3:08 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಗುಜ್ಜರಕೆರೆ ಅಭಿವೃದ್ಧಿ:  ವಾಕಿಂಗ್ ಟ್ರ್ಯಾಕ್ ಬದಲು ಸ್ಮಾರ್ಟ್ ಸಿಟಿಯಡಿ ರಸ್ತೆಯೇ ನಿರ್ಮಾಣ!; ತೆರಿಗೆದಾರರ ಹಣಕ್ಕಿಲ್ಲ ನಯಾ ಪೈಸೆಯ ಬೆಲೆ !!

03/07/2021, 18:46

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ನಗರದ ಮಂಗಳಾದೇವಿ ದೇವಾಲಯದ ಸಮೀಪವಿರುವ ಐತಿಹಾಸಿಕ ಗುಜ್ಜರಕೆರೆ ಅಭಿವೃದ್ಧಿ ಕಾರ್ಯ ಭರದಿಂದ ನಡೆಯುತ್ತಿದ್ದು, ಕೆರೆಯ ಸುತ್ತ ವಾಕಿಂಗ್ ಟ್ರ್ಯಾಕ್ ನಿರ್ಮಿಸುವ ಬದಲಿಗೆ ರಸ್ತೆಯನ್ನೇ ನಿರ್ಮಿಸುವ ಕೆಲಸಕ್ಕೆ ಕೈಹಾಕುವ ಮೂಲಕ ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲ್ಲಿನ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯು ಕಳೆದ ಎರಡು ದಶಕಗಳಿಂದ ನಡೆಸಿದ ಹೋರಾಟದ ಫಲವಾಗಿ ಕೊನೆಗೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗೆ ಮುನ್ನುಡಿ ಬರೆಯಲಾಯಿತು.

ಸುಮಾರು 3.43 ಎಕರೆ ವಿಸ್ತೀರ್ಣವುಳ್ಳ ಗುಜ್ಜರಕೆರೆಯ ಸುತ್ತಮುತ್ತ ಒತ್ತುವರಿ ನಡೆದು ದಶಕಗಳೇ ಉರುಳಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಅತಿಕ್ರಮಣ ನಡೆದಿದ್ದರೆ ತೆರವುಗೊಳಿಸುವುದಾಗಿ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದರು. ಆದರೆ ಅತಿಕ್ರಮಣವನ್ನು ತೆರವುಗೊಳಿಸುವ ಯಾವುದೇ ಪ್ರಕ್ರಿಯೆ ನಡೆಸದೆ ಕೆರೆಯ ಸುತ್ತ ಅಗಲವಾದ ರಸ್ತೆ ನಿರ್ಮಿಸಲಾಗುತ್ತಿದೆ. ಪ್ರಸ್ತುತ ನಿರ್ಮಿಸಲುದ್ದೇಶಿಸಿದ ವಾಕಿಂಗ್ ಟ್ರ್ಯಾಕ್ ಎಂದು ಕರೆಸಿಕೊಳ್ಳುವ ರಸ್ತೆಯಲ್ಲಿ ಏಕಕಾಲದಲ್ಲಿ ಎರಡು ಬಸ್ ಅಥವಾ ಎರಡು ಲಾರಿ ಹಾದು ಹೋಗುವಷ್ಟು ಅವಕಾಶ ಕಲ್ಪಿಸಲಾಗಿದೆ.

ವಾಸ್ತವದಲ್ಲಿ ಒತ್ತುವರಿಯನ್ನು ತೆರವುಗೊಳಿಸಿಯೇ ವಾಕಿಂಗ್ ಟ್ರ್ಯಾಕ್ ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಇದು ಯಾವುದೇ ಕಾರ್ಯವನ್ನು ಪಾಲಿಕೆ ನಡೆಸದೆ ಎರಡು ಬಸ್ ಗಳು ಹಾದು ಹೋಗುವ ರಸ್ತೆಯನ್ನೇ ನಿರ್ಮಿಸಲು ಮುಂದಾಗಿರುವುದು ನಗೆಪಾಟಲಿಗೆ ದಾರಿ ಮಾಡಿಕೊಟ್ಟಿದೆ. ಸ್ಮಾರ್ಟ್ ಸಿಟಿ ಕಂಪನಿಯ ಅರ್ಥಾತ್ ತೆರಿಗೆದಾರರ ಹಣವನ್ನು ನೀರಿನಂತೆ ಚೆಲ್ಲಲಾಗುತ್ತಿದೆ.

ಗುಜ್ಜರಕೆರೆಯ  ಸುತ್ತಲೂ ವಾಕಿಂಗ್ ಟ್ರಾಕ್ ಬದಲು ರಸ್ತೆಯನ್ನೇ ನಿರ್ಮಿಸುವುದರಿಂದ ಈಗಾಗಲೇ ಒತ್ತುವರಿ ಮಾಡಿದವರಿಗೆ ಮತ್ತಷ್ಟು ಅವಕಾಶ ನೀಡಿದಂತಾಗುತ್ತದೆ. ವಾಹನಗಳನ್ನು ಇಲ್ಲಿ ಪಾರ್ಕ್ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ. ಮುಂದೆ ಇದರಿಂದ ಕೆರೆಯ ಪರಿಸರಕ್ಕೆ ಧಕ್ಕೆ ಬರುವ ಸಂಭವವೇ ಹೆಚ್ಚು. ಕೆರೆಯ ಭೂಮಿಯನ್ನು ಈಗಾಗಲೇ ಕೆಲವರು ತಮ್ಮ ತೆಕ್ಕೆಗೆ ಹಾಕಿರುವ ಕಾರಣ ಕೆರೆಯ ಉಳಿದಿರುವ ಭೂಮಿಯಲ್ಲಿ ಇಷ್ಟು ಅಗಲದ ರಸ್ತೆ ನಿರ್ಮಾಣ ಅವಶ್ಯಕತೆಯೇ ಇಲ್ಲ. ವಾಕಿಂಗ್ ಟ್ರ್ಯಾಕ್ ಬದಲಿಗೆ ಅಗಲವಾದ ರಸ್ತೆ ಇಲ್ಲಿ ನಿರ್ಮಿಸುವ ಉದ್ದೇಶವೇನು ಎಂಬುದನ್ನು ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಎಂಜಿನಿಯರ್ ಗಳು ಸಾರ್ವಜನಿಕರ ಮುಂದೆ ವಿಶದಪಡಿಸುವ ಅಗತ್ಯವಿದೆ. ಯಾಕೆಂದರೆ ಕೆರೆಯ ಪರಿಸರದ ಮೂಲಕ ಘನ ವಾಹನಗಳು ಸಂಚರಿಸಲು ಪಾಲಿಕೆಯೇ ಮುನ್ನುಡಿ ಬರೆದಂತೆ ಆಗುವುದಿಲ್ಲವೇ? ಎನ್ನುವುದನ್ನು ಇವರು ಮನಗಾಣಬೇಕಾಗಿದೆ.

ಕೆರೆಯ ರಸ್ತೆ ಸಂಪರ್ಕಿಸುವ ಪರಿಸರದ  ರಸ್ತೆಗಳೇ 4-5 ಅಡಿ ಅಗಲ ಇದ್ದು, ಈ ಕೆರೆಯ ಸುತ್ತ ಇಷ್ಟು ಅಗಲ ರಸ್ತೆ ನಿರ್ಮಾಣ ಯಾತಕ್ಕಾಗಿ? ಬದಲಿಗೆ ವಾಕಿಂಗ್ ಟ್ರ್ಯಾಕ್ ನ ಅಗಲ ಕಿರಿದುಗೊಳಿಸಿ ಕೆರೆಯ ಸುತ್ತಲೂ ಮರಗಿಡಗಳನ್ನು ನೆಟ್ಟು ಹಸುರೀಕರಣ ಮಾಡಲು ಅವಕಾಶವಿದೆ. ವಾಯು ವಿಹಾರಕ್ಕೆ ಬರುವವರಿಗೆ ಹಾಗೂ ಹಕ್ಕಿಗಳಿಗೆ ಪೂರಕ ವಾತಾವರಣ ಸೃಷ್ಟಿಸಿದಂತಾಗುತ್ತದೆ. ಅದು ಬಿಟ್ಟು ಕೆರೆ ಸುತ್ತ ವಾಹನ ಓಡಿಸಲು ಅವಕಾಶ ಮಾಡಿಕೊಡುವುದು ಮೂರ್ಖ ನಿರ್ಧಾರವಾದೀತು ಎಂದು ಪ್ರಜ್ಞಾವಂತರು ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು