ಇತ್ತೀಚಿನ ಸುದ್ದಿ
ಸಿಸಿಬಿ ಕಾರ್ಯಾಚರಣೆ: ದರೋಡೆಗೆ ಸಂಚು ರೂಪಿಸುತ್ತಿದ್ದ 3 ಮಂದಿ ಆರೋಪಿಗಳ ಬಂಧನ; 25.90 ಲಕ್ಷ ಮೌಲ್ಯದ ಸೊತ್ತು ವಶ
10/06/2024, 12:37

ಮಂಗಳೂರು(reporterkarnataka.com): ನಗರದ ಹೊರವಲಯದ ಉಳ್ಳಾಲ ಮುಕ್ಕಚ್ಚೇರಿ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಸ್ಥರನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮುಕ್ಕಚರಿಯ ಮುಹಮ್ಮದ್ ಸಮೀರ್ ಅಲಿ ಅಲಿಯಾಸ್ ಕಡಪರ ಸಮೀರ್(33), ಉಳ್ಳಾಲ ಬೋಲಿಯಾರ್ ಮೊಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರು ಮನ್ಸೂರು(30) ಹಾಗೂ ಕೊಣಾಜೆ ಮಲಾರದ ಮೊಹಮ್ಮದ್ ನೌಷಾದ್(30) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಮಾರಾಕಾಯುಧಗಳಾದ ತಲವಾರು-1, ಚೂರಿ-1, ಮೊಬೈಲ್ ಫೋನುಗಳು-3 ಹಾಗೂ KL -60-R-9755 ಜೀಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 25,90,000/ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ.ಆರೋಪಿಗಳ ಪೈಕಿ ಮುಹಮ್ಮದ್ ಸಮೀರ್ ಅಲಿ ಅಲಿಯಾಸ ಕಡಪರ ಸಮೀರ್ ಎಂಬಾತನು ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಯತ್ನ, ಜೀವ ಬೆದರಿಕೆ ಪ್ರಕರಣ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಇಲ್ಯಾಸ್ ಕೊಲೆ ಪ್ರಕರಣ, ಫಳ್ನೀರ್ ನ ಶಾಪ್ ವೊಂದರಲ್ಲಿ ನಡೆದ ಶೂಟ್ಔಟ್ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆ ಯಲ್ಲಿ ದಾಖಲಾದ ಜೀವ ಬೆದರಿಕೆ ಪ್ರಕರಣ ಹೀಗೆ ಒಟ್ಟು 7 ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಇನ್ನೋರ್ವ ಆರೋಪಿ ಮೊಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್ ಎಂಬಾತನ ವಿರುದ್ಧ ಈ ಹಿಂದೆ ಕೊಣಾಜೆ ಠಾಣೆಯಲ್ಲಿ ದರೋಡೆ, ಹಲ್ಲೆ ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಫಳ್ನೀರ್ ಶೂಟ್ಔಟ್ ಪ್ರಕರಣ, ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಭಾಗಿರುತ್ತಾನೆ. ಆರೋಫಿ ಮೊಹಮ್ಮದ್ ನೌಷದ್ ಎಂಬಾತನು ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಭಾಗಿರುತ್ತಾನೆ.
ಆರೋಪಿಗಳ ಪತ್ತೆ ಕಾರ್ಯವನ್ನು ಮಂಗಳೂರು ನ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ಸುದೀಪ್ ಎಂ ವಿ, ಶರಣಪ್ಪ ಎಸ್ ಭಂಡಾರಿ ಮತ್ತು ಸಿಬ್ಬಂದಿಯವರು ನಡೆಸಿದ್ದಾರೆ.