ಇತ್ತೀಚಿನ ಸುದ್ದಿ
ವಿಧಾನ ಪರಿಷತ್ 4 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಹೆಸರು ಪ್ರಕಟ: ದಿನೇಶ್ ಅಮೀನ್ ಮಟ್ಟು, ಆರತಿಕೃಷ್ಣ, ಡಿ.ಜಿ. ಸಾಗರ್, ರಮೇಶ್ ಬಾಬುಗೆ ಅವಕಾಶ
06/06/2025, 21:25

ಬೆಂಗಳೂರು(reporterkarnataka.com): ರಾಜ್ಯ ವಿಧಾನ ಪರಿಷತ್ ನಲ್ಲಿ ತೆರವಾಗಿರುವ 4 ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಎನ್ ಆರ್ ಐ ಮಾಜಿ ಉಪಾಧ್ಯಕ್ಷೆ ಆರತಿಕೃಷ್ಣ, ದಲಿತ ಸಂಘರ್ಷ ಸಮಿತಿಯ ಡಿ.ಜಿ. ಸಾಗರ್ ಹಾಗೂ ಮಾಜಿ ಎಂಎಲ್ ಸಿ ರಮೇಶ್ ಬಾಬು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ದಿನೇಶ್ ಅಮೀನ್ ಮಟ್ಟು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭ್ಯರ್ಥಿಯಾದರೆ, ಆರತಿಕೃಷ್ಣ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಭ್ಯರ್ಥಿ. ಉಳಿದ ಡಿ.ಜಿ. ಸಾಗರ್ ಹಾಗೂ ರಮೇಶ್ ಬಾಬು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭ್ಯರ್ಥಿಯಾಗಿದ್ದಾರೆ. ತೆರವಾಗಿರುವ 4 ಎಂಎಲ್ ಸಿ ಸ್ಥಾನಕ್ಕಾಗಿ ಕಾಂಗ್ರೆಸ್ ನೊಳಗೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸುಮಾರು ಎರಡು ಡಜನಿಗೂ ಅಧಿಕ ಅಕಾಂಕ್ಷಿಗಳು ಈ ಸ್ಥಾನಕ್ಕಾಗಿ ಟೆವಲ್ ಹಾಸಿದ್ದರು.
ಕಾಂಗ್ರೆಸ್ ನ ಹಿರಿಯ ನಾಯಕರಾದ ಬಿ.ಎಲ್. ಶಂಕರ್, ವಿ. ಸುದರ್ಶನ್ ಅವರ ಹೆಸರು ಕೂಡ ಕೇಳಿ ಬರುತ್ತಿತ್ರು. ಆದರೆ, ಅಂತಿಮವಾಗಿ ಈ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ದಿನೇಶ್ ಅಮೀನ್ ಮಟ್ಟು ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ದುಡಿದು ಸಾಕಷ್ಟು ಹೆಸರು ಪಡೆದವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಮಾಜಿ ಸಚಿವರ ಪುತ್ರಿಯಾದ ಆರತಿಕೃಷ್ಣ ಅವರು ಎನ್ ಆರ್ ಐಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಡಿ.ಜಿ. ಸಾಗರ್ ಅವರು ದಸಂಸದಲ್ಲಿ ಕೆಲಸ ಮಾಡಿದವರು. ಹಾಗೆ ರಮೇಶ್ ಬಾಬು ಅವರು ಮಾಜಿ ಎಂಎಲ್ ಸಿಯಾಗಿ ಅನುಭವ ಹೊಂದಿದವರು.