ಇತ್ತೀಚಿನ ಸುದ್ದಿ
150 ವರ್ಷದ ಬಳಿಕ ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ ಮತ್ತೊಂದು ಬೃಹತ್ ಉದ್ಯಾನ: 154 ಎಕರೆ ಪ್ರದೇಶದಲ್ಲಿ ಜೈವಿಕ ಪಾರ್ಕ್
03/06/2025, 17:09

ಬೆಂಗಳೂರು(reporterkarnataka.com): ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿರುವ 153.39 ಎಕರೆ ಅರಣ್ಯ ಭೂಮಿಯಲ್ಲಿ ಬೃಹತ್ ಜೈವಿಕ ಉದ್ಯಾನವನ ಅಭಿವೃದ್ಧಿಪಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಮಾದಪ್ಪನಹಳ್ಳಿ ನೆಡುತೋಪಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ವಶದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ವಿಧ್ಯುಕ್ತವಾಗಿ ಹಿಂಪಡೆಯಲು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಉದ್ಯಾನ ಮುಂಬರುವ ದಿನಗಳಲ್ಲಿ ಉತ್ತರ ಬೆಂಗಳೂರಿಗೆ ಮಹತ್ವದ ಶ್ವಾಸ ತಾಣವಾಗಲಿದೆ ಎಂದರು.
ಇಲ್ಲಿ ಕೆ.ಎಫ್.ಡಿ.ಸಿ. ನೀಲಗಿರಿ ಮರ ಬೆಳೆಸಿದ್ದು, ಈ ಎಲ್ಲ ಮರಗಳನ್ನೂ ತೆರವು ಮಾಡಿ, ಸ್ಥಳೀಯ ಪ್ರಭೇದದ ಬಿಲ್ವ, ಮಹಾಬಿಲ್ವ, ಹೊನ್ನೆ, ನೇರಳೆ, ಮತ್ತಿ, ಆಲ, ಅರಳಿಯ ಜೊತೆಗೆ ಪಶ್ಚಿಮಘಟ್ಟದಲ್ಲಿ ಬೆಳೆಯುವ ವಿವಿಧ ಪ್ರಭೇದದ ಸಸ್ಯಗಳನ್ನೂ ಬೆಳೆಸಲು ಉದ್ದೇಶಿಸಲಾಗಿದೆ ಎಂದರು.
ಪ್ರಸ್ತುತ ಈ 154 ಎಕರೆ ಪ್ರದೇಶದಲ್ಲಿ ನೀಲಗಿರಿಯ ಜೊತೆಗೆ ಹೊನ್ನೆ, ಬೀಟೆ, ಜಾಲಿ, ಕಗ್ಗಲಿ, ಎಲಚಿ, ಚಿಗರೆ, ಹೊಳೆಮತ್ತಿ, ಮತ್ತಿ, ಕರಿಮತ್ತಿ ಮೊದಲಾದ 800 ಮರಗಳಿದ್ದು, ಅವುಗಳನ್ನು ಸಂರಕ್ಷಿಸಲಾಗುವುದು ಎಂದು ಅವರು ನುಡಿದರು.
ಎಲ್ಲ 154 ಎಕರೆ ಅರಣ್ಯ ಭೂಮಿಗೂ ಕಾಂಪೌಂಡ್ ಹಾಕಲಾಗಿದ್ದು, ಒತ್ತುವರಿ ಆಗದಂತೆ ರಕ್ಷಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿರಾಗಾಂಧೀ ಜೈವಿಕ ಉದ್ಯಾನ, ವಿಶ್ವಗುರು ಬಸವಣ್ಣ ದಿವ್ಯೌಷಧೀಯ ಸಸ್ಯ ವನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪಕ್ಷಿ ಲೋಕ, ನಾಡಪ್ರಭು ಕೆಂಪೇಗೌಡ ಕಿರು ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣ ಮಾಡಲು ಸಲಹೆ ಬಂದಿದೆ, ಈ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.
*ಅರಣ್ಯೇತರ ಉದ್ದೇಶಕ್ಕೆ ಬಳಕೆ ಇಲ್ಲ:*
ಇದೇ ಸಂದರ್ಭದಲ್ಲಿ ಉದ್ಯಾನದ ಸ್ವರೂಪದ ಬಗ್ಗೆ ಹಿರಿಯ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಮತ್ತು ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ಮೀಸಲು ಅರಣ್ಯದಲ್ಲಿ ಅವಕಾಶವಿರುವ ಚಟುವಟಿಕೆಗಳನ್ನು ಮಾತ್ರ ಮಾಡಲಾಗುವುದು. ಅಗತ್ಯಬಿದ್ದರೆ ತೀರುವಳಿ ಅನುಮತಿ ಪಡೆದು ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
*ಅತ್ಯಗತ್ಯವಾದ ಶ್ವಾಸ ತಾಣ:*
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಲಾಲ್ ಬಾಗ್ ಇರುವ ಸ್ಥಳದಲ್ಲಿ ಒಂದು ಹೂವಿನ ತೋಟ ಮಾಡಿ ಅಲ್ಲಿ ಗೋಪುರ ನಿರ್ಮಿಸಿದ್ದರು. ನಂತರದ ದಿನಗಳಲ್ಲಿ ಅಂದರೆ 1760ರಲ್ಲಿ ಹೈದರಾಲಿ ಆ ಹೂತೋಟವನ್ನು ಲಾಲ್ ಬಾಗ್ ಆಗಿ ಅಭಿವೃದ್ಧಿ ಪಡಿಸಿದರು. ಇದು 240 ಎಕರೆ ಪ್ರದೇಶದಲ್ಲಿದೆ. ಅಂದರೆ ಲಾಲ್ ಬಾಗ್ ನಿರ್ಮಾಣವಾಗಿದ್ದು 265 ವರ್ಷಗಳ ಹಿಂದೆ. ಇನ್ನು ಬೆಂಗಳೂರಿನಲ್ಲಿರುವ ಮತ್ತೊಂದು ಬೃಹತ್ ಉದ್ಯಾನ ಕಬ್ಬನ್ ಪಾರ್ಕ್, ಅಂದಿನ ಮೈಸೂರು ಸಂಸ್ಥಾನದ ಕಮಿಷನರ್ ಆಗಿದ್ದ ಜಾನ್ ಮೀಡ್ ಅವರು ಮುಖ್ಯ ಎಂಜಿನಿಯರ್ ಆಗಿದ್ದ ರಿಚರ್ಜ್ ಸ್ಯಾಂಕಿ ಅವರಿಂದ 1870ರಲ್ಲಿ ಕಬ್ಬನ್ ಪಾರ್ಕ್ ವಿನ್ಯಾಸ ಮಾಡಿಸಿದ್ದರು. ಇಂದು 197 ಎಕರೆ ಪ್ರದೇಶದಲ್ಲಿ ಕಬ್ಬನ್ ಪಾರ್ಕ್ ಜನಾಕರ್ಷಣೆಯ ತಾಣವಾಗಿದೆ. ಅಂದರೆ ಕಬ್ಬನ್ ಪಾರ್ಕ್ ನಿರ್ಮಾಣವಾಗಿ 155 ವರ್ಷ ಆಗಿದೆ. ಆದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣ ಆಗಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಬಹುತೇಕ ಒಂದೂವರೆ ಶತಮಾನದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣದ ಕಲ್ಪನೆ ಸಾಕಾರವಾಗುತ್ತಿದೆ. ಇಂದು ಅಧಿಕೃತವಾಗಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆಯಲಾಗಿದ್ದು, ನೀಲಗಿರಿ ತೆರವು ಮಾಡಿ, ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ,ಮುಂದಿನ 2 ತಿಂಗಳಲ್ಲಿ ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಉದ್ಯಾನವನಕ್ಕೆ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದರು.
ಇಲ್ಲಿಗೆ 4-5 ಕಿ.ಮೀ. ದೂರದಲ್ಲಿ ಬಿಡಿಎ ಅಭಿವೃದ್ಧಿ ಪಡಿಸುತ್ತಿರುವ ಶಿವರಾಮಕಾರಂತ ಬಡಾವಣೆಯೂ ಇದೆ. ಇತ್ತ ಸಿಂಗನಾಯಕನಹಳ್ಳಿ ಆರ್.ಟಿ.ಓ. ಕಚೇರಿ ಇದೆ. ಈ ಉದ್ಯಾನ ಅಭಿವೃದ್ಧಿ ಆದ ಬಳಿಕ ಇದೊಂದು ಪ್ರೇಕ್ಷಣೀಯ ಸ್ಥಳವಾಗಲಿದೆ ಎಂಬ ಪೂರ್ಣ ವಿಶ್ವಾಸ ನನಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
*ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಸಿಎಸ್.ಆರ್. ನಿಧಿ ಬಳಕೆ:*
ಈ ಉದ್ಯಾನವನದ ನಿರ್ಮಾಣಕ್ಕೆ ಆರಂಭಿಕವಾಗಿ 20 ಕೋಟಿ ರೂ. ಮಂಜೂರು ಮಾಡಿ ಡಿಪಿಆರ್ ಮತ್ತು ಆರಂಭಿಕ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ಸಾಂಸ್ಥಿಕ ಕಂಪನಿಗಳು ಕೈಜೋಡಿಸಿ ಸಿ.ಎಸ್.ಆರ್. ನಿಧಿ ನೀಡಿದರೆ, ಮುಂದಿನ ಮೂರು ವರ್ಷದೊಳಗೆ ಈ ಉದ್ಯಾನ ಪೂರ್ಣಗೊಳಿಸಿ, ಇದೇ ಸರ್ಕಾರದ ಅವಧಿಯಲ್ಲಿ ಉದ್ಘಾಟಿಸುವುದು ತಮ್ಮ ಗುರಿಯಾಗಿದೆ ಎಂದರು.
ಈ ಉದ್ಯಾನಕ್ಕೆ ಸಮೀಪದಲ್ಲೇ ವಿಮಾನ ನಿಲ್ದಾಣವೂ ಇದೆ. ವೈಮಾನಿಕ ಪ್ರದರ್ಶನ ತಾಣವೂ ಇದೆ. ಇಲ್ಲಿ ಉದ್ಯಾನ ನಿರ್ಮಾಣ ಮಾಡುವುದರಿಂದ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಲಭಿಸಲಿದೆ ಎಂದರು.
ವನ್ಯಜೀವಿ ಸಪ್ತಾಹದ ಸಮಾರೋಪದ ದಿನ ಮಾದಪ್ಪನಹಳ್ಳಿಯ 153.39 ಎಕರೆ ಪ್ರದೇಶದ ಬಗ್ಗೆ ತಿಳಿಸಲಾಯಿತು. ಕೂಡಲೇ ಉತ್ತರ ಬೆಂಗಳೂರಿನಲ್ಲಿ ಲಾಲ್ ಬಾಗ್ ರೀತಿ ಒಂದು ಉದ್ಯಾನ ಮಾಡಬೇಕು ಎಂಬ ಆಲೋಚನೆ ಹೊಳೆಯಿತು. ಕೂಡಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಾರೋಪ ಸಮಾರಂಭದಲ್ಲೇ ಇದನ್ನು ಪ್ರಕಟಿಸಿದೆ ಎಂದು ತಿಳಿಸಿದರು.
ಇದು ತಮ್ಮ ಕನಸಿನ ಯೋಜನೆಯಾಗಿದ್ದು, ಯಲಹಂಕ ಸುತ್ತಮುತ್ತ ಇರುವ ನೂರಾರು ವಸತಿ ಬಡಾವಣೆಗಳ ಜನರಿಗೆ ಇದು ಉತ್ತಮ ಶ್ವಾಸತಾಣ ಮತ್ತು ಜನಾಕರ್ಷಣೆಯ ಕೇಂದ್ರವೂ ಆಗುತ್ತದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್ ಲಿಮಿಟೆಡ್ ಅಧ್ಯಕ್ಷ ಮನೋಹರ್, ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಕಡೆ, ಕೆ.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶಿರೂರ್, ಹಿರಿಯ ಅರಣ್ಯಾಧಿಕಾರಿಗಳಾದ ಸೀಮಾ ಗಾರ್ಗ್, ಶಾಶ್ವತಿ ಮಿಶ್ರಾ, ಕುಮಾರ್ ಪುಷ್ಕರ್, ಶ್ರೀನಿವಾಸ್, ಸಿವಸಂಕರ್, ರವೀಂದ್ರ ಕುಮಾರ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.