ಇತ್ತೀಚಿನ ಸುದ್ದಿ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಕೊಡಗು ಮೂಲದ ಓರ್ವ ಆರೋಪಿಗೆ ಜಾಮೀನು
26/03/2026, 18:56
ಮಂಗಳೂರು(reporterkarnataka.com): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ರಿಯಾಝ್ ಎಂಬಾತನಿಗೆ ಜಾಮೀನು ಮಂಜೂರಾಗಿದೆ.
2022ರ ಜುಲೈ 26ರಂದು ಬೆಳ್ಳಾರೆಯ ತನ್ನ ಅಕ್ಷಯ್ ಚಿಕನ್ ಸೆಂಟರ್ ನಿಂದ ಹೊರಬಂದು ಮನೆಗೆ ಹೊರಟಿದ್ದ ಪ್ರವೀಣ್ ನೆಟ್ಟಾರ್ ಮೇಲೆ ಆರೋಪಿಗಳು ಮಾರಾಕಾಸ್ತ್ರದಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 26 ಮಂದಿಯನ್ನು ಎನ್ಐಎ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಈ ಪ್ರಕರಣದ 26ನೇ ಆರೋಪಿಯಾಗಿರುವ ಕೊಡಗು ಸೋಮವಾರಪೇಟೆ ಮೂಲದ ರಿಯಾಝ್ ಎಂಬಾತನಿಗೆ ಜಾಮೀನು ಮಂಜೂರಾಗಿದೆ.
ಈತ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ ಹಿನ್ನೆಲೆಯಲ್ಲಿ ಬಂಧಿಯಾಗಿದ್ದ. ಮುಸ್ತಫಾ ಪೈಚಾರ್ ಈ ಕೃತ್ಯದ ಮುಖ್ಯ ರೂವಾರಿ ಆಗಿದ್ದ ಎಂದು ಎನ್ಐಎ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿತ್ತು. ಈತನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಂಧಿಸಲಾಗಿತ್ತು. ರಿಯಾಝ್ ಎಂಬಾತ ಆರೋಪಿ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿದ್ದು ಬಹಿರಂಗವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.












