ಇತ್ತೀಚಿನ ಸುದ್ದಿ
ಹುಲಿ ಮರಿಗಳೊಂದಿಗೆ ವಿಡಿಯೋ ಚಿತ್ರೀಕರಣ, ತಾಯಿ ಹುಲಿ ನಾಪತ್ತೆ: ಸಿಐಡಿ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ
06/11/2025, 20:10
ಬೆಂಗಳೂರು(reporterkarnataka.com): ಚಾಮರಾಜನಗರ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಬೇಡಗುಳಿ ಅರಣ್ಯ ಪ್ರದೇಶದಲ್ಲಿ 3 ನವಜಾತ ಹುಲಿ ಮರಿಗಳೊಂದಿಗೆ ಕೆಲವರು ವಾಹನದ ಬೆಳಕಿನಲ್ಲಿ ಫೋಟೋ, ವಿಡಿಯೋ ಮಾಡಿರುವ ಹಾಗೂ ತಾಯಿ ಹುಲಿ ಸಾವಿನ ಶಂಕೆ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಲಿಖಿತ ಸೂಚನೆಯಲ್ಲಿ ಅವರು, 2015ರಲ್ಲಿ ಅರಣ್ಯ ಅಪರಾಧ ಪ್ರಕರಣ ದಾಖಲಾಗಿದ್ದ ಸಂಸ್ಥೆಯೊಂದರೊಂದಿಗೆ ನಂಟು ಹೊಂದಿರುವವರೂ ಸೇರಿ ಕೆಲವರು ಅರಣ್ಯದಲ್ಲಿ ವಾಹನದ ಹೆಡ್ ಲೈಟ್ ಬೆಳಕಲ್ಲಿ, ಹುಲಿಮರಿಗಳ ಚಿತ್ರೀಕರಣ ಮಾಡಿ, ಸ್ಪರ್ಶಿಸಿ ವನ್ಯಜೀವಿ ಕಾಯಿದೆ ಉಲ್ಲಂಘಿಸಿರುವ ಬಗ್ಗೆ ಹಾಗೂ ತಾಯಿ ಹುಲಿಯ ಇರುವಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆದೇಶ ನೀಡಿದ್ದಾರೆ.
ಈ ಮಧ್ಯೆ ಅಕ್ಟೋಬರ್ 15ರಂದು ಬಿ.ಆರ್.ಟಿ. ಅರಣ್ಯ ವಿಭಾಗದ ವತಿಯಿಂದ ನೀಡಿದ ಮಾಧ್ಯಮ ಪ್ರಕಟಣೆ ಹಾಗೂ ಹುಲಿ ಮರಿ ಜೊತೆ ಕೆಲವರು ವಿಡಿಯೋ ಮಾಡಿರುವ ದೃಶ್ಯ ತುಣುಕು ಸಾಮಾಜಿಕ ತಾಣದಲ್ಲಿ ವೈರಲ್ ಆದ ಬಳಿಕ ನೀಡಿರುವ ಹೇಳಿಕೆಗಳಲ್ಲಿ ವ್ಯತ್ಯಾಸ ಮತ್ತು ಗೊಂದಲ ಇರುವುದರ ಜೊತೆಗೆ ತಾಯಿಹುಲಿ ಹತ್ಯೆ ಆಗಿರುವ ಸಂಶಯವೂ ಮೂಡಿರುವ ಕಾರಣ ಹಾಗೂ ಎನ್.ಜಿ.ಓ.ಗಳಿಗೆ ಬರುವ ಹಣ ದುರುಪಯೋಗದ ಆರೋಪವೂ ಇರುವುದರಿಂದ ಈ ಪ್ರಕರಣವನ್ನು ಸಿಐಡಿ ತನಿಖೆ ವಹಿಸುವುದು ಸೂಕ್ತ ಎಂದು ಸಚಿವರು ಪರಿಗಣಿಸಿದ್ದಾರೆ.












