ಇತ್ತೀಚಿನ ಸುದ್ದಿ
Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ ಬೊಂಬೆಗಳ ಆಕರ್ಷಣೆ
03/10/2025, 14:17

ಡಿ.ಎಲ್. ಹರೀಶ್ ಬೆಂಗಳೂರು
info.reporterkarnataka@gmail.com
ದಸರಾ ಎಂದರೆ ವಿಜಯದ ಹಬ್ಬ. ಬಹಳಷ್ಟು ಜನರು ತಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ನವ ದುರ್ಗೆಯರ ಪೂಜೆಯನ್ನು ಮಾಡುತ್ತಾರೆ. ದೇವಸ್ಥಾನ, ಮಠ, ಮಂದಿರಗಳಿಗೆ ತೆರಳಿ ಶರನ್ನವರಾತ್ರಿ ಆಚರಿಸುತ್ತಾರೆ. ಆದರೆ ಬೆಂಗಳೂರಿನ ಜೆ.ಪಿ.ನಗರದ ಎರಡನೇ ಹಂತದಲ್ಲಿ ಇರುವ ವೈದ್ಯ ದಂಪತಿ ತಮ್ಮ ಮನೆಯನ್ನು ದೇವಸ್ಥಾನವಾಗಿ ಪರಿವರ್ತಿಸುವ ಮೂಲಕ ವಿವಿಧ ರೀತಿಯ ದಸರಾ ಬೊಂಬೆಗಳನ್ನು ಕೂರಿಸಿ ಹತ್ತು ದಿನಗಳ ಕಾಲ ನೇಮ ನಿಷ್ಠೆ ಶ್ರದ್ಧೆ ವಹಿಸಿ ಪೂಜಿಸಿದ್ದಾರೆ.
ಹೃದ್ರೋಗ ತಜ್ಞರಾದ ಡಾ.ಹೆಚ್.ಎಸ್. ನಟರಾಜ್ ಶೆಟ್ಟಿ ಮತ್ತು ಸ್ಕಿನ್ ಸ್ಪೆಶಲಿಷ್ಟ ಡಾ.ಎ.ಬಿ.ಶಿಲಾ ನಟರಾಜ್ ತಮ್ಮ ಮನೆಯಲ್ಲಿ ಕೂರಿಸಿರುವ ಬೂಂಬೆಗಳು ಒಂದೊಂದು ಕ್ಷೇತ್ರದ ಮೇಲೆ ಬೆಳಕು ಚೆಲ್ಲುತ್ತದೆ.
ಮೈಸೂರು ಅರಮನೆ ದರ್ಬಾರ್ ಹಾಲ್, ಜಂಬೂ ಸವಾರಿ, ಜಟ್ಟಿ ಕಾಳಗ, ರಾಮ, ಲಕ್ಷ್ಮಣ, ಭರತ, ಶತೃಘ್ನ ತೊಟ್ಟಿಲು ಮಕ್ಕಳಾಗಿ ಹುಟ್ಟುವ ಮೂಲಕ ಶುರುವಾಗುವ ರಾಮಾಯಣದ ಕಥೆ ಸೀತಾ ಸ್ವಯಂವರ, ಸೀತಾ ಅಪಹರಣ, ಲಂಕಾಧೀಶ್ವರ ರಾವಣನ ಆಸ್ಥಾನದಲ್ಲಿ ಹನುಮಂತನ ಬಾಲದ ಸಿಂಹಾಸನ, ಅಶೋಕ ವನ, ರಾಮಸೇತು ನಿರ್ಮಾಣ, ರಾವಣನ ಸಂಹಾರ, ಕುಂಭಕರ್ಣನ ಗಾಢವಾಗಿ ನಿದ್ರೆಗೆ ಜಾರಿರುವುದು, ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯ ಹೀಗೆ ಎಲ್ಲವೂ ಒಂದು ರೀತಿಯಲ್ಲಿ ಆಕರ್ಷಿಸುತ್ತದೆ. ಅದರಲ್ಲೂ ವಿಶೇಷವಾಗಿ ಕಾಶಿ ವಿಶ್ವನಾಥನ ಸನ್ನಿಧಿ ಪಕ್ಕದಲ್ಲಿ ಹರಿಯುವ ಗಂಗಾನದಿ. ಅದರ ತಟದಲ್ಲಿರುವ ಹರಿಶ್ಚಂದ್ರ ಘಾಟ್ .ಅಲ್ಲಿ ಮನುಷ್ಯನ ದೇಹವನ್ನು ಸುಡುವ ಚಿತ್ರಣವು ಮಾತ್ರ ಗಮನ ಸೆಳೆಯಿತು. ಮನುಷ್ಯ ಹುಟ್ಟಿನಿಂದ ಮರಣದ ವರಗೆ ಸಾರುವ ಒಂದು ವಿಶಿಷ್ಟವಾದ ಅನುಮತಿ ನೀಡುತ್ತದೆ.
ಹತ್ತನೇ ದಿನ ದುರ್ಗಾದೇವಿ ಮೂರ್ತಿ ಆರಾಧನೆ ಎಲ್ಲರ ಮನ ಸೂರೆಮಾಡುತ್ತದೆ. ಸಾಕ್ಷತ್ ದೇವಿ ಇಲ್ಲಿ ನೆಲೆಸಿದ್ದಾಳೆ ಎಂದು ಭಾಸವಾಗುತ್ತದೆ. ನಿಜಕ್ಕೂ ಬಹಳ ಅರ್ಥಪೂರ್ಣವಾಗಿ ತಿಳಿವಳಿಕೆ ನೀಡುವ ಉದ್ದೇಶದಿಂದಲೇ ದಸರಾ ಹಬ್ಬದ ಸಂದರ್ಭದಲ್ಲಿ ಬೊಂಬೆಗಳನ್ನು ವೈದ್ಯ ದಂಪತಿಗಳು ಕೂರಿಸಿದ್ದಾರೆ ಎನಿಸುತ್ತದೆ.