ಇತ್ತೀಚಿನ ಸುದ್ದಿ
ದಶಕಗಳ ಬೇಡಿಕೆಗೆ ಕೊನೆಗೂ ಅಸ್ತು: ಮಂಗಳೂರು- ಕಾರ್ಕಳ ನಡುವೆ ಕೆಎಸ್ಸಾರ್ಟಿಸಿ ಬಸ್ ಸೇವೆ ಆರಂಭ
12/12/2024, 18:40

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಾಗರಿಕರ ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ. ಮಂಗಳೂರು- ಕಾರ್ಕಳ ಮಧ್ಯೆ ಮೂಡುಬಿದರೆ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ ಸೇವೆ ಆರಂಭಗೊಂಡಿದೆ.
ಮಂಗಳೂರು-ಕಾರ್ಕಳ ನಡುವೆ ಸದ್ಯ ನಾಲ್ಕು ಬಸ್ಗಳು ಮಾತ್ರ ಸಂಚರಿಸಲಿವೆ. ಪ್ರತಿದಿನ ಮಂಗಳೂರು ಕಡೆಯಿಂದ ಎರಡು ಬಸ್ಗಳು ಮತ್ತು ಕಾರ್ಕಳ ಕಡೆಯಿಂದ ಎರಡು ಬಸ್ಗಳು ಸೇವೆ ನೀಡಲಿವೆ. ಒಂದು ಬಸ್ ದಿನಕ್ಕೆ 7 ಟ್ರಿಪ್ನಂತೆ ನಾಲ್ಕು ಬಸ್ಗಳು ಒಟ್ಟು 28 ಟ್ರಿಪ್ ಈ ಮಾರ್ಗದಲ್ಲಿ ನಡೆಸಲಿವೆ. ಮಂಗಳೂರಿನ ಬಿಜೈನಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಯಾನ ಆರಂಭಿಸಲಿದೆ. ಕಾರ್ಕಳ ಕಡೆಯಿಂದ ಬರುವ ಬಸ್ ಕೂಡ ಬಿಜೈ ಬಸ್ ನಿಲ್ದಾಣಕ್ಕೆ ಬರಲಿದೆ.
ಮಂಗಳೂರು- ಕಾರ್ಕಳ ನಡುವೆ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಆದರೆ ಕರಾವಳಿ ಜಿಲ್ಲೆಗಳ ಖಾಸಗಿ ಬಸ್ ನವರ ಲಾಬಿ ಮತ್ತು ಇಲ್ಲಿನ ಕೆಲವು ರಾಜಕಾರಣಿಗಳೇ ಬಸ್ ಮಾಲೀಕರಾಗಿರುವ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ರಾಜ್ಯ ಸರಕಾರ ಇದುವರೆಗೆ ಸ್ಪಂದಿಸಿರಲಿಲ್ಲ. ಇದೀಗ
ಖಾಸಗಿ ಬಸ್ ಮಾಲೀಕರ ಭಾರಿ ಲಾಬಿಯ ಮಧ್ಯೆಯೂ ರಾಜ್ಯ ಕಾಂಗ್ರೆಸ್ ಸರಕಾರ ತಾತ್ಕಾಲಿಕ 2 ಪರ್ಮಿಟ್ನಡಿ 4 ಬಸ್ಗಳ ಓಡಾಟ ಡಿ.11ರಿಂದ ಆರಂಭಿಸಿದೆ. ಇದರಿಂದ ರಾಜ್ಯ ಸರಕಾರದ ಮಹಿಳೆಯರಿಗೆ ಉಚಿತ ಬಸ್ ಸೇವೆಯಾದ ಶಕ್ತಿ ಯೋಜನೆಯ ಪ್ರಯೋಜನವನ್ನು ಮಂಗಳೂರು, ಕೈಕಂಬ, ಎಡಪದವು, ಮೂಡುಬಿದಿರೆ, ಬೆಳುವಾಯಿ ಪ್ರದೇಶದ ಮಹಿಳೆಯರೂ ಪಡೆಯುವಂತಾಗಿದೆ.