ಇತ್ತೀಚಿನ ಸುದ್ದಿ
ಜಮೀನಿನ ಜಿದ್ದಿಗೆ ಬಿದ್ದು ಡೆಡ್ಲಿ ಅಟ್ಯಾಕ್: ಆರೋಪಿಗಳ ರಕ್ಷಣೆಗೆ ನಿಂತ್ರಾ ನಂಜನಗೂಡು ಖಾಕಿ ಪಡೆ ?
11/04/2024, 10:19

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು : ಜಮೀನಿನ ವೈಷಮ್ಯದ ದ್ವೇಷದ ಜ್ವಾಲೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಬೊಲೆರೋ ವಾಹನದಲ್ಲಿ ಡಿಕ್ಕಿ ಹೊಡೆಸಿ ಚಾಕುವಿನಿಂದ ಇರಿದು ಪ್ರಾಣ ತೆಗೆಯಲು ಬಂದ ಆರೋಪಿಯನ್ನು ವಶಕ್ಕೆ ಪಡೆದು ಜೈಲಿಗಟ್ಟಬೇಕಾದ ನಂಜನಗೂಡು ಗ್ರಾಮಾಂತರ ಪೊಲೀಸರು ಕೊಲೆಗಡುಕರ ಪರವಾಗಿ ನಿಂತಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ನಿರ್ಲಕ್ಷ್ಯ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ.
ಇಂದು ಬುಧವಾರ ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಹಲ್ಲೆಗೊಳಗಾದ ಕಪ್ಪಸೋಗೆ ಗ್ರಾಮದ ಮಲ್ಲೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಒಂದು ವಾರಗಳ ಹಿಂದೆ ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಸಂತಾನ ಗಣಪತಿ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಪ್ಪಸೋಗೆ ಗ್ರಾಮದ ಮಲ್ಲೇಶ್ ಎಂಬಾತ ಪ್ರಚಾರ ಸಭೆಯನ್ನು ಮುಗಿಸಿಕೊಂಡು ನಂಜನಗೂಡು ಮಾರ್ಗವಾಗಿ ಹುಲ್ಲಹಳ್ಳಿ ಕಡೆಗೆ ತೆರಳುತ್ತಿರುವ ಸಂದರ್ಭದಲ್ಲಿ ಸಂಜೆ ಆರೂವರೆ ಗಂಟೆಯ ವೇಳೆಯಲ್ಲಿ ಒಂಟಿ ಸಲಗ ಎಂಬ ನಾಮಫಲಕ ಇರುವ ಬೋಲೇರೋ ವಾಹನ ಹಿಂಬದಿಯಿಂದ ಜೋರಾಗಿ ಬಂದು ಮಲ್ಲೇಶ್ ಎಂಬುವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ವ್ಯಕ್ತಿಯ ಮೇಲೆ ಬೋಲೇರೋ ವಾಹನವನ್ನು ದೇಹದ ಮೇಲೆ ಬಿಟ್ಟು ಮಲ್ಲೇಶನ ಕಿವಿಗೆ ಚಾಕುವಿನಿಂದ ಇರಿದು ಪ್ರಾಣ ತೆಗೆಯಲು ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಕೆಳಗೆ ಬಿದ್ದು ಜೀವ ಉಳಿಸಿಕೊಳ್ಳಲು ಚೀರಾಟ ಮಾಡಿದ ಮಲ್ಲೇಶ್ ರಕ್ಷಣೆಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಬಂದು ಜೀವ ರಕ್ಷಿಸಲು ಮುಂದಾಗಿದ್ದಾರೆ. ನಂತರ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲು ಪಡಿಸಿದ್ದಾರೆ. ಜಮೀನಿನ ವಿಚಾರವಾಗಿ ಹಳೆ ವೈಷಮ್ಯಕ್ಕೆ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿಯ ಆಧಾರದ ಮೇಲೆ ಬೊಲೆರೋ ವಾಹನದ ಚಾಲಕನ ವಿರುದ್ಧ ಮತ್ತು ನಾಲ್ಕು ಜನರ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಮಲ್ಲೇಶ್ ದೂರು ನೀಡಿದ್ದಾರೆ. ಘಟನೆಯ ನೈಜತೆಯನ್ನು ಪರಿಶೀಲಿಸಿ ತಪ್ಪಿತಸ್ಥ ಆರೋಪಿಯನ್ನು ಜೈಲಿಗಟ್ಟಬೇಕಾದ ಪೊಲೀಸರು ಆರೋಪಿಯ ಪರವೇ ನಿಂತು ಘಟನೆಗೆ ಸಂಬಂಧಿಸಿದ ಪ್ರಬಲವಾದ ಸೆಕ್ಷನ್ ಗಳನ್ನು ಹಾಕಿ ಆರೋಪಿಗೆ ತಕ್ಕ ಪಾಠ ಕಲಿಸಬೇಕಾದ ಪೊಲೀಸರು ಈಗ ತಮ್ಮ ಬಾಯಿ ಮತ್ತು ಕೈಗೆ ಕೋಳತೊಟ್ಟು ಮೌನವಹಿಸಿದ್ದಾರೆ. ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿ ಜೀವ ಬದುಕಿಸಿಕೊಂಡಿರುವ ಮಲ್ಲೇಶ್ ಎಂಬುವರು ಈಗ ನಂಜನಗೂಡು ಗ್ರಾಮಾಂತರ ಪೊಲೀಸರ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ನಂಜನಗೂಡಿನ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ತನಗಾಗಿರುವ ಪ್ರಾಣ ಬೆದರಿಕೆ ಮತ್ತು ಘಟನೆಗೆ ಕಾರಣವಾಗಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು. ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ಇಲ್ಲದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.