ಇತ್ತೀಚಿನ ಸುದ್ದಿ
ಉಡುಪಿ ಜಿಲ್ಲಾ ಮಲೆಕುಡಿಯರ ಸಂಘದ ವಾರ್ಷಿಕ ಮಹಾಸಭೆ: ಸನ್ಮಾನ
03/07/2023, 13:08

ಉಡುಪಿ(reporterkarnataka.com): ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಅಧ್ಯಕ್ಷತೆಯಲ್ಲಿ ಸಂಘದ ಕೇಂದ್ರ ಕಛೇರಿ ಮಾಳ ಪೇರಡ್ಕ ಸಮುದಾಯ ಭವನದಲ್ಲಿ ಜರುಗಿತು.
ಪ್ರಧಾನ ಕಾರ್ಯದರ್ಶಿ ಅಶೋಕ್ ಕೆರ್ವಾಶೆ ಅವರು ಆಡಳಿತ ವರದಿ ವಾಚಿಸಿ, ಕೋಶಾಧಿಕಾರಿ ಸುಂದರಿ ಪೇರಡ್ಕ ಲೆಕ್ಕಪತ್ರ ಮಂಡಿಸಿದರು.
ಈ ಸಭೆಯಲ್ಲಿ ಪ್ರಸಕ್ತ ವರ್ಷದ ಬಜೆಟ್, ಅಜೀವ ಸದಸ್ಯತ್ವ ಅಭಿಯಾನ, ಸಿಬ್ಬಂದಿ ನೇಮಕ, ಸಮುದಾಯ ಭವನ ನಿರ್ವಹಣೆ ,ಹಳೆ ಕಟ್ಟಡ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಸಮಾಲೋಚಿಸಿ ಒಮ್ಮತದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಇತ್ತೀಚಿಗೆ ಮೃತಪಟ್ಟ ಅಹ್ವಾನಿತ ಸದಸ್ಯರಾದ ದೇವಕಿ ಈದು, ಅಜೀವ ಸದಸ್ಯರಾದ ಡೀಕಯ್ಯ ಮುಳಿಕಾರು, ಅಣ್ಣಪ್ಪ ಗೌಡ ಕಬ್ಬಿನಾಲೆ, ಅಶೋಕ್ ಕಬ್ಬಿನಾಲೆ ಇವರಿಗೆ ಗೌರವ ನಮನ ಸಲ್ಲಿಸಲಾಯಿತು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆಯ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಗಂಗಾಧರ ಗೌಡ ಹಾಗೂ ನಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ತಾರಾ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು, ರಾಜ್ಯ ಸಂಘಟನಾ ಕಾರ್ಯದರ್ಶಿ ನೋಣಯ್ಯ ಗೌಡ, ಸಂಚಾಲಕ ಡೀಕಯ್ಯ ಗೌಡ, ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಸುಂದರ ರೆಂಜಾಳ, ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಕಬ್ಬಿನಾಲೆ, ಸಹ ವಕ್ತಾರ ಶ್ರೀಮತಿ ಸುಜಾತ ಕಬ್ಬಿನಾಲೆ, ಆಹ್ವಾನಿತ ಸದಸ್ಯರು, ಅಜೀವ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಶ್ರಾವ್ಯ ಕೆರ್ವಾಶೆ ಪ್ರಾರ್ಥಿಸಿ, ವಕ್ತಾರ ದಿನೇಶ್ ಗೌಡ ಸ್ವಾಗತಿಸಿದರು. ಉಪಾಧ್ಯಕ್ಷೆ ಶೋಭಾ ವಂದಿಸಿದರು.