ಇತ್ತೀಚಿನ ಸುದ್ದಿ
ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ 7 ಅಸ್ಥಿಪಂಜರಗಳಲ್ಲಿ ಮತ್ತೊಂದರ ಗುರುತು ಪತ್ತೆ: ವಿಚಾರಣೆಗೆ ಹಾಜರಾದ ಕುಟುಂಬಸ್ಥರು
25/09/2025, 20:55

ಬೆಳ್ತಂಗಡಿ(reporterkarnataka.com): ದೇಶಾದ್ಯಂತ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ 7 ಅಸ್ತಿಪಂಜರಗಳ ಪೈಕಿ ಮತ್ತೊಂದು ಅಸ್ಥಿಪಂಜರಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಅಸ್ಥಿಪಂಜರ ಶೋಧದ ವೇಳೆ ದೊರೆತ ಚಾಲನ ಪರವಾನಿಗೆ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ತುಮಕೂರು ಜಿಲ್ಲೆಯ ಕುಟುಂಬವೊಂದಕ್ಕೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ. ಈ ಅಸ್ಥಿಪಂಜರವು ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂಬ ಯುವಕನದ್ದಾಗಿರಬಹುದು ಎಂದು ಶಂಕಿಸಲಾಗಿದೆ.
*ನಾಪತ್ತೆಯಾಗಿದ್ದ ಯುವಕನಿಗೆ ಡಿಎಲ್ ಸುಳಿವು:*
ಆದಿಶೇಷ ನಾರಾಯಣ ಎಂಬ ಈ ಯುವಕ 2013ರ ಅಕ್ಟೋಬರ್ 2 ರಿಂದ ಏಕಾಏಕಿ ನಾಪತ್ತೆಯಾಗಿದ್ದನು. ಈತ ಬೆಂಗಳೂರಿನ ಬಾರ್ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
*ಕುಟುಂಬಸ್ಥರ ನಿರ್ಲಕ್ಷ್ಯ:* ಅಚ್ಚರಿಯೆಂದರೆ, ಆದಿಶೇಷ ನಾಪತ್ತೆಯಾದ ಸಂಬಂಧ ಆತನ ಕುಟುಂಬಸ್ಥರು ಈವರೆಗೂ ಯಾವುದೇ ಪೊಲೀಸ್ ದೂರು ಅಥವಾ ನಾಪತ್ತೆ ಪ್ರಕರಣವನ್ನು ದಾಖಲಿಸಿರಲಿಲ್ಲ.
*ಡಿಎಲ್ ಪತ್ತೆ:* ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ಥಿಪಂಜರದೊಂದಿಗೆ ದೊರೆತ ಚಾಲನ ಪರವಾನಿಗೆಯಲ್ಲಿ ಆದಿಶೇಷ ನಾರಾಯಣನ ಹೆಸರು ಇರುವುದು ಪೊಲೀಸರಿಗೆ ಪ್ರಮುಖ ಸುಳುವಾಗಿದೆ.
*ವಿಚಾರಣೆಗೆ ಆಗಮಿಸಿದ ಕುಟುಂಬಸ್ಥರು:*
ಚಾಲನ ಪರವಾನಿಗೆಯ ಮಾಹಿತಿ ಆಧರಿಸಿ ಎಸ್ಐಟಿ ಅಧಿಕಾರಿಗಳು ಆದಿಶೇಷ ನಾರಾಯಣನ ಕುಟುಂಬಸ್ಥರಿಗೆ ಬೆಳ್ತಂಗಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ, ಆದಿಶೇಷನ ಅಕ್ಕಂದಿರಾದ ಲಕ್ಷ್ಮಿ, ಪದ್ಮಾ ಹಾಗೂ ಆತನ ಭಾವ ಶಿವಕುಮಾರ್ ಅವರು ವಿಚಾರಣೆಗೆ ಆಗಮಿಸಿದ್ದಾರೆ. ಕುಟುಂಬಸ್ಥರು, ಆದಿಶೇಷ ನಾರಾಯಣ ನಾಪತ್ತೆಯಾದ ನಂತರ ನಾವು ಹುಡುಕಲಿಲ್ಲ. ಅವನು ಮಾನಸಿಕವಾಗಿ ಚೆನ್ನಾಗಿದ್ದ’ ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ.
*ಡಿಎನ್ಎ ಪರೀಕ್ಷೆಗೆ ಸೂಚನೆ:*
ಸದ್ಯಕ್ಕೆ ನಾಪತ್ತೆಯಾದ ಯುವಕ ಆದಿಶೇಷ ನಾರಾಯಣ ಮತ್ತು ಪತ್ತೆಯಾದ ಅಸ್ಥಿಪಂಜರದ ನಡುವೆ ಸಂಬಂಧವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಸ್ಐಟಿ ಅಧಿಕಾರಿಗಳು ಕುಟುಂಬಸ್ಥರಿಗೆ ಡಿಎನ್ಎ ಪರೀಕ್ಷೆಗಾಗಿ ಮತ್ತೊಮ್ಮೆ ಕಚೇರಿಗೆ ಬರಲು ಸೂಚಿಸಿದ್ದಾರೆ. ಡಿಎನ್ಎ ವರದಿ ಬಂದ ನಂತರವೇ ಅಸ್ಥಿಪಂಜರವು ನಾಪತ್ತೆಯಾದ ಯುವಕನದ್ದೇ ಅಥವಾ ಬೇರೆಯವರದ್ದೇ ಎಂಬುದು ಸ್ಪಷ್ಟವಾಗಲಿದೆ. ಈ ಅಸ್ಥಿಪಂಜರ ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ತಿರುವನ್ನು ನೀಡುವ ಸಾಧ್ಯತೆಯಿದೆ.