ಇತ್ತೀಚಿನ ಸುದ್ದಿ
Budget Session | ದೇವಾಲಯಗಳ ಅರ್ಚಕರು/ ನೌಕರರ ವೇತನ ತಾರತಮ್ಯ ಸರಿಪಡಿಸಲು ಸಮಿತಿ ರಚನೆ: ಸಚಿವ ರಾಮಲಿಂಗಾ ರೆಡ್ಡಿ
05/03/2025, 22:07

ಬೆಂಗಳೂರು(reporterkarnataka.com):ದೇವಾಲಯಗಳ ಅರ್ಚಕರು/ ನೌಕರರ ವೇತನ ತಾರತಮ್ಯ ಸರಿಪಡಿಸಲು ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಲಾಗುವುದೆಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಅವರು ಇಂದು ವಿಧಾನ ಪರಿಷತ್ ನಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳ ಸಿಬ್ಬಂದಿಗಳಲ್ಲಿನ ವೇತನ ತಾರತಮ್ಯ ಕುರಿತಂತೆ ಸದನದ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರ ನಿಯಮ 72 ರಡಿ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದರು
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 36(2) ರಂತೆ ದೇವಾಲಯದ ಸಿಬ್ಬಂದಿ ವೆಚ್ಚವು ಒಟ್ಟು ವಾರ್ಷಿಕ ಆದಾಯದ ಶೇ 35 ಅನ್ನು ಮೀರಬಾರದು.ಹಾಗಾಗಿ ಈ ಮಿತಿಯೊಳಗೆ ದೇವಾಲಯದ ನೌಕರರ ವೇತನವನ್ನು ನಿಗದಿಪಡಿಸಬೇಕಾಗಿರುತ್ತದೆ ಎಂದರು.
ಇಲಾಖೆಯ ಕಾಯ್ದೆ ಮತ್ತು ನಿಯಮಗಳು ಜಾರಿಗೆ ಬರುವ ಪೂರ್ವದಲ್ಲಿಯೇ ಸರ್ಕಾರಿ ವೇತನ ಶ್ರೇಣಿಯನ್ನು ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ದೇವಾಲಯದ ನೌಕರರ ವೇತನಕ್ಕೂ ಹಾಗೂ ವೇತನ ಶ್ರೇಣಿ ನಿಗದಿಯಾಗದೇ ಕರ್ತವ್ಯ ನಿರ್ವಹಿಸುತ್ತಿರುವ ಬಾಕಿ ಉಳಿದ ದೇವಾಲಯದ ನೌಕರರು ತಾತ್ಕಾಲಿಕ ನೆಲೆಯಲ್ಲಿ ಅಂದರೆ ಸಂಚಿತ ಒಚರ್, ಎನ್.ಎಂ.ಆರ್. ದಿನಗೂಲಿ, ಹಂಗಾಮಿ ನಿಗದಿತ ವೇತನ, ಕಾರ್ಯಾರ್ಥ ಏರ್ಪಾಟು ಈ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರಿಗೂ ವೇತನ ತಾರತಮ್ಯ ಇರುತ್ತದೆ.
ಹಾಗಾಗಿ ಈ ಎಲ್ಲಾ ಅಂಶಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯನ್ನು ರಚಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.