ಇತ್ತೀಚಿನ ಸುದ್ದಿ
ಭಾರತದ ಚಂದ್ರಯಾನ-3 ಯಶಸ್ವಿ: ಚಂದ್ರನ ಸ್ಪರ್ಶಿಸಿದ ವಿಕ್ರಂ ಲ್ಯಾಂಡರ್; ಶಶಿಯ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಜಗತ್ತಿನ ಮೊದಲ ದೇಶ
23/08/2023, 18:34

ಬೆಂಗಳೂರು(reporterkarnataka.com): ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿ ಯಾಗಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಪಾದರ್ಪಣೆ ಮಾಡಿದೆ.
ಇಂದು ಸಂಜೆ 5.20ರಿಂದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋ ಪ್ರಕ್ರಿಯೆ ಆರಂಭವಾಯಿತು. ಸಂಜೆ 6.04ರ ಹೊತ್ತಿಗೆ ವಿಕ್ರಂ ಲ್ಯಾಂಡರ್ ಗಮ್ಯ ಸ್ಥಾನವನ್ನು ತಲುಪಿತು. ಚಂದ್ರಯಾನ -2 ವಿಫಲವಾದ ಕಹಿ ನೆನಪಿನ ಹಿನ್ನೆಲೆಯಲ್ಲಿ ಭಾರತೀಯರ ಎದೆ ಬಡಿತ ತೀವ್ರವಾಗಿತ್ತು. ಇವೆಲ್ಲದರ ಮಧ್ಯೆ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸುವಲ್ಲಿ ಇಸ್ರೋ ವಿಜ್ಞಾನಿಗಳು ಹಾಗೂ ತಂತ್ರಜ್ಞರ ತಂಡ ಯಶಸ್ವಿಯಾಗಿದೆ.
ಇದೊಂದು ಸಾಧಾರಣ ಯಾತ್ರೆಯಾಗಿತ್ತು.
ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿತ್ತು. ಬರೋಬ್ಬರಿ 3.84 ಲಕ್ಷ ಕಿಮೀ ದೂರವನ್ನು 41 ದಿನಗಳಲ್ಲಿ ಕ್ರಮಿಸುವ ಮೂಲಕ ಮಹಾಯಾತ್ರೆ ಅಂತ್ಯಗೊಂಡಿದೆ.
ಇಸ್ರೋದ ನೂರಾರು ವಿಜ್ಞಾನಿಗಳು, ತಂತ್ರಜ್ಞರು ಸುಮಾರು 4 ವರ್ಷ ಕಠಿಣ ಪರಿಶ್ರಮದಿಂದ ಚಂದ್ರಯಾನ-3 ಸಾಕಾರಗೊಂಡಿತ್ತು. ಇದು. 615 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಕಳೆದ 40 ದಿನಗಳಿಂದ ಈ ಇಡೀ ತಂಡ ಕಣ್ಣು ರೆಪ್ಪೆ ಮುಚ್ಚದೆ ಚಂದ್ರಯಾನವನ್ನು ಅವಲೋಕಿಸುತ್ತಿತ್ತು. ಇಸ್ರೋ ವಿಜ್ಞಾನಿಗಳಿಗೆ
ಚಂದ್ರನ ಅಧ್ಯನಯನ ನಡೆಸಲು ಕೇವಲ 14 ದಿನಗಳು ಮಾತ್ರ ಸಿಗಲಿದೆ. ಚಂದ್ರನಲ್ಲಿ ಇಂದಿನಿಂದ 14 ದಿನ ಮಾತ್ರ ಹಗಲು ಇರುತ್ತದೆ. ಮತ್ತೆ ದೀರ್ಘ ಕತ್ತಲೆ ಆವರಿಸುತ್ತದೆ. ಕತ್ತಲೆಯಲ್ಲಿ ಚಂದ್ರನ ತಾಪಮಾನ -250ರಿಂದ – 300 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಇದರಿಂದ ವಿಕ್ರಂ ಲ್ಯಾಂಡರ್ ನ ಯಾವುದೇ ಎಲೆಕ್ಟ್ರಾನಿಕ್ ವಸ್ತು ಕೆಲಸ ಮಾಡಲಾರದು. ಹಾಗಾಗಿ ಒಂದು ಸಲ ಚಂದ್ರನಲ್ಲಿ ಸೂರ್ಯಾಸ್ತಮಾನವಾದರೆ, ನಮ್ಮ ಪ್ರಗ್ಯಾನ್ ಹಾಗೂ ರೋವರ್ ನೌಕೆಗಳ ಆಟ ನಿಂತು ಬಿಡುತ್ತದೆ. ಆದರೆ ಇಸ್ರೋ ವಿಜ್ಞಾನಿಗಳು 14 ದಿನಗಳ ಕಾಲ ಚಂದ್ರನ ಮೇಲೆ ರೋವರ್ ಮೂಲಕ ಹುಡುಕಾಟ ನಡೆಸಲಿದ್ದಾರೆ. ಇದು ವಿಶ್ವದ ಬ್ಯಾಹ್ಯಾಕಾಶ ಚರಿತ್ರೆಯಲ್ಲಿ ಭಾರತ ಹೊಸ ದಾಖಲೆ ಬರೆಯಲು ಸಹಾಯವಾಗಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಜಗತ್ತಿನ ಮೊದಲ ದೇಶವಾಗಿ ಭಾರತ ತಲೆ ಎತ್ತಲಿದೆ.