ಇತ್ತೀಚಿನ ಸುದ್ದಿ
Legislative Assembly | ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು: ಬೈಂದೂರು ಶಾಸಕರ ಪ್ರಶ್ನೆಗೆ ಸಚಿವ ಎಚ್.ಕೆ.ಪಾಟೀಲ್ ಉತ್ತರ
04/03/2025, 21:14

ಬೆಂಗಳೂರು(reporterkarnataka.com): ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ವಿಶೇಷ ಗಮನ ಹರಿಸಲು ಪ್ರವಾಸೋದ್ಯಮ ನೀತಿಯ ಅವಧಿಯಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುವುದು ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಕರಾವಳಿ ಕರ್ನಾಟಕವನ್ನು ಉತ್ತಮ ಗುಣಮಟ್ಟದ ತಾಣವಾಗಿ ಸುಸ್ಥಿರವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಗಳನ್ನು ಮಾಡಲಾಗುವುದು. ಕರ್ನಾಟಕ ಸರ್ಕಾರವು ರಾಜ್ಯದ ಸಮಗ್ರ 320 ಕಿಮೀ ಉದ್ದದ ಕರಾವಳಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಾದ ಒತ್ತು ನೀಡಲು ವಿಶೇಷ ಹಣಕಾಸು ಪ್ಯಾಕೇಜುಗಳನ್ನು ಸೃಜಿಸಲಾಗುವುದು ಎಂದು ಪ್ರವಾಸೋದ್ಯಮ
ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಇಂದು ವಿಧಾನಸಭೆಯಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿ ಕರ್ನಾಟಕವು 2023ರಲ್ಲಿ 8 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಕಂಡಿದೆ. ಕರ್ನಾಟಕದ ಒಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ ಕರಾವಳಿ ಕರ್ನಾಟಕಕ್ಕೆ, ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸುಮಾರು ಶೇಕಡ 12 ರಿಂದ 15ರಷ್ಟಿದ್ದು, ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಅಪಾರ ಸಾಮರ್ಥ್ಯವಿದೆ. ಕರಾವಳಿ ಕರ್ನಾಟಕದ ಕಾರ್ಯಚಟುವಟಿಕೆಗಳನ್ನು ಯೋಜಿಸಲು ಮತ್ತು ಚಾಲನೆಗೊಳಿಸಲು ಅದಕ್ಕಾಗಿಯೇ ಸಮರ್ಪಿತವಾದ ಕರಾವರಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗುವುದು. ಕರಾವಳಿ ಅಭಿವೃದ್ಧಿಗಾರಿ ವಿಶೇಷ ಉಪಕ್ರಮಗಳನ್ನು ಕೈಗೊಳ್ಳಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚುವರಿ ಪ್ರೋತ್ಸಾಹವನ್ನು ನೀಡಲು ಕರಾವಳಿ ಅಭಿವೃದ್ಧಿ ಮಂಡಳಿಗೆ ಅಧಿಕಾರ ನೀಡಲಾಗುತ್ತದೆ. ಕರಾವಳಿ ಕರ್ನಾಟಕದಲ್ಲಿ ಯೋಜಿತ ಮತ್ತು ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಸಮುದಾಯದ ಸಹಭಾಗಿತ್ವದ ಸಮನ್ವಯತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಕರಾವಳಿ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗುವುದು ಹಾಗೂ ಕರಾವಳಿ ಕರ್ನಾಟಕದ ಯೋಜಿತ ಅಭಿವೃದ್ಧಿ ಮತ್ತು ಸಿಆರ್ಝಡ್ ಮಾನದಂಡಗಳೊಂದಿಗೆ ಕರ್ನಾಟಕ ಕರಾವಳಿ ಪಟ್ಟಣಗಳು ಮತ್ತು ಕಡಲ ತೀರಗಳಾದ್ಯಂತ ಪ್ರವಾಸೋದ್ಯಮ ಕೊಡುಗೆಗಳನ್ನು ಸಂಪರ್ಕಿಸುವಂಥ ಕರಾವಳಿ ವಲಯಗಳನ್ನು ಅಭಿವೃಧ್ಧಿಪಡಿಸುತ್ತದೆ. ಪ್ರವಾಸೋದ್ಯಮ ಯೋಜನೆಗಳನ್ನು ಎಲ್ಲೆಲ್ಲಿ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಮಾರ್ಗದರ್ಶನವಾಗಿ ಕಾಯನಿರ್ವಹಿಸಲು ಯೋಜಿತ ರೀತಿಯಲ್ಲಿ ಸಂಪರ್ಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ವಿಧಾನಸಭೆಯಲ್ಲಿ ಉತ್ತರಿಸಿದರು.