ಇತ್ತೀಚಿನ ಸುದ್ದಿ
ಬೆಂಗಳೂರು: ಗ್ಯಾಸ್ ಸಿಲಿಂಡರ್ ದರ 60 ರೂ. ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
07/03/2026, 21:31
ಬೆಂಗಳೂರು(reporterkarnataka.com): ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ 60 ರೂ. ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಜನ ವಿರೋಧಿ ಧೋರಣೆಯನ್ನ ಖಂಡಿಸಿ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ ನಡೆಯಿತು.
ಇತ್ತೀಚೆಗೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರಗಳಲ್ಲಿ ಮತ್ತೊಮ್ಮೆ ಪರಿಷ್ಕರಣೆ ಮಾಡಿ, ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ₹60 ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹115 ರಷ್ಟು ಹೆಚ್ಚಳ ಮಾಡಿರುವುದು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಮತ್ತೊಂದು ಭಾರೀ ಹೊರೆ ಹಾಕಿದಂತಾಗಿದೆ.
ಈಗಾಗಲೇ ದುಬಾರಿ ಬೆಲೆಯಿಂದ ಸಂಕಷ್ಟದಲ್ಲಿರುವ ಸಾಮಾನ್ಯ ಜನತೆಗೆ ಈ ನಿರ್ಧಾರ ದೊಡ್ಡ ಹೊಡೆತವಾಗಿದೆ.
ಚುನಾವಣೆಯ ಮುನ್ನ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಅವಶ್ಯಕ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಿ ನಂತರ ಬೆಲೆ ಏರಿಕೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ರವರ ತಂತ್ರಗಾರಿಕೆಯಾಗಿದೆ.
ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತೇವೆ ಮತ್ತು ದೇಶವನ್ನು ಆರ್ಥಿಕವಾಗಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರವು ಇಂದು ತನ್ನದೇ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
2014ರಿಂದ 2025ರ ಅವಧಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಸಂಭವಿಸಿರುವ ನಿರಂತರ ಏರಿಕೆ ಸಾಮಾನ್ಯ ಕುಟುಂಬಗಳ ಜೀವನವನ್ನು ದುಬಾರಿಯಾಗಿಸಿದ್ದು,
ಸಬ್ಸಿಡಿ ವ್ಯವಸ್ಥೆಯನ್ನು ಕ್ರಮೇಣ ಕಡಿಮೆ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಸರ್ಕಾರ ಆರ್ಥಿಕ ಹೊರೆ ಹಾಕಿರುವುದು ಅತ್ಯಂತ ಖಂಡನೀಯ.
ಅದೇ ರೀತಿ ವಿದೇಶಾಂಗ ಮತ್ತು ಆರ್ಥಿಕ ನೀತಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ದಿನೇ ದಿನೇ ದುರ್ಬಲವಾಗುತ್ತಿರುವುದು ಆತಂಕಕಾರಿಯಾಗಿದೆ ಹಾಗೂ
ಇದರಿಂದ ದೇಶದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ,
ಇತ್ತೀಚೆಗೆ ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ನೀಡಿರುವ ಹೇಳಿಕೆಗಳು ಹಾಗೂ ಜಾಗತಿಕ ರಾಜಕೀಯ ಬೆಳವಣಿಗೆಗಳ ನಡುವೆ ಭಾರತದ ಹಿತಾಸಕ್ತಿಯನ್ನು ದೃಢವಾಗಿ ರಕ್ಷಿಸುವ ಬದಲು ಕೇಂದ್ರ ಸರ್ಕಾರ ಮೌನ ವಹಿಸಿರುವುದು ದೇಶದ ಗೌರವಕ್ಕೆ ಧಕ್ಕೆ ತರುವಂತಾಗಿದೆ.
ವಿಶ್ವದ ಮುಂದೆ ಭಾರತದ ಸ್ವಾಭಿಮಾನವನ್ನು ರಕ್ಷಿಸುವ ಬಲವಾದ ರಾಜತಾಂತ್ರಿಕ ನಿಲುವು ತಾಳಬೇಕಾದ ಸಂದರ್ಭದಲ್ಲಿ ಸರ್ಕಾರದ ದುರ್ಬಲ ಧೋರಣೆ ಕಂಡುಬರುತ್ತಿರುವುದು ವಿಷಾದನೀಯ.
ಭಾರತದಂತಹ ಮಹತ್ವದ ಬಲಿಷ್ಠ ರಾಷ್ಟ್ರವು ಯಾವುದೇ ವಿದೇಶಿ ರಾಷ್ಟ್ರಗಳ ಸೂಚನೆ ಅಥವಾ ಒತ್ತಡದ ಆಧಾರದ ಮೇಲೆ ತನ್ನ ಆರ್ಥಿಕ ಮತ್ತು ಇಂಧನ ನೀತಿಗಳನ್ನು ರೂಪಿಸಬಾರದು.


ಆದರೆ ಇತ್ತೀಚಿನ ಬೆಳವಣಿಗೆಗಳು ದೇಶದ ವಿದೇಶಾಂಗ ನೀತಿಯಲ್ಲಿ ಸ್ಪಷ್ಟತೆ ಮತ್ತು ದೃಢತೆಯ ಕೊರತೆಯಿರುವುದನ್ನು ಎತ್ತಿ ತೋರಿಸುತ್ತಿವೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಮೂಡುತ್ತಿವೆ.
ಈ ಹಿನ್ನೆಲೆಯಲ್ಲಿ ಎಲ್ಪಿಜಿ ದರ ಏರಿಕೆ ಸೇರಿದಂತೆ ಸಾಮಾನ್ಯ ಜನರ ಬದುಕನ್ನು ದುಬಾರಿಯಾಗಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಜನರ ಜೀವನೋಪಾಯವನ್ನು ಸಂಕಷ್ಟಕ್ಕೆ ದೂಡುತ್ತಿರುವ ಈ ಸರ್ಕಾರ ತನ್ನ ನೈತಿಕ ಹೊಣೆಗಾರಿಕೆಯನ್ನು ಒಪ್ಪಿಕೊಂಡು ತಕ್ಷಣವೇ ದರ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವಾದರೆ ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಂತಾಗುತ್ತದೆ.
ಆದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಕಾಪಾಡುವ ದೃಷ್ಟಿಯಿಂದ ಎಲ್ಪಿಜಿ ದರ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಹಾಗೂ ದೇಶದ ಹಿತಾಸಕ್ತಿಯನ್ನು ರಕ್ಷಿಸುವ ಸ್ಪಷ್ಟ ಮತ್ತು ದೃಢ ನೀತಿಗಳನ್ನು ಜಾರಿಗೆ ತರಬೇಕು. ಇಲ್ಲವಾದರೆ ಜನರ ಆಕ್ರೋಶವನ್ನು ಎದುರಿಸಲು ಕೇಂದ್ರ ಸರ್ಕಾರ ಸಿದ್ಧರಾಗಬೇಕಾಗುತ್ತದೆ ಎಂಬುದನ್ನು ಈ ಪ್ರತಿಭಟನೆಯ ಮೂಲಕ ಎಚ್ಚರಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ mei ಅಧ್ಯಕ್ಷರಾದ ಎಸ್. ಮನೋಹರ್, ಮಾಧ್ಯಮ ವಕ್ತಾರರಾದ ಆನಂದ್ ಕುಮಾರ್ ಎಂ. ಎಸ್., ಕಾಂಗ್ರೆಸ್ ಮುಖಂಡರು ಗಳಾದ ಸುಂಕದಕಟ್ಟೆ ನವೀನ್, ಓಬಳೇಶ್, ಚಿನ್ನಿ ಪ್ರಕಾಶ್ ಹೇಮರಾಜ್,ಪುಟ್ಟರಾಜು, ಉಮೇಶ್, ರಂಜಿತ್, ಸಂಜಯ್ , ಸಾಯಿ ನವೀನ್ , ಸ್ಯಾಮ್ಯುವೇಲ್, ಪ್ರವೀಣ್, ಅಪ್ಪಾರಾಯ್, ಪವನ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.












