ಇತ್ತೀಚಿನ ಸುದ್ದಿ
ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ
02/02/2026, 18:17
ತಿರುವನಂತಪುರಂ(reporterkarnataka.com): ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣವು ಈಗ ರಾಷ್ಟ್ರಮಟ್ಟದ ವಿವಾದವಾಗಿ ಮಾರ್ಪಟ್ಟಿದೆ. ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಗ್ರಹಿಸಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ರಾಯ್ ಅವರ ಸಾವು ನಾಗರಿಕ ಸಮಾಜ ಮತ್ತು ಉದ್ಯಮ ರಂಗವನ್ನು ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಸಾವನ್ನು ದೇಶದ ತೆರಿಗೆ ಆಡಳಿತದ ಮೇಲಿನ ಕಪ್ಪು ಚುಕ್ಕೆ ಎಂದು ವಿಜಯನ್ ಬಣ್ಣಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿಯ ಸಂದರ್ಭದಲ್ಲಿ ಪಾಲಿಸಬೇಕಾದ ಕನಿಷ್ಠ ಶಿಷ್ಟಾಚಾರಗಳನ್ನು ಗಾಳಿಗೆ ತೂರಿದ್ದಾರೆ. ವರದಿಗಳ ಪ್ರಕಾರ, ಐಟಿ ಪರಿಶೀಲನೆ ನಡೆಯುತ್ತಿದ್ದಾಗಲೇ ರಾಯ್ ಅವರು ಪಕ್ಕದ ಕೋಣೆಗೆ ತೆರಳಿ ತಮ್ಮ ಪರವಾನಗಿ ಪಡೆದ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ತನಿಖೆ ವೇಳೆಯೇ ಒಬ್ಬ ಉದ್ಯಮಿ ಪಿಸ್ತೂಲಿನಿಂದ ಶೂಟ್ ಮಾಡಿಕೊಳ್ಳಲು ಹೇಗೆ ಸಾಧ್ಯವಾಯಿತು? ಇದು ಭದ್ರತಾ ವ್ಯವಸ್ಥೆಯ ಗಂಭೀರ ಲೋಪವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಿ.ಜೆ. ರಾಯ್ ಅವರ ಈ ಹಠಾತ್ ಸಾವು ಕೇರಳ ಮತ್ತು ಕರ್ನಾಟಕದ ಉದ್ಯಮ ವಲಯದಲ್ಲಿ ಆತಂಕ ಮೂಡಿಸಿದೆ. ಒಬ್ಬ ಯಶಸ್ವಿ ಉದ್ಯಮಿಯನ್ನು ಈ ಮಟ್ಟದ ನಿರ್ಧಾರಕ್ಕೆ ತಳ್ಳಿದ ಸಂದರ್ಭಗಳೇನು ಎಂಬುದನ್ನು ಪತ್ತೆಹಚ್ಚಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆಯಾಗಬೇಕು ಎಂದು ಕೇರಳ ಸರ್ಕಾರ ಒತ್ತಾಯಿಸಿದೆ.












