ಇತ್ತೀಚಿನ ಸುದ್ದಿ
ಚಿತ್ರದುರ್ಗ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮೂವರು ರಿಸರ್ವ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ದುರ್ಮರಣ
15/03/2026, 15:57
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ರಿಸರ್ವ್ ಪೊಲೀಸ್ ಸಬ್ಇನ್ಸ್ ಪೆಕ್ಟರ್ಗಳು (ಆರ್ಎಸ್ಐ) ಮೃತಪಟ್ಟಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಸಾಣೆಕೆರೆ ಬಳಿ ಇಂದು ಬೆಳಗ್ಗೆ ನಡೆದಿದೆ.
ಕಾರಟಗಿ ಮೂಲದ ಮಂಜುನಾಥ್ ದಾರಿಮಣಿ (32), ರಾಯಚೂರಿನ ಅಂಬರೀಶ್ ಹಾಗೂ ತೀರ್ಥಳ್ಳಿಯ ಸಚ್ಚಿನ್ ಮೃತಪಟ್ಟ ದುರ್ದೈವಿಗಳು. ಬೆಂಗಳೂರಿನಲ್ಲಿ ರಿಸರ್ವ್ ಪೊಲೀಸ್ ಇಲಾಖೆಯಲ್ಲಿ ಸಬ್ಇನ್್ಸಪೆಕ್ಟರ್ಗಳಾಗಿ ಮೂವರು ಸೇವೆ ಸಲ್ಲಿಸುತ್ತಿದ್ದು, ಮದುವೆಗೆಂದು ಬಳ್ಳಾರಿಗೆ ಕಾರಿನಲ್ಲಿ ಐವರು ತೆರಳುತ್ತಿದ್ದಾಗ ಮುಂಜಾನೆ 7.50 ರ ಸುಮಾರಿನಲ್ಲಿ ಶ್ರೀರಂಗಪಟ್ಟಣ ಬೀದರ್ ರಾಷ್ಟ್ರೀಯ ಹೆದ್ದಾರಿಯ ಸಾಣೆಕೆರೆ ಗೇಟ್ ಬಳಿ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಈ ದುರಂತ ಸಂಭವಿಸಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಈಶ್ವರ್ ಹಾಗೂ ಮಹಾಂತೇಶ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಕೆಳಗಡೆ ಕಾರು ಸಿಲುಕಿಕೊಂಡಿದ್ದು, ಸುಮಾರು ದೂರ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸುದ್ದಿ ತಿಳಿದ ಕೂಡಲೇ ಚಳ್ಳಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.













