ಇತ್ತೀಚಿನ ಸುದ್ದಿ
ಮಾಜಿ ಸಿಎಂ ಸದಾನಂದ ಗೌಡ ಅವರಿಗೆ ಬಿಜೆಪಿ ಹೈಕಮಾಂಡ್ ಬುಲಾವ್: ದೆಹಲಿಗೆ ಬರುವಂತೆ ನಡ್ಡಾ ಸೂಚನೆ?
21/10/2023, 14:21

ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಅಕ್ಟೋಬರ್ 25ರಂದು ದೆಹಲಿಗೆ ಆಗಮಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ, ಪ್ರತಿಪಕ್ಷದ ನಾಯಕನ ಹುದ್ದೆ ಹಾಗೂ ಜೆಡಿಎಸ್ ಜತೆ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಆಗಿರುವ ಸದಾನಂದ ಗೌಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಂತ ಸದಾನಂದ ಗೌಡ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡುವ ಸಾಧ್ಯತೆ ತೀರಾ ಕಡಿಮೆ. ಆದರೆ ಲೋಕಸಭೆ ಚುನಾವಣೆಯ ಸಮಯದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎನ್ನುವ ದೃಷ್ಟಿಯಿಂದ ಸದಾನಂದ ಗೌಡ ಅವರನ್ನು ದೆಹಲಿಗೆ ಕರೆಸಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಕೆಲ ದಿನಗಳ ಹಿಂದೆ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಸದಾನಂದ ಗೌಡರು ಅಸಮಾಧಾನ ಹೊರ ಹಾಕಿದ್ದರು. ಹೈಕಮಾಂಡ್ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿಯೇ ಬೇಸರ ಹೊರ ಹಾಕಿದ್ದರು. ಈ ನಡುವೆ ಡಿವಿಎಸ್ ಕಾಂಗ್ರೆಸ್ ಸೇರುತ್ತಾರೆ ಅನ್ನೋ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಶುರುವಾಗಿವೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾದಿಯನ್ನು ಸದಾನಂದ ಗೌಡರು ತುಳಿದರೆ ಪಕ್ಷದ ಇಮೇಜಿಗೆ ದಕ್ಕೆ ಬರಬಹುದು.
ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೈಕಮಾಂಡ್ ಮಾತುಕತೆಗೆ ಕರೆದಿದೆ ಎನ್ನಲಾಗಿದೆ.
ಕರಾವಳಿ ಜಿಲ್ಲೆಯ ಸುಳ್ಯ ಸಮೀಪದ ದೇವರಗುಂಡದ ಸದಾನಂದ ಗೌಡ ಅವರು ಬಿಜೆಪಿ ಪಕ್ಷದ ದೊಡ್ಡ ಫಲಾನುಭವಿ ನಾಯಕ. ಶಾಸಕ, ಸಂಸದ, ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ ಸೇರಿದಂತೆ ಎಲ್ಲ ಸ್ಥಾನಮಾನಗಳನ್ನು ಪಕ್ಷ ಅವರಿಗೆ ನೀಡಿದೆ. ಇದನ್ನು ಸ್ವತಃ ಸದಾನಂದ ಗೌಡ ಅವರೇ ಒಪ್ಪಿಕೊಂಡಿದ್ದಾರೆ.