ಇತ್ತೀಚಿನ ಸುದ್ದಿ
ಚಿಂತನೆ ಮತ್ತು ಯೋಚನಾ ಕ್ರಮಗಳಲ್ಲಿ ಜೀವಂತಿಕೆ ಇರಬೇಕು: ಡಾ.ಗಣನಾಥ ಎಕ್ಕಾರು
18/07/2023, 20:34

ಕಾರ್ಕಳ(reporterkarnataka.com): ಬದುಕಿನಲ್ಲಿ ಜ್ಞಾನ, ಮೌಲ್ಯಗಳು, ಶಿಸ್ತು, ಕೌಶಲ್ಯ, ಅತೀ ಅಗತ್ಯ. ಇದನ್ನು ನಮ್ಮ ಬದುಕಿನಲ್ಲಿ ತುಂಬಿಕೊಂಡಾಗ ವಿದ್ಯಾರ್ಥಿಯ ಬದುಕು ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಚಿಂತನೆ ಮತ್ತು ಯೋಚನಾ ಕ್ರಮಗಳಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡಾಗ ಬದುಕಿನಲ್ಲಿ ಸಾಫಲ್ಯತೆ ಪಡೆಯಲು ಸಾಧ್ಯ ಎಂದು ನಿಕಟಪೂರ್ವ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಹೇಳಿದರು.
ಅವರು, ಎಸ್.ಆರ್. ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಮಾತನಾಡಿ ಜೀವನದಲ್ಲಿ ಶಿಸ್ತು, ಸಂಯಮ, ಗುಣನಡತೆಗಳು ರೂಪುಗೊಳ್ಳಲು ಇಂತಹ ಕಾರ್ಯಕ್ರಮಗಳು ಸಹಾಯಕ. ನಾಡಿನ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳನ್ನು ಇಂತಹ ಕಾರ್ಯಕ್ರಮದಲ್ಲಿ ಆಹ್ವಾನಿಸುವ ಮೂಲಕ ಅವರ ಮೌಲ್ಯಯುತ ಮಾತುಗಳು ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಬೇಕೆಂಬುವುದೇ ಅದರ ಉದ್ದೇಶ. ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮಗಳು ಮತ್ತು ಹಿರಿಯ ಅನುಭವದ ಮೂಲಕ ನಿಮ್ಮ ಬದುಕು ಉಜ್ವಲವಾಗಿ ಬೆಳಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಶೇಖರ್ ಅಜೆಕಾರು ಅವರು ಮಾತನಾಡಿ, ಸವಾಲುಗಳನ್ನೇ ಎದುರಿಸಿಕೊಂಡು ಹೋರಾಟದ ಹಾದಿಯಲ್ಲಿ ಸಾಧನೆಯ ಮೆಟ್ಟಿಲನ್ನು ಏರಿದ ಮಹನೀಯರುಗಳು ಈ ಸಂಸ್ಥೆಯ ಅಧ್ಯಕ್ಷರು ಮತ್ತು ಇಂದಿನ ಕಾರ್ಯಕ್ರಮದ ಉದ್ಘಾಟಕರು ಇವರನ್ನು ವಿದ್ಯಾರ್ಥಿಗಳು ತಮ್ಮ ಬದುಕಿಗೆ ಮಾದರಿಯಾಗಿಸಿಕೊಳ್ಳಬೇಕು. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2022-23ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸ್ವಪ್ನಾ ಎನ್.ಶೆಟ್ಟಿ, ಪ್ರಾಂಶುಪಾಲ ಪ್ರಶಾಂತ್, ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕರಾದ ದೀಪಕ್ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೀಪಕ್ ಎನ್. ಸ್ವಾಗತಿಸಿ ವಿದ್ಯಾರ್ಥಿಗಳಾದ ಶಶಿಧರ್ ನಿರೂಪಿಸಿ, ಧೃತಿ ವಂದಿಸಿದರು.