ಇತ್ತೀಚಿನ ಸುದ್ದಿ
ಮದುವೆ ವಿಷಯ ಮುಚ್ಚಿಟ್ಟು ವಂಚನೆ: ಲಿವ್-ಇನ್ ಗೆಳತಿಯ ಕತ್ತಿಗೆ ವೈಯರ್ ಸುತ್ತಿ ಕೊಂದ ಕೊಡಗು ಮೂಲದ ವಿವಾಹಿತ
15/03/2026, 16:01
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸಿಲಿಕಾನ್ ಸಿಟಿಯ ವರ್ತೂರಿನಲ್ಲಿ ಭಯಾನಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ಮದುವೆಯ ಸತ್ಯವನ್ನು ಮುಚ್ಚಿಟ್ಟು, ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದ ಯುವತಿಯನ್ನು ಆಕೆಯ ಗೆಳೆಯನೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಕೊಡಗು ಮೂಲದ 23 ವರ್ಷದ ರಂಜಿತಾ ಈ ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
*ಪ್ರೀತಿಯ ಹೆಸರಿನಲ್ಲಿ ವಂಚನೆ:*
ಕೊಡಗಿನ ಪೊನ್ನoಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ರಂಜಿತಾಳಿಗೆ, ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಯಶವಂತ್ ಅಯ್ಯಪ್ಪ ಎಂಬಾತ ಪರಿಚಯವಾಗಿತ್ತು. ಬಳಿಕ ಇಬ್ಬರ ಪ್ರೀತಿಯಾಗಿತ್ತು. ಕಳೆದ ಕೆಲವು ಸಮಯದಿಂದ ಇವರಿಬ್ಬರು ವರ್ತೂರಿನ ಬಾಡಿಗೆ ಮನೆಯೊಂದರಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು. ಅಯ್ಯಪ್ಪ ತನ್ನನ್ನು ಮದುವೆಯಾಗುತ್ತಾನೆ ಎಂದು ರಂಜಿತಾ ನಂಬಿದ್ದರು. ಆದರೆ ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿತ್ತು ಎಂಬ ಸತ್ಯ ರಂಜಿತಾಳಿಗೆ ತಿಳಿದಿರಲಿಲ್ಲ.
ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿರುವ ವಿಷಯ ರಂಜಿತಾಳಿಗೆ ಇತ್ತೀಚೆಗೆ ತಿಳಿದು ಬಂದಿದೆ. ಈ ವಿಚಾರವಾಗಿ ಇಬ್ಬರ ನಡುವೆ ಮನೆಯಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ನನಗೆ ಮೋಸ ಮಾಡಿ ಯಾಕೆ ನನ್ನ ಜೊತೆ ಇದ್ದೀಯಾ ? ಎಂದು ರಂಜಿತಾ ಪ್ರಶ್ನಿಸಿದಾಗ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದೆ.
*ಕತ್ತು ಬಿಗಿದು ಭೀಕರ ಹತ್ಯೆ:*
ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಅಯ್ಯಪ್ಪ, ಮನೆಯಲ್ಲಿದ್ದ ಎಲೆಕ್ಟ್ರಿಕಲ್ ವೈಯರ್ನಿಂದ ರಂಜಿತಾಳ ಕತ್ತನ್ನು ಬಿಗಿದಿದ್ದಾನೆ. ಯುವತಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡಿದರೂ ಆರೋಪಿ ವೈಯರ್ ಬಿಗಿದು ಆಕೆಯನ್ನ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ವರ್ತೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ರಂಜಿತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅಯ್ಯಪ್ಪನನ್ನು ಬಂಧಿಸಿದ್ದಾರೆ.












