ಇತ್ತೀಚಿನ ಸುದ್ದಿ
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
22/07/2025, 00:14

ತುಮಕೂರು(reporterkarnataka.com): ತುಂಗಭದ್ರಾ ಜಲಾಶಯದ ಹಿನ್ನರಿನಿಂದ ಪಾವಗಡ ತಾಲೂಕು ಮತ್ತು ಪಟ್ಟಣ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಯೋಜನೆಯು ಸುಮಾರು 17.50 ಲಕ್ಷ ಜನರ ಆರೋಗ್ಯವನ್ನು ಕಾಪಾಡುವ ಉತ್ತಮ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ತುಮಕೂರಿನ ಪಾವಗಡದಲ್ಲಿ ತುಂಗಭದ್ರಾ ಜಲಾಶಯದ ಹಿನ್ನರಿನಿಂದ ಪಾವಗಡ ತಾಲ್ಲೋಕು ಮತ್ತು ಪಟ್ಟಣ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಯ ಉದ್ಘಾಟನೆ ಮತ್ತು 2250 ಮೆಗಾವ್ಯಾಟ್ ಸೋಲಾರ್ ಪ್ಲಾಂಟ್ ನಿರ್ಮಾಣದ ಘೋಷಣೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿ ನಂತರ ಸರ್ಕಾರಿ ಇಲಾಖೆ ಗಳ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
*ಫ್ಲೋರೈಡ್ ಯುಕ್ತ ನೀರಿನಿಂದ ಮುಕ್ತಿ:*
2018ರ ಜನರಿಯಲ್ಲಿ ಪಾವಗಡ ಮತ್ತಿತರ ಐದು ತಾಲ್ಲೂಕುಗಳಿಗೆ ಅನುಕೂಲ ಕಲ್ಪಿಸುವ ಕುಡಿಯುವ ನೀರಿನ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಇಲ್ಲಿನ ಜನರು ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವ ಅನಿವಾರ್ಯತೆ ಇತ್ತು. ಇದರಿಂದ ಜನರಿಗೆ ಆರೋಗ್ಯದ ತೊಂದರೆಗಳಿಗೆ ಒಳಗಾಗುತ್ತಿದ್ದರು. ಈ ಸಮಸ್ಯೆಯಿಂದ ಜನರನ್ನು ಹೊರತೆಗೆಯಲು, ಸುಮಾರು 200 ಕಿ.ಮೀ. ನಷ್ಟು ದೂರವಿರುವ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಪಾವಗಡಕ್ಕೆ ತರುವ ಯೋಜನೆಗೆ ಚಾಲನೆ ನೀಡಲಾಗಿದೆ. ಹಿಂದಿನ ಅವಧಿಯಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದಿದ್ದರೇ, ಈ ಯೋಜನೆಯನ್ನು ಮೂರು ವರ್ಷಗಳ ಮುಂಚೆಯೇ ಪೂರ್ಣಗೊಳಿಸಬಹುದಾಗಿತ್ತು ಎಂದರು.
2050ರವರೆಗೆ ಈ ಯೋಜನೆಯ ಲಾಭವನ್ನು ಜನರು ಪಡೆಯಬಹುದಾಗಿದೆ. . ಈ ಯೋಜನೆಯಿಂದ ಸುಮಾರು 17.50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿದಂತಾಗುತ್ತದೆ. ಶುದ್ಧ ಕುಡಿಯುವ ನೀರಿನ ಯೋಜನೆಯಿಂದ ಜನರು ಅಂಗವೈಕಲ್ಯತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪಾರಾಗಿದ್ದಾರೆ ಎಂದರು. ಪಾವಗಡ ತಾಲ್ಲೂಕಿನ 270 ಹಳ್ಳಿಗಳಿಗೆ ಮತ್ತು ಪಾವಗಡ ಪಟ್ಟಣಕ್ಕೆ ಈ ಯೋಜನೆಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಈ ಯೋಜನೆಗೆ ಹಗಲಿರುಳು ದುಡಿದ ಸಚಿವರು ಹಾಗೂ ಶಾಸಕರ ಪ್ರಯತ್ನಗಳು ಇಂದು ಫಲಿಸಿದೆ.
ಈ ಯೋಜನೆಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸುವ ಸುಯೋಗ ನನಗೆ ದೊರೆತಿರುವುದು ಸಂತೋಷ ತಂದಿದೆ ಎಂದರು.
*ಸುಳ್ಳು ಪ್ರಚಾರದಲ್ಲಿ ತೊಡಗಿರುವ ಬಿಜೆಪಿ:*
ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಅಪವಾದಗಳನ್ನು ಮಾಡುವ ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ? ಜನರನ್ನು ತಪ್ಪುದಾರಿಗೆ ಎಳೆಯುವಂತಹ ಸುಳ್ಳು ಪ್ರಚಾರದಲ್ಲಿ ಬಿಜೆಪಿ ತೊಡಗಿದೆ. ಬಿಜೆಪಿಯವರು ರಾಜ್ಯದಲ್ಲಿ 9 ವರ್ಷಗಳು ಅಧಿಕಾರಿದಲ್ಲಿದ್ದರೂ ಇಂತಹ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದರೆ, ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರದಾನಿ ಮೋದಿಯವರು ಟೀಕಿಸಿದರು. ರಾಜ್ಯದ ಬಿಜೆಪಿಯವರ ಸಾಧನೆ ಏನು ಎಂದು ಪ್ರಶ್ನಿಸಿದರು.
*ಏಷ್ಯಾದಲ್ಲಿ ನಂ.1 ವಿದ್ಯುತ್ ಉತ್ಪಾದನೆ ಘಟಕ:*
ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ.1 ಆಗಿದೆ. ಈಗಾಗಲೇ 2050 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು , ಮುಂದಿನ ಎರಡು ತಿಂಗಳಲ್ಲಿ 2400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಇದರಿಂದ ಪಾವಗಡದ ಚಿತ್ರಣವೇ ಬದಲಾಗಲಿದೆ ಎಂದರು.
ನಂಜುಂಡಪ್ಪ ವರದಿಯಲ್ಲಿ ಪಾವಗಡವನ್ನು ಅತ್ಯಂತ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲ್ಪಟ್ಟಿತ್ತು.ಈಗ ತುಮಕೂರಿನ ತಾಲ್ಲೂಕಿನ ಪಟ್ಟಿಯಲ್ಲಿ ಪಾವಗಡ ಮೊದಲನೇ ಸ್ಥಾನದಲ್ಲಿದ್ದು, ಈ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ.ಈ ಭಾಗಕ್ಕೆ ಸೇರಿದ ಕಾಂಗ್ರೆಸ್ ನ ಸಚಿವರು ಹಾಗೂ ಶಾಸಕರಿಗೆ ಜನರು ಸದಾ ಆಶೀರ್ವಾದ ಮಾಡಬೇಕು ಎಂದು ಅವರು ನುಡಿದರು.
*ತೆರಿಗೆ ಪಾಲಿನ ಬಗ್ಗೆ ಬಿಜೆಪಿ ಜೆಡಿಎಸ್ ಸಂಸದರು ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ:*
ಕರ್ನಾಟಕದಿಂದ ಪ್ರತಿ ವರ್ಷ 4.50 ಲಕ್ಷ ಕೋಟಿ ತೆರಿಗೆ ಕೇಂದ್ರ ಸರ್ಕಾರಕ್ಕೆ ತಲುಪುತ್ತಿದ್ದು, ಅದರಲ್ಲಿ ಕೇವಲ 65 ಸಾವಿರ ಕೋಟಿ ರೂ. ಮಾತ್ರ ರಾಜ್ಯಕ್ಕೆ ಮರಳಿ ಬರುತ್ತಿದೆ. ಇದನ್ನು ಯಾವುದೇ ಜೆಡಿಎಸ್ ಹಾಗೂ ಬಿಜೆಪಿ ಸಂಸದರು , ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ಕಳೆದ ವಿಧಾನಸಭೆ ಚುನಾಣೆಯಲ್ಲಿ 136 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದ ಪರಿಣಾಮ, ಜೆಡಿಎಸ್ ನವರು ಬಿಜೆಪಿಯೊಂದಿಗೆ ಮೈತ್ರಿ ಹೊಂದಿ ಲೋಕಸಭಾ ಚುನಾವಣೆಯನ್ನು ಎದುರಿಸುವ ದುಸ್ಥಿತಿ ಬಂತು. ಜಿಡಿಎಸ್ ನವರ ಶಕ್ತಿ ಇಲ್ಲಿ ಕುಂದುತ್ತಿದೆ. 2004 ರಲ್ಲಿ ನಾನು ಜೆಡಿಎಸ್ ನಲ್ಲಿದ್ದಾಗ, ಜೆಡಿಎಸ್ ಪಕ್ಷ 59 ಸ್ಥಾನಗಳನ್ನು ಗೆದ್ದಿತ್ತು, ಆದ್ರೆ ಹಿಂದಿನ ಚುನಾವಣೆಯಲ್ಲಿ ಅವರು ಕೇವಲ 18 ಸ್ಥಾನಗಳನ್ನು ಗೆದ್ದರು. ಪಾವಗಡ ಕ್ಷೇತ್ರದಲ್ಲಿ ಜಿಡಿಎಸ್ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ನವರ ಗ್ಯಾರಂಟಿ ಯೋಜನೆಗಳು , ಬಿಜೆಪಿ ಹಾಗೂ ಜೆಡಿಎಸ್ ನ್ನು ಕಂಗೆಡಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಿದ್ದ ಶಕ್ತಿ ಯೋಜನೆಯಲ್ಲಿ , ಇದುವರೆಗೆ ಸುಮಾರು 500 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ,1.64 ಕೋಟಿ ಕುಟುಂಬಗಳು ಲಾಭ ಪಡೆಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ನೀಡಿ, ರಾಜ್ಯ ಹಸಿವುಮುಕ್ತವಾಗಬೇಕೆನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.
*ಪ್ರತಿಪಕ್ಷಗಳು ಸರ್ಕಾರದ ಬಗ್ಗೆ ಅಪಪ್ರಚಾರ, ತಪ್ಪು ಮಾಹಿತಿಯನ್ನು ಜನರಿಗೆ ನೀಡಬಾರದು:*
ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದರು. ಅಪಪ್ರಚಾರ, ತಪ್ಪು ಮಾಹಿತಿಯನ್ನು ಜನರಿಗೆ ನೀಡಬಾರದು ಎಂದು ಈಗಾಗಲೇ ಬಹಿರಂಗ ಚರ್ಚೆಗೆ ಬರಲು ಆಹ್ವಾನ ನೀಡಿದ್ದೇನೆ ಎಂದು ಅವರು ಹೇಳಿದರು.
*ಬಿಜೆಪಿಯವರು ಸುಳ್ಳಿನ ಸರದಾರರು:*
ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಂದು ಕರ್ನಾಟಕಕ್ಕೆ 14ನೇ ಹಣಕಾಸು ಆಯೋಗದಲ್ಲಿ 4.7% ಕೊಡುತ್ತಿದ್ದ ಅನುದಾನದಲ್ಲಿ 15ನೇ ಹಣಕಾಸಿನ ಆಯೋಗದಲ್ಲಿ 3.6% ಗೆ ಇಳಿಸಿದರು. 1.15% ಅನುದಾನ ಕಡಿಮೆಯಾಗಿದೆ. 68000 ಕೋಟಿ ರೂ.ಗಳ ನಷ್ಟವಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷಗಳಿಗೆ ಗೌರವ ಇದ್ದಿದ್ದರೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿರಲಿಲ್ಲ ಎಂದರು. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲ ಎನ್ನುತ್ತಾರೆ. 2529 ಕೋಟಿ ಕುಡಿಯುವ ನೀರಿನ ಯೋಜನೆ, 716 ಕೋಟಿ ರೂ.ಗಳ ಅಭಿವೃದ್ಧಿಗೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿದೆ. ಈ ಅಭಿವೃದ್ಧಿಯಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಬಿಜೆಪಿಯವರು ಸುಳ್ಳಿನ ಸರದಾರರು. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳೇ ಅವರ ಮನೆ ದೇವರು. ಅವರ ಮಾತುಗಳನ್ನು ನಂಬಬೇಡಿ ಎಂದರು. ಕಾಂಗ್ರೆಸ್ ಪಕ್ಷ ಮಾತ್ರ ಈ ರಾಜ್ಯದ ದಲಿತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು ಹಾಗೂ ಕಾರ್ಮಿಕರ ಪರವಾಗಿರುವ ಸರ್ಕಾರ ಎಂದರು.
*ಸರ್ಕಾರದ ಯೋಜನೆಗಳನ್ನು ಒಂದು ಪಕ್ಷ, ಒಂದು ಜಾತಿ, ಧರ್ಮಕ್ಕೆ ನೀಡಿಲ್ಲ:*
ನಮ್ಮ ಸರ್ಕಾರ ಒಂದು ಧರ್ಮದ ಪರವಾಗಿ ಮಾತನಾಡಿಲ್ಲ. ಅಕ್ಕಿ, ಕರೆಂಟ್, ಶಕ್ತಿ, ಯೋಜನೆಯನ್ನು ಬಿಜೆಪಿಯ ಬಡವರಿಗೂ ನೀಡಲಾಗಿದೆ. ಒಂದು ಪಕ್ಷಕ್ಕೆ, ಒಂದು ಜಾತಿ, ಧರ್ಮಕ್ಕೆ ನೀಡಿಲ್ಲ. ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಹಿಂದುಳಿದ ತಾಲ್ಲೂಕುಗಳು ಮುಂದುವರೆಯಲು ಈ ಎಲ್ಲಾ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ. ಕರ್ನಾಟಕದ 240 ತಾಲ್ಲೂಕು, 224 ವಿಧಾನಸಭಾ ಕ್ಷೇತ್ರಗಳಿಗೆ ಎಲ್ಲಾ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ ಎಂದರು.
*ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲಿ ಪೂರ್ಣ:*
5300 ಕೋಟಿ ರೂ.ಗಳ ಒದಗಿಸುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರೂ ಇಲ್ಲಿಯವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು, 23 ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆ ಮೂಲಕ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು.
*2028 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಿ ಪುನಃ ಅಧಿಕಾರಕ್ಕೆ ಬಂದೇ ಬರುತ್ತೇವೆ:*
2028ರಲ್ಲಿಯೂ ನಾವೇ ಅಧಿಕಾರಕ್ಕೆ ಬರುವುದಾಗಿ ಹೇಳಿದ ಅವರು, ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. ಚರ್ಚೆಗೆ ಕರೆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚುನಾವಣೆ ಮಾಡುವಂತೆ ಹೇಳುತ್ತಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಚುನಾವಣೆಗೆ ನಾವು ಹೆದರುವುದಿಲ್ಲ. ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದ್ದು, 2028 ರ ವರೆಗೆ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ತಿಳಿದಿಲ್ಲ ಎಂದರು. ನಾಳೆ ಚುನಾವಣೆಯಾದರೂ ನಾವು ಗೆದ್ದೆ ಗೆಲ್ಲುತ್ತೇವೆ. ಆದರೆ ಜನ ನಮಗೆ 2028ರ ಮೇ ವರೆಗೆ ಅಧಿಕಾರ ನೀಡಿದ್ದಾರೆ. ಅದರಂತೆ ಅಲ್ಲಿಯವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತೇವೆ. 2028 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸಿ ಪುನಃ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು.
2050 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ.
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪಾವಗಡ ತಾಲೂಕು ಮುಂದುವರೆಯುವ ಬಗ್ಗೆ ಸಂತೋಷವಿದೆ ಎಂದು ಅವರು ನುಡಿದರು.