ಇತ್ತೀಚಿನ ಸುದ್ದಿ
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು ಹರಿದ ಬ್ಲೌಸ್ ತುಂಡು ಎಟಿಎಂ, ಪಾನ್ ಕಾರ್ಡ್?
30/07/2025, 19:38

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ದೂರುದಾರ ಗುರುತಿಸಿದ 13 ಸ್ಪಾಟ್ ಗಳ ಪೈಕಿ 3 ಸ್ಪಾಟ್ ಗಳನ್ನು ಈಗಾಗಲೇ ವಿಶೇಷ ತನಿಖಾ ತಂಡ(ಎಸ್ಐಟಿ) ಉತ್ಖನನ ನಡೆಸಿದರೂ ಯಾವುದೇ ಅಸ್ತಿಪಂಜರದ ಕುರುಹು ಲಭ್ಯವಾಗಿಲ್ಲ ಎನ್ನುವ ಸುದ್ದಿಯ ನಡುವೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಮೊದಲು ದಿನ ಅಗೆದ 1ನೇ ಸ್ಪಾಟ್ ನಲ್ಲಿ ಹರಿದ ರವಕೆಯ ತುಂಡು ತಲಾ ಒಂದು ಎಟಿಎಂ ಹಾಗೂ ಪಾನ್ ಕಾರ್ಡ್ ದೊರೆತ ಬಗ್ಗೆ ಮಾಹಿತಿ ಲಭಿಸಿದೆ.
ಪುರುಷನ ಎಟಿಎಂ ಆದರೆ, ಮಹಿಳೆಯ ಪಾನ್ ಕಾರ್ಡ್ ಲಭಿಸಿದೆ. ಲಕ್ಷ್ಮೀ ಎಂಬ ಹೆಸರಿನ ವಿವಾಹಿತ ಮಹಿಳೆಯ ಪಾನ್ ಕಾರ್ಡ್ ಇದಾಗಿದೆ. ಈ ಕುರಿತು ವಿಚಾರಣೆ ನಡೆಯುತ್ತಿದ್ದಂತೆ ಧರ್ಮಸ್ಥಳದ ಗಂಗೋತ್ರಿ ವಸತಿಗೃಹದ ಸಮೀಪ ಸುಮಾರು 16 ವರ್ಷಗಳ ಹಿಂದೆ ಅಂದರೆ 2009ರಲ್ಲಿ ಲಕ್ಷ್ಮೀ ಎಂಬ ಹೆಸರಿನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಕೇಸ್ ದಾಖಲಾದ ಬಗ್ಗೆ ಮಾಹಿತಿ ಲಭಿಸಿದೆ. ಇದೀಗ ಸ್ಪಾಟ್ ನಂಬರ್ 1ರಲ್ಲಿ ದೊರೆತ ಪಾನ್ ಕಾರ್ಡ್ 2009ರಲ್ಲಿ ಗಂಗೋತ್ರಿ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಲಕ್ಷ್ಮೀ ಎಂಬವರಿಗೆ ಸೇರಿದ್ದೇ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಎಸ್ಐಟಿ ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ನಡುವೆ ಎಸ್ಐಟಿ ಕಳೆದ 20 ವರ್ಷಗಳಿಂದ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರ ಲಿಸ್ಟನ್ನು ಎಸ್ ಐಟಿ ಕೇಳಿದೆ ಎನ್ನಲಾಗಿದೆ.