ಇತ್ತೀಚಿನ ಸುದ್ದಿ
ರಾಜ್ಯದೆಲ್ಲೆಡೆ ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು; ಉತ್ತರ ಕರ್ನಾಟಕಕ್ಕೆ ಪ್ರವಾಹದ ಭೀತಿ
08/07/2024, 16:15

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತರು ಮಂಗಳೂರು
info.reporterkarnataka@gmail.com
ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಪ್ರಮುಖ ನದಿಗಳು, ಹಳ್ಳ- ಕೊಳ್ಳ ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತ್ತವಾಗಿವೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಬೆಳಗಾವಿ, ಮೈಸೂರು ಮುಂತಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಶರಾವತಿ, ನೇತ್ರಾವತಿ, ಕಾಳಿ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ನೆರೆಯ ಭೀತಿ ಉಂಟು ಮಾಡಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶವಾದ ಕೋಯ್ನಾ, ಮಹಾಬಳೇಶ್ವರ, ಕಾಳಮ್ಮವಾಡಿ, ನವಜಾ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉತ್ತರ ಕರ್ನಾಟಕ ಪ್ರದೇಶದಲ್ಲಿ ಪ್ರವಾಹದ ಕರಿಛಾಯೆ ಆವರಿಸಿದೆ. ಮಹಾರಾಷ್ಟ್ರದ ಕೋಯ್ನಾ ಆಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ
ಬೆಳಗಾವಿಯ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಪ್ರತಿ ವರ್ಷವೂ ಕೋಯ್ನಾ ಅಣೆಕಟ್ಟಿನಿಂದ ಬಿಡುಗಡೆಯಾಗುವ ಅಪಾರ ಪ್ರಮಾಣದ ನೀರಿನಿಂದ ಉತ್ತರ ಕರ್ನಾಟಕದಲ್ಲಿ ಪ್ತವಾಹ ಪರಿಸ್ಥಿತಿ ಉದ್ಭವಿಸುತ್ತಿದೆ. ಈ ಬಾರಿಯೂ ಪ್ರವಾಹದಿಂದ ಹಲವು ಸೇತುವೆಗಳು ಈಗಾಗಲೇ ಮುಳುಗಡೆಯಾಗಿವೆ. ಕೃಷ್ಣಾ, ಧೂದಗಂಗಾ ಹಾಗೂ ವೇದಗಂಗಾ ನದಿಯಲ್ಲಿ 4 ಅಡಿಗಳಷ್ಟು ನೀರು ಹೆಚ್ಚಳವಾಗಿದೆ. ಕರಾವಳಿಯಲ್ಲೂ ಮಳೆಯಿಂದ ಇಲ್ಲಿನ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ, ಪಯಸ್ವಿನಿ, ಫಲ್ಗುಣಿ, ಸುವರ್ಣ ನದಿಗಳು ತುಂಬಿ ಹರಿಯುತ್ತಿದೆ. ಮಲೆನಾಡು ಜಿಲ್ಲೆಗಳಲ್ಲಿಯೂ ತುಂಗಾ, ಭದ್ರಾ, ಶರಾವತಿ,
ಹೇಮಾವತಿ, ಕಾಳಿ, ಅಘನಾಶಿನಿ ನದಿಗಳು ಉಕ್ಕಿ ಹರಿಯುತ್ತಿವೆ.