ಇತ್ತೀಚಿನ ಸುದ್ದಿ
ಹಜರತ್ ಸೈದಾನಿ ಬೀಬಿ ಮಾ ದರ್ಗಾದಲ್ಲಿ ನಾಳೆ ಗಂಧದ ಮಹೋತ್ಸವ; ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
21/02/2025, 14:48

ಮೋಹನ್ ನಂಜನಗೂಡು ಮೈಸೂರು
info.reporterkarnata@gmail.com
ತಲತಲಾಂತರಗಳಿಂದ ಹಿಂದು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಇತಿಹಾಸ ಪ್ರಸಿದ್ಧ ಬೆಳಲೆ ಗ್ರಾಮದ ಹಜರಾತ್ ಸೈದಾನಿ ಬೀಬಿ ಮಾ ದರ್ಗಾದಲ್ಲಿ ಗಂಧದ ಮಹೋತ್ಸವದ ಹಿನ್ನೆಲೆಯಲ್ಲಿ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಬೆಳಲೆ ಗ್ರಾಮದ ಹಜರಾತ್ ಸೈದಾನಿ ಬಿಬಿ ಮಾ ದರ್ಗಾದಲ್ಲಿ ಇದೇ ಫೆ.22 ರಂದು ಗಂಧದ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ದರ್ಗಾದ ಗುರುಗಳಾದ ಕೆ.ಆರ್ ಹುಸೇನ್ ಧರ್ಮಿ ರೇಂಜಲಾಡಿ ತಿಳಿಸಿದ್ದಾರೆ.
ಅಂದು ಶನಿವಾರ ಸಂಜೆ ವಿವಿಧ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಜಾಮಿಯಾ ಮಸೀದಿಯಿಂದ ಸಂಜೆ 5:00 ಗಂಟೆಗೆ ಪಲ್ಲಕ್ಕಿ ಉತ್ಸವದಲ್ಲಿ ಗಂಧದ ಮಹೋತ್ಸವವು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತದೆ.
ನಂತರ ದರ್ಗಾಗೆ ಹೋಗಿ ವಿಠಲಪುರದ ಗುರುಗಳಾದ ಹಜರತ್ ಸೈಯದ್ ಷಾ ಮಹಮ್ಮದ್, ಉಸ್ಮಾನ್ ಪಾಷಾ ಖಾದ್ರಿ ತಂಡದ ವತಿಯಿಂದ ಗಂಧವನ್ನು ಸಮರ್ಪಿಸಲಾಗುವುದು.
ವಿವಿಧ ಧಾರ್ಮಿಕ ಗುರುಗಳಿಂದ ಪ್ರವಚನವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಸಿದ್ಧ ಕವಾಲಿ ತಂಡದಿಂದ ನೃತ್ಯ ಪ್ರದರ್ಶನವಿದೆ ಎಂದು ಹಜರತ್ ಸೈದಾನಿ ಬೀಬಿ ಮಾ ದರ್ಗಾದ ಆಡಳಿತ ಮಂಡಳಿ ತಿಳಿಸಿದೆ.
ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಮತ್ತು ರಸೂಲ್ ಪಗವಾಲ ಪರಿಶೀಲನೆ ನಡೆಸಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.