ಇತ್ತೀಚಿನ ಸುದ್ದಿ
ನರಿಕೊಂಬು: ಬೆಂಕಿ ಆಕಸ್ಮಿಕಕ್ಕೆ ಮನೆ ಭಸ್ಮ; ಬೈಕ್ ಅಗ್ನಿಗಾಹುತಿ; 5 ಲಕ್ಷಕ್ಕೂ ಹೆಚ್ಚು ನಷ್ಟ
08/09/2025, 22:40

ಜಯಾನಂದ ಪೆರಾಜೆ ಬಂಟ್ವಾಳ
info.reporterkarnata@gmail.com
ನರಿಕೊಂಬು ಗ್ರಾಮ ಬೋರುಗುಡ್ಡೆ ಎಂಬಲ್ಲಿ ಬೆಂಕಿ ಆಕಸ್ಮಿಕಕ್ಕೆ ಮನೆಯೊಂದು ಸುಟ್ಟು ಹೋಗಿದ್ದು, ಮನೆ ಎದುರು ನಿಲ್ಲಿಸಿದ್ದ ಬೈಕ್ ಅಗ್ನಿಗೆ ಆಹುತಿಯಾಗಿದೆ.
ಉಷಾ ರಮೇಶ್ ಅವರ ಮನೆಯಲ್ಲಿ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಮನೆ ಹಿಂಬದಿ ಪೂರ್ಣ ಭಸ್ಮವಾಗಿದೆ. ಮನೆಯ ಎದುರು ಇದ್ದ ಬೈಕ್ ಬೆಂಕಿಯ ಬಿಸಿಯಿಂದ ಮೆಲ್ಟ್ ಆಗಿದೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿತ್ತು. ಅಷ್ಟರಲ್ಲಿ ಊರ ಮಂದಿ ನೀರು ಹಾಕಿ ಬೆಂಕಿ ಆರಿಸಿದ್ದರು. ಘಟನೆಯಲ್ಲಿ ಸುಮಾರು
5 ಲಕ್ಷ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಕಂದಾಯ ಅಧಿಕಾರಿಗಳು, ಮಾಜಿ ಸಚಿವ ಬಿ. ರಮಾನಾಥ ರೈ ಸಹಿತ ಪ್ರಮುಖರು ಸ್ಥಳಕ್ಕೆ ಬಂದಿದ್ದರು.
ಮುಂಜಾನೆ ಪುರೋಹಿತ ಗಣೇಶ್ ಮಯ್ಯ ಅವರು ಪೂಜಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದಟ್ಟ ಹೊಗೆ ಬೆಂಕಿಯನ್ನು ಕಂಡು ಹತ್ತಿರದ ಮನೆಯಲ್ಲಿ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಉಷಾ ಎದ್ದು ಹೊಗೆಯಿಂದ ಕೆಮ್ಮುತ್ತಾ ಹೊರಗೆ ಬಂದಿದ್ದರು.
ಅವರ ಪತಿ ಮೂರು ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತರಾಗಿದ್ದರು.
ಮನೆಯಲ್ಲಿ ಪುತ್ರ ಮತ್ತು ಮೊಮ್ಮಗ ಇದ್ದರು. ಘಟನೆಗೆ ಸ್ಪಷ್ಟ ಕಾರಣ ತಿಳಿದಿಲ್ಲ. ಬಚ್ಚಲು ಮನೆ, ಹತ್ತಿರದ ಕೋಣೆಗಳ ವಿದ್ಯುತ್ ವಯರ್ ಬೆಂಕಿಯಿಂದ ಕರಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.