ಇತ್ತೀಚಿನ ಸುದ್ದಿ
ಸುಜೀರು: ಶ್ರೀ ವೀರ ಹನುಮಾನ್ ಮಂದಿರದ 22ನೇ ವಾರ್ಷಿಕೋತ್ಸವ. ಧಾರ್ಮಿಕ ಸಭೆ
17/01/2024, 14:55

ಬಂಟ್ವಾಳ(reporterkarnataka.com): ಭಾರತದ ಮೌಲ್ಯ ಆದ್ಯಾತ್ಮಿಕ, ರಾಮಾಯಣ ನಮ್ಮ ಬದುಕಿನ ಬೆಳಕು, ಶ್ರೀ ರಾಮನ ತ್ಯಾಗ ಹಾಗೂ ಹನುಮನ ಸೇವೆ ನಮ್ಮ ಬದುಕಿನ ಆದರ್ಶವಾಗಲಿ, ಈ ಪುಣ್ಯ ಶರೀರವನ್ನು ಸದ್ಭಳಕೆ ಮಾಡಿ ಸಮಾಜದಲ್ಲಿ ಆದರ್ಶ ಜೀವನ ನಡೆಸೋಣ, ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಸಂಸ್ಕಾರದ ಬಗ್ಗೆ ತಿಳಿ ಹೇಳಿ ಬೆಳೆಸುವ , ಸುಸಂಸ್ಕೃತರಾಗುವ ಶಕ್ತಿ ನಮಗೆ ಭಗವಂತ ಕರುಣಿಸಲಿ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಬಂಟ್ವಾಳ ಶ್ರೀ ವೀರ ಹನುಮಾನ್ ಮಂದಿರ (ರಿ.)ಸುಜೀರು ದತ್ತನಗರ, ಪುದು ಇಲ್ಲಿ ನಡೆದ 22ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿ ಬಂಟ್ವಾಳ ತಾಲೂಕು ಉಪ ತಹಸೀಲ್ದಾರ ನವೀನ ಬೆಂಜನಪದವು ಮಾತನಾಡಿ ಹೆತ್ತವರ ವರ್ತನೆಯನ್ನು ನೋಡಿ ಮಕ್ಕಳು ಬೆಳೆಯುತ್ತಾರೆ, ಆದ್ದರಿಂದ ನಾವು ಸುಸಂಸ್ಕೃತರಾಗಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಎಂದರು.
ನ್ಯಾಯವಾದಿ ಶೈಲಜಾ ರಾಜೇಶ್ ಮಾತನಾಡಿ, ಪರಸ್ಪರ ಪ್ರೀತಿಸುವ, ಗೌರವಿಸುವ ಗುಣ ಬೆಳೆಸೋಣ, ತಾಯಿಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಅವರು ನುಡಿದರು.
ಜ್ಯೋತಿಷಿ ಅನಿಲ್ ಪಂಡಿತ್ ಮಾತನಾಡಿ, ಸಂಸ್ಕಾರಯುತ ಜೀವನ ನಮ್ಮದಾಗಲಿ ಎಂದು ಶುಭ ಹಾರೈಸಿದರು.
ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರತಾಪ್ ಆಳ್ವ, ಅಶೋಕ ಶೆಟ್ಟಿ ಸುಜೀರುಗುತ್ತು,ಉತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ್, ಮಹಿಳಾ ಸೇವಾ ಬಳಗದ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು.
ಆಡಳಿತ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ ಸ್ವಾಗತಿಸಿದರು. ನಾಗೇಶ್ ಅಮೀನ್ ವಂದಿಸಿದರು. ತೇಜಾಕ್ಷಿ ಸುಜೀರ್ ಕಾರ್ಯಕ್ರಮ ನಿರೂಪಿಸಿದರು. ಪ್ರ ಕಾರ್ಯದರ್ಶಿ ಗಣೇಶ್ ಎಸ್ ಮಲ್ಲಿ ಸಹಕರಿಸಿದರು.
ಅಂದು ಬೆಳಿಗ್ಗೆ ಗಂಟೆ 7.00ರಿಂದ ಗಣಹೋಮ ಬಳಿಕ ಪಂಚಾಮೃತ ಅಭಿಷೇಕ ನಡೆದು 9 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಸಂಜೆ 6ರಿಂದ ಭಜನಾ ಸಂಕೀರ್ತನೆ ಬಳಿಕ ಮಂಗಳಾರತಿ, ಪ್ರಸಾದ ವಿತರಣೆ ನಡೆದು ನಂತರ ಬಪ್ಪನಾಡು ಮೇಳದವರಿಂದ “ಶಿವ ದೂತ ಗುಳಿಗೆ” ಎಂಬ ಯಕ್ಷಗಾನ ಬಯಲಾಟ ನಡೆಯಿತು.