ಇತ್ತೀಚಿನ ಸುದ್ದಿ
ಸ್ಯಾಂಟ್ರೊ ರವಿ ಆಸ್ತಿ ಮುಟ್ಟುಗೋಲು; ಸೂಕ್ತ ತನಿಖೆ: ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ
10/01/2023, 21:34

ಹುಬ್ಬಳ್ಳಿ(reporterkarnataka.com): ಸ್ಯಾಂಟ್ರೊ ರವಿಯ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆತನ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದೆ. ಈತನ ವಿಷಯದಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿರುವವರ ಕಾಲದಲ್ಲೇ ಆತ ಅವ್ಯವಹಾರ ಮಾಡಿ ಜೈಲು ಸೇರಿ, ಬಿಡುಗಡೆ ಕೂಡ ಆಗಿದ್ದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ನಿವಾಸದಲ್ಲಿ ಮಂಗಳವಾರ ಮಾಧ್ಯಮ ಜತೆ ಮಾತನಾಡಿದ ಅವರು, ಈ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ. ಆತ ಯಾರು ಯಾರ ಜೊತೆಗೆ ನಂಟು ಹೊಂದಿದ್ದ, ಆತನ ಹಿನ್ನೆಲೆ ಏನು ಎಂಬ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಆ ಬಗ್ಗೆ ನಮ್ಮ ಪೊಲೀಸರು ವಿಚಾರಣೆ ಮಾಡುತ್ತಾರೆ. ಆತ ಯಾವ ಸರ್ಕಾರದಲ್ಲಿ ಏನೇನು ಅವ್ಯವಹಾರ ಮಾಡಿದ್ದ, ಯಾರ ಪಾತ್ರ ಎಷ್ಟಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದರು.
ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಹುಬ್ಬಳ್ಳಿ -ಧಾರವಾಡದಲ್ಲಿ ಮೊದಲ ಬಾರಿಗೆ ನಡೆಯಲಿರುವ ಯುವ ಮಹೋತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ.
ಐದು ದಿನಗಳ ಕಾಲ ಯುವ ಜನೋತ್ಸವದಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪಂಚಮಸಾಲಿ ಸಮಾಜ ಮೀಸಲಾತಿ ಬೇಡ ಎಂದು ತಕಾರರು ತೆಗೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಒಕ್ಕಲಿಗ ಅಥವಾ ಪಂಚಮಸಾಲಿ ಸಮಾಜ ಏನು ಕೇಳಿದೆ ಎಂಬುದು ನನ್ನ ಗಮನ ಬಂದಿದೆ. ಇನ್ನು ಏನು ಮೀಸಲಾತಿ ಕೊಡಬೇಕು ಅದನ್ನು ಕಾನೂನು ಚೌಕಟ್ಟಿನಲ್ಲಿ ಕೊಡುತ್ತೇವೆ. ಶಾಶ್ವತವಾದ ಮೀಸಲಾತಿ ಕೊಡುವ ಕುರಿತು ಸಹ ಚಿಂತನೆ ನಡೆದಿದೆ. ಏನೇ ಮಾಡಲು ಹಿಂದುಳಿದ ವರ್ಗಗಳ ಆಯೋಗದ ಪೂರ್ಣ ವರದಿ ಬರಬೇಕು. ಬೇಗ ನೀಡುವಂತೆ ಆಯೋಗವನ್ನು ಕೋರಲಾಗಿದೆ ಎಂದು ಪ್ರತಿಕ್ರಿಯಿಸಿದರು.
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿರ್ಧರಿಸಿರುವುದು ಅವರ ವೈಯಕ್ತಿಕ ನಿರ್ಧಾರ. ಅವರನ್ನು ಗೆಲ್ಲಿಸುವುದು ಬಿಡುವುದು, ಅಲ್ಲಿನ ಜನರಿಗೆ ಬಿಟ್ಟಿದ್ದು ಎಂದರು.