ಇತ್ತೀಚಿನ ಸುದ್ದಿ
ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ ನಾಯಕ
18/11/2024, 20:32

ಶಿವು ರಾಠೋಡ್ ಯಾದಗಿರಿ
info.reporterkarnataka@gmail.com
ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.23ರ ವರೆಗೂ ನೀರು ಹರಿಸುವ ನಿರ್ಣಯ ಕೈಗೊಂಡಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ನರಸಿಂಹನಾಯಕ (ರಾಜೂ ಗೌಡ) ಹೇಳಿದರು.
ತಾಲೂಕಿನ ಕೊಡೇಕಲ್ ಗ್ರಾಮದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಆಲ ಮಟ್ಟಿ-ನಾರಾಯಣಪುರ ಜಲಾಶಯದಲ್ಲಿ ಒಟ್ಟು 124 ಟಿಎಂಸಿ ನೀರು ಇದ್ದರೂ10 ದಿನ ಬಂದ್ನಿರ್ಧಾರ ಅವೈಜ್ಞಾನಿಕವಾಗಿದೆ. ನಮ್ಮ ಭಾಗದ ಶಾಸಕರು ಹಾಗೂ ಸಚಿವರು ರೈತರ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತದೆ ಇರುವುದೇ ರೈತರಿಗೆ ದೊಡ್ಡ ಸಮಸ್ಯೆ ಎಂದರು.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಸಲಹಾ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗುತ್ತಿದೆ. ಹೀಗಾಗಿ ಹೆಚ್ಚಿನ ನೀರಾವರಿ ಪ್ರದೇಶ ರಾಯಚೂರು- ಯಾದಗಿರಿ- ಕಲಬುರಗಿ ಭಾಗದಲ್ಲಿ ಹೊಂದಲಾಗಿದೆ. ಆ ಭಾಗದ ಸಚಿವರು ಕಬ್ಬು ಬೆಳೆಯುವ ರೈತರ ಹಿತ ಕಾಪಾಡಲು ಜಲಾಶಯದಲ್ಲಿ ಟಿಎಂಸಿ ನೀರು ಹಿಡಿದಿಟ್ಟುಕೊಂಡಿದ್ದಾರೆ. ಆದರೆ, ನಮ್ಮ ಭಾಗದ ರೈತರ ಹಿತದೃಷ್ಟಿಯಿಂದ ಸಭೆಗೆ ಹಾಜರಾಗಿ ಒಕ್ಕೂರಲಿನಿಂದ ನೀರು ಬಿಡಿಸುವ ಪ್ರಯತ್ನ ಜನಪ್ರತಿನಿಧಿಗಳು ಮಾಡುತ್ತಿಲ್ಲ. ನೀರು ನಿರ್ವಹಣೆ ಮಾಹಿತಿ ಕೊರತೆ ಇದೆ. ರೈತರೊಬ್ಬರನ್ನು ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡಿಲ್ಲ, ಇದು ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ವಿಷಯದ ಬಗ್ಗೆ ಪ್ರಸ್ತಾಪಿಸಿದ ಅವರು, ರೈತರಿಗೆ ಸಮರ್ಪಕ ನೀರು ಬಿಡದೆ ಮೋಸ ಮಾಡಲಾಗುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದರು. ಏಪ್ರಿಲ್ 20ರವರೆಗೂ ವಾರಾಬಂದಿ ಅನುಸರಿಸದೆ, ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.