಯ್ಯರ ಅವರು ಇಂದಿರಾ ಗಾಂಧಿ ವಿರುದ್ಧ ಅತ್ಯಂತ ಕೆಟ್ಟ ಆದೇಶ ಮಾಡಿತು. ಆ ಆದೇಶ ಜಾರಿಯಾದರೆ ಇಂದಿರಾ ಗಾಂಧಿ ರಾಜೀನಾಮೆ ಕೊಡಲೇಬೇಕಿತ್ತು. ಜೂನ್ 28 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಜಯಪ್ರಕಾಶ ನಾರಾಯಣ, ಆಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಸೇರಿದ್ದರು. ಇಂದಿರಾ ಗಾಂಧಿ ರಾತೋ ರಾತ್ರಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು. ಸಾವಿರಾರು ಜನರು ಜೈಲು ಸೇರಿದ್ದರು. ಎಲ್.ಕೆ. ಆಡ್ವಾಣಿ ಬೆಂಗಳೂರು ಜೈಲಿನಲ್ಲಿ ಇದ್ದರು. ಅಟಲ್ ಬಿಹಾರಿ ವಾಜಪೇಯಿ, ಯಡಿಯೂರಪ್ಪ ಅವರೂ ಜೈಲಿನಲ್ಲಿದ್ದರು. ಒಟ್ಟು 6632 ಕೇಸ್ಗಳನ್ನು ಹಾಕಿದ್ದರು. 4230 ಕೇಸಗಳು ಆರ್ಎಸ್ಎಸ್ ಮೇಲೆ ಹಾಕಲಾಗಿತ್ತು. ಈ ತುರ್ತು ಪರಿಸ್ಥಿತಿಯನ್ನು ತೀವ್ರ ವಿರೋಧ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಹೇಳಿದರು.
*ಕಾಂಗ್ರೆಸ್ ನಲ್ಲಿ ಗುಲಾಮಗಿರಿ:*
ಗುಜರಾತ್ನಲ್ಲಿ ಹಾಸ್ಟೆಲ್ನಲ್ಲಿ ಊಟ ಸರಿ ಇಲ್ಲ ಎಂದು ಚಿಮನ್ ಭಾಯ್ ಪಟೇಲ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ಆರಂಭಿಸಿದರು. ಅವರೆಲ್ಲರೂ ಜಯಪ್ರಕಾಶ್ ನಾರಾಯಣ ಅವರ ಸಂಪೂರ್ಣ ಕ್ರಾಂತಿಗೆ ಬೆಂಬಲ ಕೊಟ್ಟರು. ಇವತ್ತಿನ ಪಧಾನಮಂತ್ರಿಗಳು ಆಗ ಆರ್.ಎಸ್.ಎಸ್ ಪ್ರಚಾರಕರಾಗಿದ್ದರು. ಅವರು ಭೂಗತರಾಗಿ ಹೋರಾಟವನ್ನು ಮಾಡಿದ್ದರು. ಸಾವಿರಾರು ಜನರು ಭೂಗತರಾಗಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. ಆಗ ಇಂದಿರಾ ಇಸ್ ಇಂಡಿಯಾ, ಇಂಡಿಯಾ ಇಸ್ ಇಂದಿರಾ ಅಂತ ಹೇಳುತ್ತಿದ್ದರು. ಕಾಂಗ್ರೆಸ್ನಲ್ಲಿ ಗುಲಾಮಗಿರಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ನಾವು ಭಾರತ ಮಾತಾಕಿ ಜೈ ಎಂದು ಕರೆಯುತ್ತೇವೆ. ಕಾಂಗ್ರೆಸ್ನವರು ಸೋನಿಯಾ ಮಾತಾಕಿ ಜೈ ಎನ್ನುತ್ತಾರೆ. ನಮಗೂ ಕಾಂಗ್ರೆಸ್ನವರಿಗೂ ಅಷ್ಟೇ ವ್ಯತ್ಯಾಸ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಸಂಸದ ಶಶಿ ತರೂರ ಅವರ ಬಗ್ಗೆ ಕೆಲವರಿಗೆ ದೇಶಕ್ಕಿಂತ ಬೇರೆ ವಿಷಯ ಮಹತ್ವ ಎಂದು ಹೇಳಿದ್ದಾರೆ. ನಿಮಗೆ ರಾಹುಲ್ ಗಾಂಧಿ ದೇಶಕ್ಕಿಂತ ಮೊದಲು, ಇದು ಗುಲಾಮಗಿರಿ ಸಂಕೇತ. ಸಿದ್ದರಾಮಯ್ಯ ಅವರು ಮಾತೆತ್ತಿದರೆ ಸಂವಿಧಾನ ಎನ್ನುತ್ತಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ವಿರುದ್ಧ ಹೋರಾಟ ಮಾಡಿದ್ದರು. ಕೇವಲ ಅಧಿಕಾರಕ್ಕಾಗಿ ತಮ್ಮ ಕುರ್ಚಿಗಾಗಿ ತಮ್ಮ ವೈಚಾರಿಕತೆಯನ್ನು ಸ್ವಾಭಿಮಾನ ಬಿಟ್ಟು ಆ ಕುಟುಂಬದ ರಕ್ಷಣೆಗೆ ನಿಂತಿದ್ದಾರೆ. ರಾಹುಲ್ ಗಾಂಧಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಯಾವ ಸಂವಿಧಾನ ಕಗೊಲೆ ಮಾಡಿದ್ದರೋ ಅವರು ಸಂವಿಧಾನದ ಬಗ್ಗೆ ಮಾತನಾಡುತಿದ್ದಾರೆ. 1973 ರಲ್ಲಿ ಕೇಶವಾನಂದ ಭಾರ್ತಿ ಪ್ರಕರಣದಲ್ಲಿ 9 ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನಿಕ ಪೀಠ ಸಂವಿಧಾನದ ಮೂಲ ಸ್ವರೂಪಕ್ಕೆ ಯಾವುದೇ ಬದಲಾವಣೆ ತರಬಾರದು ಎಂದು ಆದೇಶ ಮಾಡಿದೆ. ಆ ಮೇಲೆ ಇಂದಿರಾಗಾಂಧಿ ಸಂವಿಧಾನ ತಿದ್ದು ಪಡಿ ಮೂಲಕ ಜ್ಯಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ್ದಾರೆ. ತುಷ್ಠಿಕರಣ ರಾಜಕಾರಣ ಮಾಡುವ ಮೂಲಕ ಓಟ್ ಬ್ಯಾಂಕ್ ಆಗಿ ಪರಿವರ್ತನ ಮಾಡಿಕೊಳ್ಳುತ್ತಾರೆ. ನಮಗೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಇರಬೇಕು ಎಂದು ಆರ್ಎಸ್ಎಸ್ ಸಹ ಸರಸಂಘಚಾಲಕ ದತ್ತಾತ್ರೆಯ ಹೊಸಬಾಳೆ ಹೇಳಿದ್ದಾರೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಪಧಾನಿ ನರೇಂದ್ರ ಮೋದಿಯವರ ನಿಲುವು ಏನು ಎಂದು ಕೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಂಬೇಡ್ಕರ್ ಅವರ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ ಎಂದು ಹೇಳಬೇಕು ಆಗ್ರಹಿಸಿದರು.
*ಅಘೋಷಿತ ತುರ್ತು ಪರಿಸ್ಥಿತಿ,:*
ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಯಾರಾದರೂ ಕೋಮುವಾದಿ ರೀತಿ ಭಾಷಣ ಮಾಡಿದರೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುವದು ಎಂದು ಹೇಳಿದ್ದಾರೆ. ಕರ್ನಾಟಕವನ್ನು ಪೊಲೀಸ್ ರಾಜ, ಮಾಡಲು ಹೊರಟಿದ್ದೀರಾ, ಅದು ಸಾಧ್ಯವಿಲ್ಲ. ಯಾವಾಗ ರಾಜಶಕ್ತಿ ಮತ್ತು ಪ್ರಜಾಶಕ್ತಿ ನಡುವೆ ಸಂಘರ್ಷ ಅನುತ್ತದೆ ಆಗ ಪ್ರಜಾಪ್ರಭುತ್ತಕ್ಕೆ ಜಯವಾಗಿದೆ. ಇತಿಹಾಸದಲ್ಲಿ ಯಾವ ರೀತಿ ತುರ್ತು ಪರಿಸ್ಥಿತಿ ಕರಾಳವಾಗಿ ಅಂತ್ಯವಾಗಿತ್ತೋ ಅದೇ ರೀತಿ ನಿಮ್ಮ ಆಡಳಿತವೂ ಅಂತ್ಯವಾಗುತ್ತದೆ. ಅಧಿಕಾರದಲ್ಲಿ ಜನಪರ ಕೆಲಸ ಮಾಡಬೇಕು. ಏಕಪಕ್ಷೀಯವಾದ ತುಷ್ಠಿಕರಣದ ರಾಜಕಾರಣ ಅಲ್ಲ ಎಂದು ಹೇಳಿದರು.
*ಮಧ್ಯಂತರ ಚುನಾವಣೆ*
2026ಕ್ಕೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅವರು ಮಾಡಿರುವ ಕೆಟ್ಟ ಆಧಿಕಾರದ ಪಾಪದ ಕೊಡ ತುಂಬಿದೆ, ನಾವು ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಕಳೆದ 11 ವರ್ಷದಲ್ಲಿ ದೇಶದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿರುವ ಶೇಯನ್ನು ಪಧಾನಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ಸಲ್ಲುತ್ತದೆ. 2047ರಲ್ಲಿ ವಿಕಸಿತ ಭಾರತ ಆಗಬೇಕೆಂದರೆ ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಿರಬೇಕು. ಸಂವಿಧಾನ ಬೇರುಗಳು ಗಟ್ಟಿಯಾಗಿರಬೇಕು. ಆ ಕೆಲಸವನ್ನ ನಾವು ನೀವು ಸೇರಿ ಕಳೆದ ಐವತ್ತು ವರ್ಷದಲ್ಲಿ ನಡೆದಿರುವ ಘಟನೆಗಳನ್ನು ಮೆಲಕು ಹಾಕುವ ಕೆಲಸ ಮಾಡಿದ್ದೇವೆ. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ, ವಿಕಸಿತ ಭಾರತದ ಪ್ರಧಾನಿ ಕನಸು ನನಸು ಮಾಡಲು ನಾವೆಲ್ಲ ನಿರಂತರವಾಗಿ ಎಚ್ಚರಿಕೆಯಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ರಾಜ್ಯ ತುರ್ತು ಪರಿಸ್ಥಿತಿ ಸಮಿತಿಯ ಸಂಚಾಲಕರಾದ ಮಹೇಂದ್ರ ಕೌತಾಳ, ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ರಾಮಕೃಷ್ಣ ತುಕಾರಾಮ ತಾಂಬೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.