ಇತ್ತೀಚಿನ ಸುದ್ದಿ
ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ: ಸರ್ವಧರ್ಮ ಗೌರವಿಸುವ ಸರಳ, ಸಜ್ಜನ ವಕೀಲ ಪದ್ಮರಾಜ್ ರಾಮಯ್ಯಗೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಟಿಕೆಟ್
21/03/2024, 22:00

ಮಂಗಳೂರು(reporterkarnataka.com):ಸದಾ ಹಸನ್ಮುಖಿ… ಎಲ್ಲರಲ್ಲೂ ನಗುಮುಖದಿಂದಲೇ ಮಾತನಾಡಿಸುತ್ತ ಸಮಸ್ಯೆ ಆಲಿಸುವ ಸರಳ ಸಜ್ಜನಿಕೆಯ ವ್ಯಕ್ತಿ. ಇವರೇ ಮಂಗಳೂರಿನ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ, ಧಾರ್ಮಿಕ ಮುಖಂಡ ಪದ್ಮರಾಜ್ ರಾಮಯ್ಯ ಅವರು.
ನೇರ ನಡೆನುಡಿಯ ಪದ್ಮರಾಜ್ ಆರ್. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಿಕೊಂಡು ಅದೇ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ ಭಕ್ತಿ ಹೊಂದಿ ಕಿರಿಯ ವಯಸ್ಸಿನಲ್ಲೇ ದೇವಳದ ಬಹು ದೊಡ್ಡ ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರದ ಏಳಿಗೆಗಾಗಿ ಸದಾ ಹಗಲಿರುಳು ದುಡಿಯುತ್ತಿದ್ದಾರೆ. ಧಾರ್ಮಿಕ ಮುಖಂಡನಾಗಿ, ಸಮಾಜ ಸೇವಕನಾಗಿ, ನ್ಯಾಯವಾದಿಯಾಗಿ ಅವರು ತಕ್ಕ ಮಟ್ಟಿಗೆ ನಾಡಿನಾದ್ಯಂತ ಚಿರಪರಿಚಿತರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ರಾಮಯ್ಯರವರು ತನ್ನ ಅಣ್ಣ ಮಂಗಳೂರಿನ ಹೆಸರಾಂತ ಹೃದಯ ರೋಗ ತಜ್ಞ ಡಾ. ಪುರುಷೋತ್ತಮ ಆರ್. ಅವರಂತೆ ಬಾಲ್ಯದಿಂದಲೇ ಪ್ರತಿಭಾನ್ವಿತ.
ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿಎ ಪದವಿಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು. 1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿ ಅವರೊಂದಿಗೆ ಆರಂಭಿಸಿದ್ದರು.
ನಾಲ್ಕು ವರ್ಷಗಳ ಬಳಿಕ ಬಳ್ಳಾಲ್ಬಾಗ್ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್ನ ಸದಸ್ಯರಾದರು. ತಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಶುದ್ಧಹಸ್ತದ, ನೇರ ನಡೆನುಡಿಯ, ಬಿಲ್ಲವ ಸಮಾಜದ ಹೆಮ್ಮೆಯ ನಾಯಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಎಲ್ಲ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ.
*ಕುದ್ರೋಳಿ ದೇವಳದ ಸಖ್ಯ*
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಸಭೆಯಲ್ಲಿ ಆಡಳಿತ ಸಮಿತಿಗೆ ಹೊಸ ಸದಸ್ಯರ ಸೇರ್ಪಡೆ ಬಗೆಗಿನ ಚರ್ಚೆ ನಡೆಯುತ್ತಿದ್ದ ಸಂದರ್ಭ ಪ್ರಸ್ತುತ ಇರುವ ಸದಸ್ಯರಿಗಿಂತ ಅತೀ ಕಿರಿಯ ವಯಸ್ಸಿನ ಪದ್ಮರಾಜ್ ಆರ್. ಹೆಸರನ್ನು ಹಿರಿಯರು ಸೂಚಿಸಿದಾಗ ತಾನು ಈ ಹುದ್ದೆ ನಿಭಾಯಿಸಬಲ್ಲೆನೇ ಎಂಬ ಸಂಶಯ ಹಾಗೂ ಗೊಂದಲ ಪದ್ಮರಾಜ್ರನ್ನು ಆವರಿಸಿದ ಸಂದರ್ಭ ತನ್ನ ಹೆಸರನ್ನು ಸೂಚಿಸಿದ ಅಲ್ಲಿದ್ದ ಹಿರಿಯರು ಇದು ನಿನಗೆ ಸಿಕ್ಕಿರುವ ಸುಯೋಗ, ಶ್ರೀ ಗೋಕರ್ಣನಾಥ ಹಾಗೂ ಗುರುಗಳ ಆಶೀರ್ವಾದದಿಂದ ಎಲ್ಲ ಸುಗಮವಾಗಿ ಸಾಗುವುದು ಎಂದು ಧೈರ್ಯ ನೀಡಿದುದರಿಂದ ಅವರಿಗೆ ತನ್ನ ಮೇಲಿದ್ದ ನಂಬಿಕೆಗೆ ಗೌರವ ನೀಡಿ ಮರು ಮಾತಾಡದೆ ಈ ಹುದ್ದೆಯನ್ನು ಒಪ್ಪಿಕೊಂಡರು. 25 ವರ್ಷದಿಂದ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಬಿ.ಜನಾರ್ದನ ಪೂಜಾರಿಯವರ ಅಪ್ಪಟ ಅನುಯಾಯಿಯಾಗಿರುವ ಪದ್ಮರಾಜ್ ರಾಮಯ್ಯ ಅವರು ದೇವಸ್ಥಾನಗಳು ಸಮಾಜಮುಖಿ ಚಟುವಟಿಕೆಗಳಲ್ಲೂ ಮುಂದೆ ಬರಬೇಕೆಂದು ತೋರಿಸಿಕೊಟ್ಟವರು. ಇಡೀ ನವರಾತ್ರಿ ಉತ್ಸವ ವಿಶ್ವ ಪ್ರಸಿದ್ಧಿ ಪಡೆಯಲು ಇವರ ಶ್ರಮವೂ ಪ್ರಮುಖವಾದುದು ಎನ್ನುವುದರಲ್ಲಿ ತಪ್ಪಾಗಲಾರದು.
*ಬಡವರ ಕಣ್ಣೀರೊರೆಸುವ ಕಾರ್ಯ:* ಕೊರೊನಾ ಮಹಾಮಾರಿಯಿಂದಾಗಿ 40 ದಿನಗಳ ಲಾಕ್ಡೌನ್ ಸಂದರ್ಭ ಬಡವರ ಪಾಲಿನ ಕಣ್ಣೊರೆಸುವ ದೇವರಾಗಿ ಕಂಡು ಬಂದರು. ಬಿ.ಜನಾರ್ದನ ಪೂಜಾರಿಯವರ ಆದೇಶದಂತೆ ಈ ಸಂದರ್ಭ ದಿನಂಪ್ರತಿ ದೇವಸ್ಥಾನ ವತಿಯಿಂದ ಸುಮಾರು ಒಂದು ಸಾವಿರ ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನಕ್ಕೆ ಸಹಕಾರ ನೀಡಿದ್ದರು. ಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗಿದ್ದರು. ನಿಜಕ್ಕೂ ಇದು ಅವರಿಗೆ ಬಡವರ ಬಗೆಗಿನ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇಷ್ಟೇ ಅಲ್ಲದೆ ಪದ್ಮರಾಜ್ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 300 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್ಡೌನ್ ಸಂದರ್ಭದಲ್ಲೂ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸುವ ಮೂಲಕ ನೊಂದವರ ಪಾಲಿಗೆ ಕಾಮಧೇನುವಾದವರು.
*ಧರ್ಮದ ದಾರಿಯೊಂದೇ ಮಾರ್ಗ:* ಮಧ್ಯಮ ಕುಟುಂಬದಲ್ಲಿ ಜನಿಸಿದರೂ ಅವರ ಹೆತ್ತವರು ತಮ್ಮ ಮೂರು ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಸದುದ್ದೇಶ ಇಟ್ಟುಕೊಂಡು ಉತ್ತಮ ಶಿಕ್ಷಣ ನೀಡಿದಲ್ಲದೆ, ಸತ್ಯ ಧರ್ಮದ ದಾರಿಯಲ್ಲಿ ಗುರುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗುವಂತೆ ಮತ್ತೆ ಮತ್ತೆ ಹೇಳಿಕೊಟ್ಟಿದ್ದಾರೆ. ಅದರಂತೆ ಮೂವರೂ ಮಕ್ಕಳನ್ನು ರಾಮಯ್ಯ ದಂಪತಿ ಬೆಳೆಸಿದ್ದಾರೆ. ಹಾಗೆಯೇ ಬಿ.ಜನಾರ್ದನ ಪೂಜಾರಿಯವರ ಒಳ್ಳೆಯ ಕಾರ್ಯಗಳನ್ನು ನೋಡಿ ಅವರಂತೆಯೇ ಸಮಾಮುಖಿಸೇವೆ ಮಾಡಬೇಕು ಎನ್ನುವ ಚಿಂತನೆಯೂ ಪದ್ಮರಾಜ್ ಅವರಲ್ಲಿ ಬೆಳೆಯಿತು. ಈ ರೀತಿ ಶ್ರೀ ಗೋಕರ್ಣನಾಥನ ಆಶೀರ್ವಾದ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರೇರಣೆ, ಅಪ್ಪ ಅಮ್ಮ ಹಾಗೂ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಂತೆ ಸಮಾಜಸೇವೆ ಮಾಡುತ್ತ ಬರುತ್ತಿದ್ದಾರೆ ಪದ್ಮರಾಜ್. ಇವರ ಸಹೋದರ ಆರ್.ಪುರುಷೋತ್ತಮ್ ಹೃದ್ರೋಗ ತಜ್ಞರಾಗಿದ್ದು ಪ್ರಸ್ತುತ ಎ.ಜೆ.ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಅಣ್ಣ ಆರೋಗ್ಯ ಸೇವೆಯತ್ತ ಗಮನಹರಿಸಿದರೆ, ತಮ್ಮ ಸದಾ ಸಮಾಜಮುಖಿ ಚಿಂತನೆಯೊಂದಿಗೆ ಬಡವರ ಬಗ್ಗೆ ಕಾಳಜಿ ವಹಿಸುತ್ತಿರುವುದನ್ನು ಶ್ಲಾಘನೀಯವಾದುದು.
*ನೊಂದ ಮನಸ್ಸುಗಳಿಗೆ ಆಸರೆಯಾದ ಪದ್ಮಣ್ಣ:*
ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ ಉಂಡು… ಎಂದು ಪದ್ಮರಾಜ್ ನೀಡಿದ ಭರವಸೆಯ ಮಾತಿನಂತೆ ಆಟೋ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರಿಗೆ ಸುಸಜ್ಜಿತವಾಗಿ ಮನೆ ನವೀಕರಣಗೊಳಿಸುವ ಮೂಲಕ ಇಡೀ ಕುಟುಂಬ ಸದಸ್ಯರ ಮೊಗದಲ್ಲಿ ವಿಶ್ವಾಸದ ಬೆಳಕು ಮೂಡಿಸಿದರು.. ಇಂತಹ 4-5 ಮಂದಿ ಬಡವರಿಗೆ ಜಾತಿಮತದ ತಾರತಮ್ಯ ನೋಡದೆ ಸುಸಜ್ಜಿತವಾಗಿ ಮನೆ ನಿರ್ಮಿಸಿಕೊಡುವ ಮೂಲಕ ನೊಂದವರಿಗೆ ಆಸರೆಯಾದವರು. ಗುರುಬೆಳದಿಂಗಳು ಫೌಂಡೇಶನ್ ಮೂಲಕ ಆರೋಗ್ಯ, ಆಸರೆ, ಶಿಕ್ಷಣ ಎನ್ನುವ ಧ್ಯೇಯದೊಂದಿಗೆ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಬಡವರ ಸೇವೆಗೆ ವಿನಿಯೋಗಿಸುವ ಮೂಲಕ ನೊಂದ ಮನಸ್ಸಿನಲ್ಲಿ ಗೆಲುವಿನ ನಗೆ ಬೀರಲು ಕಾರಣಕರ್ತರಾದರು.
*ಸಮಾಜಮುಖಿ ಸೇವೆಗೆ ಗೌರವ:* ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು, ಜೆ.ಪಿ.ಪ್ರತಿಷ್ಠಾನ ದ ಕ ಜಿಲ್ಲಾ ಗೌರವಸಂಚಾಲಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಅನೇಕ ಸಂಘ ಸಂಸ್ಥೆಗಳಿಂದ ಇವರ ಸಮಾಜಮುಖಿ ಸೇವೆಗೆ ಗೌರವ ಸಂದಿದೆ. ನಮ್ಮ ಕುಡ್ಲ ವಾಹಿನಿಯು ಪ್ರತಿ ವರ್ಷ ನೀಡುವ ನಮ್ಮ ಕುಡ್ಲ ಪ್ರಶಸ್ತಿಗೂ ಬಾಜನರಾಗಿದ್ದಾರೆ.
*ಬಡವರಿಗೆ ಉಚಿತ ಸೇವೆ:*
ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ಸಮಾಜಕ್ಕೊಬ್ಬ ಮಾದರಿ ವಕೀರಾಗಿ ಮಿಂಚುತ್ತಿದ್ದಾರೆ.
*ಬೆಳದಿಂಗಳೆಂಬ ಕನಸು ನನಸು:* ನಾವಿದ್ದಷ್ಟು ದಿನ ಇನ್ನೊಬ್ಬರ ಸೇವೆಯಲ್ಲಿ ತೊಡಗಬೇಕು ಎನ್ನುವ ಬ್ರಹ್ಮಶ್ರೀ ನಾರಾಯಣಗುರುಗಳು ಹಾಗು ತಮ್ಮ ಹೆತ್ತವರ ನುಡಿಯಂತೆ ಪದ್ಮರಾಜ್ರವರ ಕನಸಿನ ಯೋಜನೆ ಸಾಕಾರಗೊಂಡು ಒಂದು ವರ್ಷ ಪೂರೈಸಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶೀರ್ವಾದ, ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ತ್ವಾದರ್ಶಗಳ ಬೆಳಕಿನಲ್ಲಿ, ಜನಾರ್ದನ ಪೂಜಾರಿಯವರ ಮಾರ್ಗದರ್ಶನ, ದಿ.ಜಯ ಸಿ.ಸುವರ್ಣರ ಆಶೋತ್ತರಗಳ ಸ್ಫೂರ್ತಿಯ ನೆಲೆಯಲ್ಲಿ, ಹಿರಿಯರ ಜತೆ ಕ್ರಿಯಾಶೀಲ ಯುವಕ ತಂಡ ಕಟ್ಟಿಕೊಂಡು ಜಾತಿ- ಮತ- ಪಕ್ಷ ಭೇದ ರಹಿತವಾಗಿ ಸಮಾಜ ಸೇವೆಗೆ ಕಟಿಬದ್ಧರಾಗುವ ನಿಟ್ಟಿನಲ್ಲಿ, ಶಿಕ್ಷಣ, ಆರೋಗ್ಯ, ಆಸರೆ ಎಂಬ ಮೂರು ಮುಖ್ಯ ಧ್ಯೇಯಗಳೊಂದಿಗೆ ಗುರುಬೆಳದಿಂಗಳು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ ಬದುಕಿನ ನಡೆ ಜ್ಞಾನದ ಹಾದಿಯಾಗಲು ಸಹಾಯ ನೀಡುವ ಶೈಕ್ಷಣಿಕ ನಿಧಿ, ರೋಗಿಗಳಿಗೆ ಸಂಜೀವಿನಿಯಾಗಿ ಆರೋಗ್ಯ ನಿಧಿ, ನೊಂದವರಿಗೆ ಕರುಣಾಮಯಿಯಾಗಿ ಆಸರೆ ನಿಧಿಯನ್ನು ಅರ್ಹರಿಗೆ ತಲುಪಿಸುವ ಯೋಜನೆಯೇ ಗುರು ಬೆಳದಿಂಗಳು. ಈಗಾಗಲೇ ಗುರುಬೆಳದಿಂಗಳು ಫೌಂಡೇಶನ್ ಮೂಲಕ ನೊಂದವರಿಗೆ ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ಮದುವೆ, ನೂರಾರು ರೋಗಿಗಳಗೆ ಔಷಧಕ್ಕೆ ನೆರವು, ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿ ಫೌಂಡೇಶನ್ ಮೂಲಕ ಲಕ್ಷಾಂತರ ರೂಪಾಯಿ ಸಹಾಯಹಸ್ತ ನೀಡಲಾಗಿದೆ.
*ಮುಂಚೂಣಿ ಹೋರಾಟಗಾರ:* ಪದ್ಮರಾಜ್ರವರು ನಾರಾಯಣ ಗುರುಗಳ ಆದರ್ಶದ ಬಗ್ಗೆ ಒಲವು ಹೊಂದಿದವರು ಮತ್ತು ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದವರು. ಇತ್ತೀಚೆಗೆ ನಡೆದ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ ಮೊದಲಿಗರು. ಇವರ ಮುಂದಾಳತ್ವದಲ್ಲಿ ಗುರುಗಳಿಗೆ ಆದ ಅವಮಾನದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದ್ದರು. ಇತ್ತೀಚೆಗೆ 10ನೇ ತರಗತಿಯ ಪಠ್ಯಪುಸ್ತಕದ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಠ್ಯ ಕೈಬಿಟ್ಟದ್ದರ ವಿರುದ್ಧ ಮೊದಲು ಖಂಡನೆ ವ್ಯಕ್ತಪಡಿಸಿ, ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಗುರುಗಳ ಪಠ್ಯವನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದರು. ಜಾತಿ, ಮತ, ಭೇದವಿಲ್ಲದೆ ನೊಂದವರ ಪರವಾಗಿ ನಿಂತು, ಅನ್ಯಾಯವನ್ನು ಖಂಡಿಸಿ ಸದಾ ನೊಂದವರ ಪರವಾಗಿ ನಿಲ್ಲುವ ಮೂಲಕ ಎಲ್ಲ ಸಮಾಜದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ ನಮ್ಮ ಪದ್ಮಣ್ಣ.
*ಯುವಕರ ಬಗ್ಗೆ ಕಾಳಜಿ:*
ಯುವಕರು ವಿದ್ಯಾವಂತರಾಗಬೇಕು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸದಾ ಯುವಜನತೆ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಸಮಾಜದಲ್ಲಿ ಯಾವುದೇ ಅಂತರ್ ಕಲಹವಿದ್ದರೂ ಸಮಾಜದ ಬಗ್ಗೆ ಅಕ್ಕರೆಯಿರುವ ವಕೀಲರಾದ ಪದ್ಮರಾಜ್ ಬಳಿ ಊರ ಪರವೂರ ಸಮಾಜ ಬಾಂಧವರು ದೂರನ್ನು ತರುವುದು ಸಾಮಾನ್ಯ. ಈ ವೇಳೆ ಗೋಕರ್ಣನಾಥನಲ್ಲಿ ಪ್ರಾರ್ಥಿಸಿ ಎರಡೂ ಪಕ್ಷದ ದೂರನ್ನು ಆಲಿಸಿ ಸೂಕ್ಷ್ಮವಾಗಿ ಪರಿಹರಿಸಿ ಎಲ್ಲರೂ ಅನ್ಯೋನ್ಯತೆ ಯಿಂದ ಬಾಳುವಂತೆ ಮಾಡುವ ಚಾಣಾಕ್ಷತೆ ಉಳ್ಳವರು.
*ಮನುಷ್ಯ ಒಳ್ಳೆಯವನಾದರೆ ಸಾಕು:* ನಾರಾಯಣಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಪ್ರತಿಯೊಂದು ಜಾತಿಯವರನ್ನು ಸಮಾನವಾಗಿ ನೋಡಿಕೊಳ್ಳುತ್ತಾ, ಜಾತಿ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಜಾತಿ, ಮತ, ಪಂಗಡ ನೋಡದೆ ನೊಂದವರ ಪಾಲಿನ ಕಾಮಧೇನುವಾಗುತ್ತಾರೆ ನಮ್ಮ ಪದ್ಮರಾಜಣ್ಣ. ಅನೇಕ ಮಂದಿ ಕುಡಿತ ಅಥವಾ ಇನ್ನಿತರ ಮಾದಕ ವ್ಯಸನಿಗಳನ್ನು ತಮ್ಮ ಬಳಿ ಕರೆಸಿಕೊಂಡು ಅವರ ಮನಪರಿವರ್ತನೆಗೊಳಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳುವಂತೆ ಮಾಡಿದ ಕೀರ್ತಿ ಇವರದ್ದು. ತಾನು ದುಡಿದ ಹಣದಲ್ಲೂ ತನಗೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವಂತೆ ದುಡಿಮೆಯ ಹಣವನ್ನು ಜಾತಿ ಮತ ಭೇದ ನೋಡದೆ ನೊಂದವರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಇವರ ಸೇವಾ ಮನೋಭಾವಕ್ಕೆ ಉತ್ತಮ ನಿದರ್ಶನ.
*ಸಂಘ ಸಂಸ್ಥೆಗಳ ಪ್ರೀತಿ:*
ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾಗಿದ್ದಾರೆ. ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾಪನ ಬೆಂಗಳೂರು ಇದರ ದ.ಕ. ಜಿಲ್ಲಾ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸದಾ ಕ್ರೀಯಾಶೀಲತೆಯಲ್ಲಿದ್ದಾರೆ.