11:36 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಮಳೆ ಹನಿಯಲ್ಲೂ ಹಣದ ಹೊಳೆ?: ಸ್ಪೆಷಲ್ ಗ್ಯಾಂಗ್ ಹೆಸರಿನಲ್ಲಿ ಭ್ರಷ್ಟಾಚಾರ?; ಪಾಲಿಕೆ ಕಮಿಷನರೇ..ಮಿನಿ ಲಾರಿ, 480 ಕೆಲಸಗಾರರ ಪೆರೇಡ್ ನಡೆಸಿ !! 

16/07/2021, 07:34

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆಯು ಪ್ರತಿ ವರ್ಷದಂತೆ ಈ ಬಾರಿಯೂ ವಾರ್ಡ್ ಗೊಂದು ಸ್ಪೆಷಲ್ ಗ್ಯಾಂಗ್ ಗಳನ್ನು ರಚಿಸಿದ್ದು, ಇದರಲ್ಲಿ ಭ್ರಷ್ಟಾಚಾರದ ವಾಸನೆ ಮಂಗಳೂರು ಜನತೆಯ ಮೂಗಿಗೆ ಬಡಿಯಲಾರಂಭಿಸಿದೆ. ಪ್ರತಿ ವಾರ್ಡ್ ಗೆ 3.26 ಲಕ್ಷ ರೂ.ಗಳ ಕಾಮಗಾರಿ ನಡೆಸಲು ಅವಕಾಶ ನೀಡಲಾಗಿದ್ದು, 60 ವಾರ್ಡ್ ಗಳಿಗೆ 2 ಕೋಟಿಗೂ ಹೆಚ್ಚು ತೆರಿಗೆದಾರರ ಹಣ ಪೋಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪಾಲಿಕೆ ರಚಿಸುವ ಪ್ರತಿ ಸ್ಪೆಷಲ್ ಗ್ಯಾಂಗ್ ನಲ್ಲಿ ತಲಾ 8 ಮಂದಿ ಕೆಲಸಗಾರರು ಇರುತ್ತಾರೆ ಎಂದು ಲೆಕ್ಕ ತೋರಿಸಲಾಗುತ್ತದೆ. 8 ಮಂದಿಯಂತೆ 60 ವಾರ್ಡ್ ಗಳಿಗೆ ಒಟ್ಟು 480 ಕೆಲಸಗಾರರಿರುತ್ತಾರೆ. ಪ್ರತಿ ಗ್ಯಾಂಗ್ ಗೆ ಒಂದು ಮಿನಿ ಲಾರಿ, ಮರ ಕಡಿಯುವ ಕಟ್ಟರ್, ಹಗ್ಗ, ಟಾರ್ಚ್ ಇನ್ನಿತರ ಪರಿಕರ ನೀಡಲಾಗುತ್ತದೆ. ಮಳೆಗಾಲದ 3 ತಿಂಗಳು ಇವರಿಗೆ ಡ್ಯೂಟಿ ಇರುತ್ತದೆ. ಪ್ರತಿ ವಾರ್ಡ್ ನ ಚರಂಡಿ ಸ್ವಚ್ಛ ಮಾಡುವುದು, ಹೂಳು ತೆಗೆಯುವುದು, ಕೃತಕ ನೆರೆ ಬಂದರೆ ಕಾರ್ಯಪ್ರವೃತ್ತರಾಗುವುದು,

ಗಾಳಿ ಮಳೆಗೆ ಮರ ಬಿದ್ದರೆ ಅದನ್ನು ತೆರವುಗೊಳಿಸುವುದು ಇವರ ಕೆಲಸ. ಆದರೆ ಪಾಲಿಕೆ ಆಡಳಿತ ಹೇಳಿದಂತೆ ಈ ಯಾವುದೇ ಕೆಲಸ ಹೆಚ್ಚಿನ ವಾರ್ಡ್ ಗಳಲ್ಲಿ ಆಗಿರುವುದಿಲ್ಲ. ಚರಂಡಿ ಕ್ಲೀನ್ ನಡೆದೇ ಇಲ್ಲ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ.

ಇದೆಲ್ಲದರ ನಡುವೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರಲ್ಲಿ
ಉಂಟಾಗಿರುವ ಸಂದೇಹ ಏನೆಂದರೆ, ಎಲ್ಲ 60 ವಾರ್ಡ್ ಗಳಲ್ಲಿ ಒಮ್ಮೆಲೇ ಮರ ಬೀಳುತ್ತಾ? ಮತ್ತು ಎಲ್ಲ ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಚರಂಡಿ ಹೂಳೆತ್ತುವ ಕೆಲಸ ನಡೆಯುತ್ತಾ ?ಎನ್ನುವುದು. ಹಾಗಾದರೆ ಇವರಿಗೆ ವಾರ್ಡ್ ಗೆ ಒಂದು ಮಿನಿ ಲಾರಿ ಹಾಗೂ ಪ್ರತಿ ವಾರ್ಡ್ ಗೆ 8 ಮಂದಿಯಂತೆ 480 ಮಂದಿ ಕೆಲಸಗಾರರ ಅಗತ್ಯವಿದೆಯೇ ಎಂದು ತೆರಿಗೆದಾರರು ಸಹಜವಾಗಿಯೇ ಪ್ರಶ್ನಿಸುತ್ತಾರೆ. ಇಲ್ಲಿಂದಲೇ ಮಳೆಗಾಲದ ಕೆಸರಿನ ನಡುವೆ ಪಾಲಿಕೆಯ ಕೊಳಕು ಭ್ರಷ್ಟಾಚಾರ ಮೂಗಿಗೆ ಬಡಿಯಲಾರಂಭಿಸುತ್ತದೆ. ಒಂದು ಮಾಹಿತಿಯ ಪ್ರಕಾರ ಪಾಲಿಕೆ ಅಧಿಕಾರಸ್ಥರು ಜನರನ್ನು ಫೂಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. 480 ಕೆಲಸಗಾರರು ಮತ್ತು 60 ಮಿನಿ ಲಾರಿ ಎಲ್ಲವೂ ಬೋಗಸ್. ಇದು ಅಕ್ಷಾಂಶ, ರೇಖಾಂಶದ ಹಾಗೆ ಕಾಲ್ಪನಿಕ ಸಂಖ್ಯೆಯಾಗಿದೆ. 8-10 ಲಾರಿ ಮತ್ತು 10-20 ಕೆಲಸಗಾರಿಂದ ಇಡೀ 60 ವಾರ್ಡ್ ಗಳಲ್ಲಿ ಕಾಮಗಾರಿ ನಡೆಸಿದ ಶಾಸ್ತ್ರವನ್ನು ಮಾಡಿ ಮುಗಿಸಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಈ ಆಪಾದನೆ ನಿಜವಾಗಿಯೂ ಸತ್ಯಕ್ಕೆ ದೂರವಾಗಿದ್ದರೆ ಪಾಲಿಕೆ ಆಡಳಿತ 60 ಮಿನಿ ಲಾರಿ ಹಾಗೂ 480 ಮಂದಿ ಕೆಲಸಗಾರರನ್ನು ಜನರ ಮುಂದೆ ಪೆರೇಡ್ ನಡೆಸುವ ಅಗತ್ಯ ಎದುರಾಗುತ್ತದೆ. ಮಳೆಗಾಲದ ಹೆಸರಿನಲ್ಲಿ ಕಾರ್ಪೊರೇಟರ್ ಗಳು, ಗುತ್ತಿಗೆದಾರರು, ಪಾಲಿಕೆಯ ಎಂಜಿನಿಯರ್ ಗಳು ಹಣ ಹಂಚಿಕೊಳ್ಳುವುದು ಇನ್ನಾದರೂ ನಿಲ್ಲಬೇಕೆನ್ನುವುದು ಜನಸಾಮಾನ್ಯರ ಹಕ್ಕೊತ್ತಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು