ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಚಿತ್ತರಂಜನ್ ಬೋಳಾರರಿಗೆ ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿ
17/11/2025, 22:09
ಮಂಗಳೂರು(reporterkarnataka.com): ತುಳುನಾಡ ರಕ್ಷಣಾ ವೇದಿಕೆ ಹಾಗೂ ತುಳುನಾಡ ಸೂರ್ಯ ಪತ್ರಿಕೆ ವತಿಯಿಂದ ಸಹಕಾರ ಸಪ್ತಾಹ-೨೦೨೫ ರ ಅಂಗವಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಶ್ರೀ ಯೋಗಿಶ್ ಶೆಟ್ಟಿ ಜಪ್ಪು ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಉರ್ವಸ್ಟೋರ್ನ ತುಳುಭವನದ ಸಿರಿ ಚಾವಡಿಯಲ್ಲಿ ಜರುಗಿತು.

ಸಮಾರಂಭದಲ್ಲಿ ದಿವ್ಯ ಸಾನ್ನಿದ್ಯವನ್ನು ವಹಿಸಿದ್ದ ಮೂಡಬಿದಿರೆ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ “ಮಾನವ ಆದಿಯಿಂದಲೂ ಹುಟ್ಟಿನಾರಭ್ಯ ಸಹಕಾರ ತತ್ವದಿಂದಲೇ ಬದುಕನ್ನು ಬಹುವಾಗಿ ಸಿರಿವಂತಗೊಳಿಸಿದವ. ಅದರ ಮುಂದುವರಿದ ಭಾಗವೇ ಇಂದಿನ ಸಹಕಾರ ಸಂಘಗಳ ಸೇವಾ ಭಾವ, ಮನುಕುಲೋದ್ದಾರಕ್ಕೆ ಸಹಕಾರಿ ಸಂಘಗಳು ಮತ್ತಷ್ಟೂ ಹಿರಿದಾದ ಪಾಲನ್ನು ಸಲ್ಲಿಸುವಂತಾಗಲಿ. ಈ ನಿಟ್ಟಿನಲ್ಲಿ ಇವತ್ತಿನ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವು ಶ್ಲಾಘನೀಯ” ಎಂದು ಹರಸಿದರು.
ಮಾಡೂರಿನ ಶಿವ ದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರು ದಿವ್ಯ ಉಪಸ್ಥಿತಿಯನ್ನು ವಹಿಸಿ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಕೃಷ್ಣ ಪಾಲೆಮಾರ್ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ರವರು ಸಹಕಾರ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಆತ್ಮ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ ಇವರಿಗೆ “ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದರು.
ಅದಾನಿ ಗ್ರೂಪ್ನ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಶ್ರೀ ಎ.ಸಿ.ಭಂಡಾರಿ,ಧರ್ಮವಲೋಕನದ ಗಡಿಕಾರರು ಮತ್ತು ಅಧ್ಯಕ್ಷರಾದ ಶ್ರೀ ದೋಣಿಂಜೆ ಗುತ್ತು ಪ್ರಮೋದ್ ಕುಮಾರ್ ರೈ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಮೋಹನಂಗಯ್ಯ ಸ್ವಾಮಿ , ಕೆದಂಬಡಿ ರಾಮಯ್ಯಗೌಡ ಸ್ಮಾರಕ ಸಮಿತಿಯ ಅಧ್ಯಕ್ಷರಾದ ಶ್ರೀ ಕಿರಣ್ ಬುಡ್ಲೆಗುತ್ತು , ವಕೀಲರ ಘಟಕ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ರಾಘವೇಂದ್ರ ರಾವ್, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಮತ್ತಿತ್ತರರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ. ವಿವೇಕಾನಂದ ರಾವ್ ಸೇರಿದಂತೆ ತುಳುನಾಡ ರಕ್ಷಣಾ ವೇದಿಕೆ ಪ್ರಮುಖ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಶ್ರೀ ಪ್ರಶಾಂತ್ ಭಟ್ ಕಡಬ ಸ್ವಾಗತಿಸಿ, ಶ್ರೀ ಕ್ಲೀಟಸ್ ಲೋಬೊ ವಂದನಾರ್ಪಣೆಗೈದರು. ಶ್ರೀಮತಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.













