ಇತ್ತೀಚಿನ ಸುದ್ದಿ
Bangaluru | ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಸಾರ್ವಜನಿಕ ಸಾರಿಗೆ ಮಾತ್ರ ಏಕೈಕ ಪರಿಹಾರ: ಸಂಸದ ತೇಜಸ್ವೀ ಸೂರ್ಯ
14/07/2025, 19:25
ಬೆಂಗಳೂರು(reporterkarnataka.com): ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವೈಜ್ಞಾನಿಕವಾದ ‘ಸುರಂಗ ರಸ್ತೆ’ ಯೋಜನೆಯನ್ನು ಜಾರಿಗೊಳಿಸುತ್ತಿರುವುದಕ್ಕೆ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಯೋಜನೆ ಸಾಮಾನ್ಯ ಜನರ ವೆಚ್ಚದಲ್ಲಿ ಗಣ್ಯರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಗಡಾಯಿಸುತ್ತಿರುವ ಸಂಚಾರ ಸಮಸ್ಯೆಗೆ ಮಾರಕವಾಗಬಹುದಾದ ಸುರಂಗ ರಸ್ತೆ ಯೋಜನೆಯನ್ನು ಜಾರಿಗೊಳಿಸುವ ಬದಲು, ಕಾಂಗ್ರೆಸ್ ಸರ್ಕಾರ ಹೆಚ್ಚು ಸಾರ್ವಜನಿಕ ಸಾರಿಗೆ ಪರಿಹಾರಗಳನ್ನು ನಿರ್ಮಿಸುವತ್ತ ಗಮನಹರಿಸಬೇಕು ಎಂದು ಸೂರ್ಯ ರವರು ಒತ್ತಿ ಹೇಳಿದರು.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಸೂರ್ಯ ರವರು, “ಬೆಂಗಳೂರಿನ ಸಂಚಾರವನ್ನು ದೇವರೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಅವರೇ ಹೇಳಿದ್ದು, ಈ ಮೂಲಕ ತಮ್ಮ ಅಸಮರ್ಥತೆಯನ್ನು ಹೊರಹಾಕುತ್ತಿದ್ದಾರೆಯೇ ಹೊರತು ಪರಿಹಾರಗಳ ಬಗ್ಗೆ ಗಮನ ಹರಿಸುತ್ತಿಲ್ಲ. ನಮಗೆ ದೈವಿಕ ಹಸ್ತಕ್ಷೇಪಕ್ಕಿಂತ, ಸಮರ್ಥ ಆಡಳಿತ ಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹೆಬ್ಬಾಳದಿಂದ, ಸಿಲ್ಕ್ ಬೋರ್ಡ್ವರೆಗಿನ ಸುರಂಗ ರಸ್ತೆ ಸಾಮಾನ್ಯ ಜನರ ವೆಚ್ಚದಲ್ಲಿ ಗಣ್ಯರಿಗಾಗಿ ನಿರ್ಮಿಸುತ್ತಿರುವ ದುಂದು ವೆಚ್ಚದ ಯೋಜನೆಯಾಗಿದೆ. ಸುಲಭ ಜೀವನ ಸುಧಾರಿಸುವ ಬದಲು, ಕಾಂಗ್ರೆಸ್ ವ್ಯವಸ್ಥಿತವಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹಾಳುಮಾಡುತ್ತಿದೆ,” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೂರ್ಯ ಅವರು, ಹೆಬ್ಬಾಳದಿಂದ -ಸಿಲ್ಕ್ ಬೋರ್ಡ್ ಮತ್ತು ಕೆ.ಆರ್. ಪುರಂನಿಂದ ನಾಯಂಡಹಳ್ಳಿವರೆಗಿನ ಸುರಂಗ ರಸ್ತೆ ಕಾರಿಡಾರ್ನ ಕಾರ್ಯಸಾಧ್ಯತಾ ಅಧ್ಯಯನ ಮತ್ತು ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಯಲ್ಲಿ ಕಂಡುಬಂದ ಹಲವಾರು ಲೋಪದೋಷಗಳನ್ನು ಎತ್ತಿ ತೋರಿಸಿದ್ದು, “₹9.5 ಕೋಟಿ ವೆಚ್ಚದಲ್ಲಿ ತಯಾರಿಸಲಾದ ಸುರಂಗ ರಸ್ತೆ ಡಿಪಿಆರ್, ಬಿಎಂಆರ್ಸಿಎಲ್ನಿಂದ ಕೇವಲ ₹1.6 ಕೋಟಿ ವೆಚ್ಚದಲ್ಲಿ ತಯಾರಿಸಿದ ಡಿಪಿಆರ್ನಿಂದ ನೇರವಾಗಿ ನಕಲಿಸಿದ ಡೇಟಾವನ್ನು ಒಳಗೊಂಡಿದೆ ಎಂಬುದನ್ನು ವಿವರಿಸಿದರು.
“ಇದಲ್ಲದೆ, ಸಲಹೆಗಾರರು ಮತ್ತು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿ, ಅದೇ ಡಿಪಿಆರ್ ಬೆಂಗಳೂರಿನ ಕೆಲವು ಕಾರಿಡಾರ್ಗಳ ಸಂಚಾರ ಪ್ರಮಾಣವನ್ನು ವಿಶ್ಲೇಷಿಸುವಾಗ ಮಾಲೆಗಾಂವ್ ಮತ್ತು ನಾಸಿಕ್ ಅನ್ನು ಉಲ್ಲೇಖಿಸುತ್ತದೆ, ಇದು ಬೇರೆ ಯಾವುದೋ ವರದಿಯಿಂದ ನೇರವಾಗಿ ನಕಲು ಮಾಡಿರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ,” ಎಂದು ಸೂರ್ಯ ತಿಳಿಸಿದರು.
ಕಾರ್ಯಸಾಧ್ಯತಾ ವರದಿ ಮತ್ತು ಡಿಪಿಆರ್ ತಯಾರಿಸಿದ ಸಲಹೆಗಾರರ ಬಗ್ಗೆಯೂ ಸೂರ್ಯ ಕಳವಳ ವ್ಯಕ್ತಪಡಿಸಿದ್ದು, ಅಲ್ಟಿನೋಕ್ ಜೊತೆ ಜಂಟಿ ಉದ್ಯಮದಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿದ ಲಯನ್ ಕನ್ಸಲ್ಟೆಂಟ್ಸ್ನ ಒಂದು ಗುಂಪಿನ ಕಂಪನಿಯು ಮಧ್ಯಪ್ರದೇಶದಲ್ಲಿ ಎನ್ಎಚ್ಎಐ ಯೋಜನೆಯಲ್ಲಿ ಕಪ್ಪುಪಟ್ಟಿಗೆ ಸೇರಿದೆ ಎಂದು ಅವರು ಗಮನಸೆಳೆದರು. ಡಿಪಿಆರ್ ರಚಿಸಿದ ರೋಡಿಕ್ ಕನ್ಸಲ್ಟೆಂಟ್ಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ₹500 ಕೋಟಿ ಹಗರಣದಲ್ಲಿ ಭಾಗಿಯಾಗಿದೆ ಎಂದೂ ಸೂರ್ಯ ಆರೋಪ ಮಡಿರುತ್ತಾರೆ.
ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿ (ಬಿಎಂಎಲ್ಟಿಎ) ಕಾಯ್ದೆಯ ಸೆಕ್ಷನ್ 19 ರ ಪ್ರಕಾರ ಕಡ್ಡಾಯವಾಗಿರುವ ಬಿಎಂಎಲ್ಟಿಎ ಅನುಮೋದನೆ ಇಲ್ಲದೆ ಸುರಂಗ ರಸ್ತೆ ಯೋಜನೆ ಮುಂದುವರಿಯುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದು, ಹೆಚ್ಚು ಸಾರ್ವಜನಿಕ ಸಾರಿಗೆ ಆಯ್ಕೆಗಳಿಗೆ ಆದ್ಯತೆ ನೀಡುವಂತೆ ಡಿಸಿಎಂಗೆ ಒತ್ತಾಯಿಸಿದ್ದಾರೆ.
“ಬೆಂಗಳೂರು ಕೇವಲ ಒಂದು ನಗರವಲ್ಲ, ಇದು ಆಧುನಿಕ ಭಾರತದ ಹೃದಯ ಬಡಿತ. ಇದು ತನ್ನ ಜಾಗತಿಕ ಸ್ಥಾನಮಾನಕ್ಕೆ ಸರಿಹೊಂದುವ ಮೂಲಸೌಕರ್ಯಕ್ಕೆ ಅರ್ಹವಾಗಿದೆ. ಡಿಸಿಎಂ ಈ ದುಂದುವೆಚ್ಚದ ಯೋಜನೆಯನ್ನು ಮುಂದುವರಿಸುವ ಅಥವಾ ನಗರದಾದ್ಯಂತ 100 ಕಿ.ಮೀ ಮೇಲ್ಸೇತುವೆ ನಿರ್ಮಿಸುವ ಮೊದಲು, ಈಜಿಪುರ ಮೇಲ್ಸೇತುವೆ ಮತ್ತು ಹೊಸಕೆರೆಹಳ್ಳಿ ಜಂಕ್ಷನ್ನಂತಹ ಸ್ಥಗಿತಗೊಂಡ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಬೆಂಗಳೂರಿಗೆ ಸಮಗ್ರ ಸಂಚಾರ ಯೋಜನೆ 2031ರ ವೇಳೆಗೆ 317 ಕಿ.ಮೀ. ಮೆಟ್ರೋ ಜಾಲವನ್ನು ಕಲ್ಪಿಸುತ್ತದೆ ಮತ್ತು ನಾವು ಈಗ 78 ಕಿ.ಮೀ ನಲ್ಲಿ ಸಿಲುಕಿದ್ದೇವೆ. ಸಿಎಂಪಿ 2031 ರ ವೇಳೆಗೆ ಬೆಂಗಳೂರಿಗೆ ಒಟ್ಟು 16,582 ಬಸ್ಗಳ ಅಗತ್ಯವಿದೆ ಎಂದು ಹೇಳುತ್ತದೆ, ಬೆಂಗಳೂರಿನಲ್ಲಿ ಕೇವಲ 6,835 ಬಸ್ಗಳನ್ನು ಮಾತ್ರ ಬಳಕೆಯಲ್ಲಿವೆ. ಆಡಳಿತವು, ಜನರ ಸುಗಮ ಸಂಚಾರಕ್ಕೆ ಗಮನ ಹರಿಸಬೇಕೇ ಹೊರತು ವಾಹನಗಳಿಗಲ್ಲ” ಎಂದು ಸೂರ್ಯ ರವರು ವಿವರಿಸಿದರು.














