ಇತ್ತೀಚಿನ ಸುದ್ದಿ
Mysore | ವಿಶ್ವವಿಖ್ಯಾತ ನಾಡ ಹಬ್ಬ ಮುಗಿಸಿ ತಮ್ಮ ಕ್ಯಾಂಪ್ ಗಳಿಗೆ ಹೊರಟ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಮ್
05/10/2025, 21:12

ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ಟೀಂ ನಾಡಿನಿಂದ ಕಾಡಿನತ್ತ ಹೊರಟಿದ್ದು, ದಸರಾ ಆನೆಗಳ ಈ ಬೀಳ್ಕೊಡುಗೆಯು ಇಂದು ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾಯ್ತು.
ಹೌದು, ಕಳೆದ ಒಂದೂವರೆ ತಿಂಗಳಿನಿಂದ ಗಜಪಡೆ ಅರಮನೆ ಆವರಣದಲ್ಲಿ ಬೀಡು ಬಿಟ್ಟಿತ್ತು. ಜಂಬೂ ಸವಾರಿ ಮೆರವಣಿಗೆಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದವು. ಜಂಬೂ ಸವಾರಿ ಮೆರವಣಿಗೆ ಮುಗಿದ ಎರಡು ದಿನಗಳ ಬಳಿಕ ಸ್ವಸ್ಥಾನದತ್ತ ಗಜಪಡೆ ಹೊರಟಿದೆ.
ದಸರಾ ಅಂಗವಾಗಿ ಕಳೆದ 61 ದಿನಗಳಿಂದ ಮೈಸೂರಿನಲ್ಲಿ ಆನೆಗಳು ಬೀಡು ಬಿಟ್ಟಿದ್ದವು. ಇದೀಗ ಇಂದು ವಾಪಸ್ ಕಾಡಿಗೆ ಹೊರಟ್ಟಿದ್ದು, ಈ ಹಿನ್ನಲೆ ಅಭಿಮನ್ಯು ನೇತೃತ್ವದ ಎಲ್ಲಾ 14 ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಿ ಕುಂಬಳಕಾಯಿ ಹೊಡೆದು ಅರಣ್ಯ ಇಲಾಖೆ ಬೀಳ್ಕೊಡುಗೆ ನೀಡಿದೆ.
ಅರಮನೆ ಅಂಗಳದಲ್ಲಿ ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸಿ ಬಳಿಕ ಅವುಗಳಿಗೆ ಪ್ರಿಯವಾದ ಬೆಲ್ಲ, ಕಬ್ಬು, ತೆಂಗು, ಬಾಳೆಹಣ್ಣು ನೀಡಿ ಸತ್ಕಾರ ಮಾಡಲಾಯಿತು. ಅಭಿಮನ್ಯು ನೇತೃತ್ವದ ಗಜಪಡೆಯನ್ನು ಬೀಳ್ಕೊಡಲು ಕಿಕ್ಕಿರಿದು ಜನ ಸೇರಿತ್ತು.
ದಸರಾದಲ್ಲಿ ಭಾಗಿಯಾಗಿದ್ದ ಆನೆಗಳನ್ನು ನೋಡಲು ಪುಟ್ಟ ಪುಟ್ಟ ಮಕ್ಕಳು, ದೊಡ್ಡವರು ಎಲ್ಲರೂ ಕೂಡ ಆನೆಗಳ ಜೊತೆ ಪೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದು, ಆನೆಗಳ ಜೊತೆ ಮಾವುತರು ಕಾವಾಡಿಗರು ಹಾಗೂ ಕುಟುಂಬ ವರ್ಗ ಆನೆ ಶಿಬಿರಗಳತ್ತ ಪಯಣ ಬೆಳೆಸಿದವು.