ಇತ್ತೀಚಿನ ಸುದ್ದಿ
ವರನಿಗೆ ಚಾಕು ಇರಿದ ಕೇಸ್ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ, ಇವಳೇ!; ಆರೋಪಿಗಳ ಮಾತು ಕೇಳಿ ಪೊಲೀಸರೇ ಶಾಕ್!!
02/02/2026, 14:12
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಎರಡು ದಿನಗಳ ಹಿಂದೆಯಷ್ಟೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮದುವೆ ಮಂಟಪಕ್ಕೆ ಹೋಗುತ್ತಿದ್ದ ವರನಿಗೆ ಚಾಕು ಇರಿದ ಘಟನೆ ನಡೆದಿತ್ತು. ವಧುವಿನ ಮಾಜಿ ಪ್ರೇಮಿ ಮಂಟಪಕ್ಕೆ ಬರುತ್ತಿದ್ದ ವರನ ಕಾರನ್ನು ಅಡ್ಡಗಟ್ಟಿ ಚಾಕು ಇರಿದಿದ್ದನು. ಘಟನೆಯಲ್ಲಿ ವರ ರವೀಶ್ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದನು. ಆದ್ರೀಗ ಈ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಚಾಕು ಚುಚ್ಚಿದ ವಧುವಿನ ಮಾಜಿ ಲವರ್ ಅನ್ನು ಪೊಲೀಸರು ಲಾಕ್ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮದುವೆಯಾಗೋ ವಧುವೇ ಭಾವಿ ಪತಿಗೆ ಮುಹೂರ್ತ ಫಿಕ್ಸ್ ಮಾಡಿರೋದು ಬಯಲಾಗಿದೆ.
*ವಧುವೇ ಪ್ರಮುಖಪಾತ್ರಧಾರಿ!:*
ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡ ತಿರುವು ಸಿಕ್ಕಿದೆ. ಪೊಲೀಸರ ವಿಚಾರಣೆಯಲ್ಲಿ ವಧುವೇ ಚಾಕು ಇರಿತದ ಪ್ರಕರಣದ ಪ್ರಮುಖ ಪಾತ್ರಧಾರಿ ಎಂದು ಗೊತ್ತಾಗಿದೆ. ಚಾಕು ಇರಿತ ಪ್ರಕರಣದಲ್ಲಿ ವಧು ನಯನಾ ಕೈವಾಡ ಬಹಿರಂಗವಾಗಿದೆ. ವಧು ನಯನಾ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
*ಕೃತ್ಯಕ್ಕೆಬಳಸಿದ್ದ ಕಾರು ವಶ:*
ಜನವರಿ 29ರಂದು ಮದುವೆ ಮಂಟಪಕ್ಕೆ ತೆರಳುತ್ತಿದ್ದ ವರ ರವೀಶ್ಗೆ ಚಾಕುವಿನಿಂದ ಇರಿಯಲಾಗಿತ್ತು. ವಧು ನಯನಾ ಹಳೆ ಪ್ರೇಮಿ ದರ್ಶನ್ ಮತ್ತು ಆತನ ಸ್ನೇಹಿತರು ಸೇರಿ ಚಾಕು ಇರಿದು ಪರಾರಿಯಾಗಿದ್ದರು. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೇ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ, ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
*ಮದುವೆಗೆ ವರನನ್ನು ಮನವೊಲಿಸಲು ವಧು ಯತ್ನ*
ಘಟನೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವೀಶ್ ಬಳಿ ಬಂದು ವಧು ನಯನಾ ಮದುವೆಯಾಗುವಂತೆ ಗೋಗರೆದಿದ್ದಳು. ರವೀಶ್ ಮುಂದೆ ಕಣ್ಣೀರು ಹಾಕಿದ್ದಳು. ಆದ್ರೆ, ವರ ರವೀಶ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದನು. ಮದುವೆಯಾಗಲು ಬಂದ ವೇಳೆ ಚಾಕು ಚುಚ್ಚಿ ಪ್ರಾಣ ತೆಗೆಯಲು ಪ್ರಯತ್ನ ಪಟ್ಟಿದ್ದಾಳೆ, ಮುಂದೆ ಇದೇ ರೀತಿಯಾದರೆ ಯಾರೂ ಹೊಣೆ ಎಂದು ರವೀಶ್ ಮದುವೆಯಾಗಲು ನಿರಾಕರಿಸಿದ್ದನು.
ಆದ್ರೀಗ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ವಧುವೇ ಚಾಕು ಇರಿತದ ಪ್ರಮುಖ ಪಾತ್ರಧಾರಿ ಎಂದು ಬಹಿರಂಗವಾಗಿದೆ. ಪೊಲೀಸರ ವಿಚಾರಣೆಯ ವೇಳೆ ವಧು ನಯನಾಳ ಕೈವಾಡದ ಬಗ್ಗೆ ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ.












