ಇತ್ತೀಚಿನ ಸುದ್ದಿ
Bangalore | ಕಾಲ್ತುಳಿತ ಪ್ರಕರಣ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ
05/06/2025, 13:16

ಬೆಂಗಳೂರು(reporterkarnataka.com): ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದಿಂದ 11 ಮಂದಿ ಅಮಾಯಕರ ಸಾವಿಗೆ ಕಾರಣವಾಗಿರುವ ಈ ಸರ್ಕಾರಕ್ಕೆ ನಾಚಿಕೆ, ಮರ್ಯಾದೆ, ನೈತಿಕತೆ ಇದ್ದರೆ, ಸಂಬಂಧ ಪಟ್ಟವರು ರಾಜೀನಾಮೆ ನೀಡಬೇಕು. ಪ್ರಕರಣದ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗಹಿಸಿದ್ದಾರೆ.
ಕಾಲ್ತುಳಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಲ್ತುಳಿತದಲ್ಲಿ ಹನ್ನೊಂದು ಜನ ಸಾವನಪ್ಪಿರುವಂತದ್ದು ಹಲವಾರು ಜನ ಗಾಯಗೊಂಡಿರುವುದು ಅತ್ಯಂತ ದುಖದ ಸಂಗತಿ ಈ ವಿಚಾರದಲ್ಲಿ ಬಹುತೇಕವಾಗಿ ಕರ್ನಾಟಕದ ನಾಗರಿಕರಿಗೆ ಕೋಪ ಬಂದಿದೆ. ಒಂದು ಸರ್ಕಾರ ಕ್ರಿಕೆಟ್ ವಿಜಯೋತ್ಸವ ನಿಯಂತ್ರಣ ಮಾಡಲು ಆಗುವುದಿಲ್ಲ ಎಂದರೆ ಇಡ್ಲಿ ಕರ್ನಾಟಕವನ್ನು ಹೇಗೆ ನಿಯಂತ್ರಣ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತಿಗಳು ಬಹಳ ಜನ ಬಂದರು ಎಂದು ಹೇಳುತ್ತಾರೆ. ನೀವು ಸರಿಯಾಗಿ ಯೋಜನೆ ಮಾಡಿಲ್ಲ. ಪೊಲಿಸ್ ಆಫಿಸರ್, ಸರ್ಕಾರದ ಮಂತ್ರಿಗಳು, ಕೆಎಸಿಎ ಯಾವುದೇ ಸಭೆ ಮಾಡಿಲ್ಲ. ಡಿಪಿಎಆರ್ ದವರು ವಿಧಾನಸೌಧದ ಮುಂದೆ ಕಾರ್ಯಕ್ರಮ ಇದೆ ಅಂತ ಹೇಳಿದರು. ಯಾವುದು ಪ್ಲ್ಯಾನ್ ಇರಲಿಲ್ಲ. ಮೊದಲು ರೋಡ್ ಶೋ ಇದೆ ಅಂತ ಹೇಳಿದ್ದರು. ನಂತರ ರೋಡ್ ಶೋ ಇಲ್ಲ ಎಂದರು. ಮೊದಲು ಟಿಕೆಟ್ ಇದೆ ಅಂತ ಹೇಳಿದರು. ನಂತರ ಟಿಕೆಟ್ ಇಲ್ಲ ಅಂದರು. ಒಟ್ಟಾರೆ. ಸರ್ಕಾರದ ಬೇಜವಾಬ್ದಾರಿ, ಈ ಕೊಲೆಗೆ ಸರ್ಕಾರವೇ ನೇರ ಹೊಣೆ. ಸಾವಿಗೀಡಾದ ಆಮಾಯಕ ಜನರ ರಕ್ತ ಈ ಸರ್ಕಾರದ ಕೈಗೆ ಅಂಟಿದೆ. ಜನರ ಶಾಪವೂ ತಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಗಾಯಾಳುಗಳನ್ನು ಸಾರ್ವಜನಿಕರೇ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲು ಪ್ರಯತ್ನ ಮಾಡಿದ್ದಾರೆ. ಹಿರಿಯ ಪೊಲೀಸರು ನಿಷ್ಕ್ರಿಯವಾಗಿ ನಿಂತಿದ್ದರು. ಈ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸಾವು ವ್ಯರ್ಥವಾಗಬಾರದು. ಮತ್ತು ಇದು ನಮ್ಮ ಕರ್ನಾಟಕಕ್ಕೆ ಕಳಂಕವಾಗಿದೆ. ವಿಶ್ವ ಕಪ್ ಗೆದ್ದಾಗ ಮುಂಬೈನಲ್ಲಿ ಇಪ್ಪತ್ತೈದು ಕಿಲೋ ಮೀಟರ್ ವಿಜಯೋತ್ಸವ ಆಚರಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಿಂದಿನ ಘಟನೆಗಳಿಂದ ಪಾಠ ಕಲಿಯಬೇಕು. ನಮ್ಮ ಅವಧಿಯಲ್ಲಿಯೂ ಪುನಿತ್ ರಾಜಕುಮಾರ್ ಅವರ ನಿಧನದ ಸಂದರ್ಭದಲ್ಲಿ ನಾವು ರಾಜಕುಮಾರ್ ಅವರ ನಿಧನದ ಸಂದರ್ಭದಲ್ಲಿ ಆಗಿದ್ದ ಘಟನೆಯನ್ನು ಮನಗಂಡು ಎರಡು ದಿನಗಳ ಕಾಲ ವ್ಯವಸ್ಥಿತವಾಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿ ಬೆಳಗಿನ ನಾಲ್ಕು ಗಂಟೆಗೆ ಗೌರವಯುತವಾಗಿ ಅವರ ಅಂತ್ಯ ಸಂಸ್ಕಾರ ಮಾಡಿದ್ದೇವು ಎಂದು ನೆನಪಿಸಿಕೊಂಡರು.
ಈ ಕಾರ್ಯಕಮದಲ್ಲಿ ಗೃಹ ಸಚಿವರ ಪಾತ್ರವೇ ಇಲ್ಲ. ಉಪ ಮುಖ್ಯಮಂತಿಗಳೇ ಏರ್ಪೋರ್ಟಿಗೆ ಹೋಗುತ್ತಾರೆ. ವಿಧಾನಸೌಧಕ್ಕೆ ಬರುತ್ತಾರೆ. ಅವರೇ ಮುಂದೆ ಬಂದು ಕಾರ್ಯಕ್ರಮ ಮಾಡುತ್ತಾರೆ. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಮಂತ್ರಿಗಳು ಮತ್ತು ಅವರ ಛೇಲಾಗಳೇ ಇದ್ದರು. ಜನರಿಗೆ ಆಟಗಾರರು ಕಾಣಿಸಲೇಯಿಲ್ಲ. ಇಷ್ಟು ಬೇಜವಾಬ್ದಾರಿ ಕಾರ್ಯಕ್ರಮ ನೋಡಿಲ್ಲ. ಈ ಸರ್ಕಾರಕ್ಕೆ ನಾಚಿಕೆ, ಮರ್ಯಾದೆ. ನೈತಿಕತೆ ಇದ್ದರೆ, ಸಂಬಂಧ ಪಟ್ಟವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಗಾಯ ಆಗಿದೆ ಎಂದು ಹೇಳಿದರೂ. ಪೊಲೀಸರು ಮತ್ತೆ ಹೊಡೆದಿದ್ದಾರೆ ಎಂದು ಗಾಯಾಳು ಹೇಳಿದರು. ಒಟ್ಟಾರೆ, ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಕಾರ್ಯಕ್ರಮ ಆಯೋಜನೆಯಲ್ಲಿ ಯಾವ ಹಿರಿಯ ಅಧಿಕಾರಿಗಳಿದ್ದಾರೆ. ಯಾವ ರಾಜಕಾರಣಿ ಇದ್ದಾರೆ. ಅವರೆಲ್ಲರ ಮೇಲೆ ಕ್ರಮ ಆಗಬೇಕು. ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಈ ಘಟನೆಯ ಬಗ್ಗೆ ಮುಖ್ಯಮಂತಿಗಳ ಹೇಳಿಕೆ ನಿರಾಶಾದಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಡಾ.ಸುಧಾಕರ್ ಹಾಜರಿದ್ದರು.