ಇತ್ತೀಚಿನ ಸುದ್ದಿ
ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ತಪ್ಪು ಯಾರೇ ಮಾಡಿದರೂ ಶಿಕ್ಷೆಯಾಗಲೇ ಬೇಕು: ಶರಣ್ ಪಂಪ್ ವೆಲ್
21/09/2023, 19:56

ಮಂಗಳೂರು(reporterkarnataka.com):ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಯಾರು ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಚೈತ್ರಾ ಕುಂದಾಪುರ ಚೆನ್ನಾಗಿ ಭಾಷಣ ಮಾಡುತ್ತಾಳೆ ಎಂದು ನಮ್ಮ ಕಾರ್ಯಕ್ರಮಕ್ಕೆ ಕರೆಯುತ್ತಿದ್ದದ್ದು ಹೌದು. ಆದರೆ ಆಕೆಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದೂ ಪರಿಷತ್ ವಿಶ್ವಶ್ರೀಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚೈತ್ರಾ ನಮ್ಮ ಸಂಘಟನೆಯಲ್ಲಿ ಇದ್ದಾಳೆ ಎಂದು ಯಾರು ಹೇಳಿದ್ದು..? ಚೈತ್ರಾ ಕುಂದಾಪೂರಳಿಗೂ ನಮಗೂ ಸಂಬಂಧವಿಲ್ಲ ಎಂದರು.
ಇಂತಹ ಪ್ರಕರಣಗಳಿಗೆ ವಿಶ್ಚ ಹಿಂದೂ ಪರಿಷತ್, ಭಜರಂಗ ದಳ ಬೆಂಬಲ ನೀಡಲ್ಲ. ಇನ್ನು ಈ ಕುರಿತು ನನ್ನತ್ರ ಗುರುಪುರ ಸ್ವಾಮೀಜಿ ಮಾತನಾಡಿದ್ದರು.
ಆಗ ನಾನು ನಿಮ್ಮ ತಪ್ಪು ಇಲ್ವಲ್ಲ ಎಂದು ಕೇಳಿದ್ದೆ ಎಂದು ಶರಣ್ ನುಡಿದರು.
ಭಜರಂಗದಳ ಮತ್ತು ವಿಎಚ್ ಪಿ ನೇತೃತ್ವದಲ್ಲಿ ಸೆಪ್ಟೆಂಬರ್25 ರಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ನಡೆಯಲಿದೆ. ಸನಾತನ ಧರ್ಮವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪೂರ್ವಜರ ಶೌರ್ಯ, ಪರಾಕ್ರಮ ಬಲಿದಾನಗಳನ್ನು ನೆನಪಿಸುವ ಕಾರ್ಯ ಮಾಡಬೇಕಾಗಿದೆ. ರಥಯಾತ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೋಗುತ್ತದೆ. ಸೆಪ್ಟೆಂಬರ್ 25 ಕ್ಕೆ ಚಿತ್ರದುರ್ಗದಲ್ಲಿ ರಥಯಾತ್ರೆ ಉದ್ಘಾಟನೆಗೊಳ್ಳಲಿದೆ. ಅಕ್ಟೋಬರ್ 10 ಕ್ಕೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಳ್ಳಲಿದೆ ಎಂದು ಅವರು ವಿವರ ನೀಡಿದರು.
ಭಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ. ಭಜರಂಗದಳ ಸಮಾಜ ವಿರೋಧಿ ಕೆಲಸ ಮಾಡಿಲ್ಲ. ಒಂದು ವರ್ಷದ ಒಳಗಡೆ ಐದು ಸಾವಿರ ಭಜರಂಗದಳದ ಘಟಕ ನಿರ್ಮಾಣ ಮಾಡುತ್ತೇವೆ ಎಂದರು.