6:10 PM Friday27 - June 2025
ಬ್ರೇಕಿಂಗ್ ನ್ಯೂಸ್
ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಇಂಧನ ಸಚಿವ… ಮೂಕ ಪ್ರಾಣಿಗಳ ಮೇಲೆ ಕ್ರೌರ್ಯ ಕಂಡು ಬಂದರೆ ಕಠಿಣ ಕ್ರಮ; ಪೆಟ್ ಶಾಪ್‍ಗಳ… BNG | ಪ್ರತಿ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್… ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ದಿಕ್ಕು ದೆಸೆ ಇಲ್ಲದೆ ನಡೆದಿದೆ: ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ಅತ್ಯಾಧುನಿಕ ಭೂಗತ ರಸ್ತೆ ಜಾಲ, ಪೆರಿಫೆರಲ್ ರಿಂಗ್ ರಸ್ತೆ: ಹೆದ್ದಾರಿ ಸಚಿವ… ಎನ್.ಆರ್.ಪುರ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಾರು ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು;… Chikkamagaluru | ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಡಿಕ್ಕಿ: ಸವಾರ… ಬಾಣಸವಾಡಿ, ಕಸ್ತೂರಿನಗರ ಅರಣ್ಯ ಪ್ರದೇಶಕ್ಕೆ ಸಚಿವ ಖಂಡ್ರೆ ಭೇಟಿ: ಬೆಂಗಳೂರಿನಲ್ಲಿ ಶ್ವಾಸತಾಣಗಳ ಸಂರಕ್ಷಣೆ… HDK | ವಸತಿ ಇಲಾಖೆ ಅಕ್ರಮ ಮರೆಮಾಚಲು ಎಚ್.ಕೆ. ಪಾಟೀಲ್ ಪತ್ರ ತೇಲಿ… ಕಾಂಗ್ರೆಸ್ ಸರ್ಕಾರದಲ್ಲಿ ಕಮೀಶನ್ ದಂಧೆ 224 ಶಾಸಕರಿಗೂ ಗೊತ್ತಿದೆ: ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಇಂಧನ ಸಚಿವ ಜಾರ್ಜ್‌

27/06/2025, 18:03

ಬೆಂಗಳೂರು(reporterkarnataka.com): ರಾಜ್ಯದ ಎಲ್ಲಾ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.
ಬಿಡದಿಯಲ್ಲಿ ಪೇಸ್ ಡಿಜಿಟೆಕ್- ಲಿನೇಜ್‌ ಪವರ್‌ ಸಂಸ್ಥೆ ಸ್ಥಾಪಿಸಿರುವ ಸಂಪೂರ್ಣ ಸ್ವಯಂಚಾಲಿತ 5 ಗಿಗಾವ್ಯಾಟ್ ಅವರ್‌ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಹಗಲಿನ ವೇಳೆ ಲಭ್ಯವಿರುವ ಸೌರ ವಿದ್ಯುತ್ತನ್ನು ಸಂಗ್ರಹಿಸಿ ರಾತ್ರಿ ವೇಳೆಯೂ ಬಳಸುವಂತಾಗಬೇಕು. ಈ ನಿಟ್ಟಿನಲ್ಲಿ, ಕನಿಷ್ಠ 2 ತಾಸು ಬಳಸುವಷ್ಟು ಸೌರ ವಿದ್ಯುತ್ತಿನ ಸಂಗ್ರಹಣೆಗಾಗಿ ಎಲ್ಲಾ ಸೌರ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ ಕಲ್ಪಿಸಲಾಗುವುದು,”ಎಂದರು.
ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಒಟ್ಟಾರೆ ವಿದ್ಯುತ್‌ ಉತ್ಪಾದನೆಯಲ್ಲಿ ಈ ವಲಯದ ಪಾಲು ಶೇ.65ರಷ್ಟಿದೆ. ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಅವುಗಳಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಸಂಗ್ರಹಿಸಿ ಅಗತ್ಯವಿದ್ದಾಗ ಪೂರೈಸಲು ಬೇಕಾದ ಸೂಕ್ತ ಶೇಖರಣಾ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯ. ಪವರ್ ಗ್ರಿಡ್‌ನ ಸ್ಥಿರತೆ ಕಾಯ್ದುಕೊಳ್ಳುವ ಜತೆಗೆ ಕಡಿಮೆ ಬೇಡಿಕೆಯ ಅವಧಿಯಲ್ಲಿ ಉತ್ಪಾದಿಸಲಾದ ನವೀಕರಿಸಬಹುದಾದ ಇಂಧನವನ್ನು ಸಂಗ್ರಹಿಸಿ, ಅಗತ್ಯವಿದ್ದಾಗ ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರವೂ ಸ್ಟೋರೇಜ್ ಪ್ರಾಜೆಕ್ಟ್‌ಗಳನ್ನು ಉತ್ತೇಜಿಸುತ್ತಿದೆ. ಈ ಕಾರ್ಯದಲ್ಲಿ ಖಾಸಗಿ ಸಂಸ್ಥೆಯವರೂ ಕೈಜೋಡಿಸಿರುವುದು ಸಂತಸದ ವಿಷಯ ಎಂದರು.
ವಿದ್ಯುತ್‌ ಕ್ಷೇತ್ರದಲ್ಲಿ ಕರ್ನಾಟಕ ಮೊದಲಿನಿಂದಲೂ ದೇಶದಲ್ಲೇ ಮುನ್ನಡೆ ಕಾಯ್ದುಕೊಂಡು ಬಂದಿದೆ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಈಗ ಅದೇ ಶರಾವತಿಯಲ್ಲಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಆರಂಭಿಸಲಿದ್ದೇವೆ. ಕೇಂದ್ರದಿಂದಲೂ ಅದಕ್ಕೆ ಅನುಮತಿ ದೊರೆತಿದೆ. ನಮಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್‌ ಉತ್ಪಾದನೆ ಆದರೂ, ಸಂಗ್ರಹಣೆಗೆ ಅವಕಾಶ ಇಲ್ಲ. ಹೀಗಾಗಿ, ಶರಾವತಿ ಪಂಪ್ಡ್‌ ಸ್ಟೋರೇಜ್‌ ಮೂಲಕ 2000 ಮೆ.ವ್ಯಾ. ವಾರಾಹಿ ಪಂಪ್ಡ್‌ ಸ್ಟೋರೇಜ್‌ ಮೂಲಕ 1500 ಮೆ.ವ್ಯಾ. ಪಾವಗಡದಲ್ಲಿ 1000 ಮೆ.ವ್ಯಾ.ಸಾಮರ್ಥ್ಯ ಹಾಗೂ ರ‍್ಯಾಪ್ಟೆಯಲ್ಲಿ 2000 ಮೆ.ವ್ಯಾ. ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್‌ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌)ಗೆ ಕೇಂದ್ರ ವಿದ್ಯುತ್‌ ಪ್ರಾಧಿಕಾರದ ಅನುಮೋದನೆ ದೊರೆತಿದೆ. ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗದ ತಲಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳ ಮಧ್ಯ ಭಾಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲ್ಲಿದೆ ಎಂದರು.

*ಆತ್ಮನಿರ್ಭರ ಭಾರತಕ್ಕೆ ಸ್ಟೋರೇಜ್‌ ವ್ಯವಸ್ಥೆ- ಜೋಶಿ:*
ಲಿನೇಜ್‌ ಪವರ್‌ ಸಂಸ್ಥೆಯ ಬ್ಯಾಟರಿ ಸ್ಟೋರೇಜ್‌ ಘಟಕವನ್ನುಉದ್ಘಾಟಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು, ಇಂಧನ ಸ್ವಾವಲಂಬನೆಯತ್ತ ಸದೃಢ ಹೆಜ್ಜೆ ಹಾಕುತ್ತಿರುವ ಆತ್ಮನಿರ್ಭರ ಭಾರತಕ್ಕೆ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ ಅತ್ಯಗತ್ಯ ಎಂದರು.
ನಾನ್‌ ಸೋಲಾರ್, ನಾನ್‌ ವಿಂಡ್‌ ಅವರ್‌ (ಸೌರ ಮತ್ತು ಪವನ ವಿದ್ಯುತ್‌ ಲಭ್ಯವಿಲ್ಲದ ಸಮಯ) ನಲ್ಲಿ ಇವುಗಳಿಂದ ಉತ್ಪಾದನೆಯಾದ ವಿದ್ಯುತ್‌ಅನ್ನು ಸಂಗ್ರಹಿಸಿ ಬಳಸಲು ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಶರಾವತಿ, ವರಾಹಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳು ಕರ್ನಾಟಕದಲ್ಲಿ ಸಾಕಾರಗೊಳ್ಳುತ್ತಿರುವುದು ಸಂತಸದ ವಿಷಯ. ಬ್ಯಾಟರಿ ಸ್ಟೋರೇಜ್‌ ಕ್ಷೇತ್ರದಲ್ಲಿ ಹೂಡಿಕೆಗೂ ವಿಫುಲ ಅವಕಾಶವಿದೆ. ಉದ್ಯಮಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.


ದೇಶದಲ್ಲಿ ಆದ ಮೊದಲ ಕ್ರಾಂತಿ ವಿದ್ಯುಚ್ಛಕ್ತಿ, ನಂತರ ಬಂದದ್ದು ಟಿವಿ. ನಮ್ಮೆಲ್ಲರ ಬದುಕನ್ನು ಬದಲಿಸಿದ್ದು ಇಂಟರ್ನೆಟ್‌. ಸ್ಮಾರ್ಟ್‌ ಟಿವಿ ಈಗ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ ಮತ್ತೊಮ್ಮೆ ಅಂಥ ಮಹತ್ವದ ಬದಲಾವಣೆ ತರಲಿದೆ. ಇಂಥ ಬದಲಾವಣೆಗೆ ನಾವೆಲ್ಲರೂ ಸಾಕ್ಷಿ ಆಗಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರೂ ಆದ ಕ್ರೆಡಲ್‌ ಅಧ್ಯಕ್ಷ ಟಿ.ಡಿ. ರಾಜೇಗೌಡ, ಶಾಸಕ ಸಾ.ರಾ. ಮಹೇಶ್, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ಶ್ರಿ ಪ್ರಕಾಶನಾಥ ಸ್ವಾಮೀಜೀ, ಅವಧೂತ ವಿನಯ್‌ ಗೂರೂಜಿ, ಪೇಸ್ ಡಿಜಿಟೆಕ್- ಲಿನೇಜ್‌ ಪವರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು