ಇತ್ತೀಚಿನ ಸುದ್ದಿ
ಮಾಜಿ ಶಾಸಕ ಬಾವಾ ವಿರುದ್ಧ 3 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವೆ: ಶಾಸಕ ಡಾ. ಭರತ್ ಶೆಟ್ಟಿ ಎಚ್ಚರಿಕೆ
24/12/2022, 22:28

ಸುರತ್ಕಲ್(reporterkarnataka.com): ಸುರತ್ಕಲ್ ಮಾರುಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರು ತನ್ನ ವಿರುದ್ಧ 38 ಕೋಟಿ ರೂ. ಕಮಿಷನ್ ಪಡೆದ ಆರೋಪ ಮಾಡಿದ್ದಾರೆ. ಮಾಜಿ ಶಾಸಕರು ಆ ಕುರಿತು ಸರಿಯಾದ ದಾಖಲೆ ಕೊಡಲಿ. ಇಲ್ಲದಿದ್ದರೆ ಅವರ ವಿರುದ್ಧ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶಾಸಕ ಡಾ. ವೈ. ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಇಲ್ಲಿ ಮಾಧ್ಯಮ ಜತೆ ಮಾತನಾಡಿದ ಶಾಸಕರು, ಮಾಜಿ ಶಾಸಕರಿಗೆ ತಾನು ಲಾಯರ್ ನೋಟಿಸ್ ಕಳುಹಿಸುತ್ತೇನೆ. ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಲಿ. ಇಲ್ಲದಿದ್ದರೆ ಅವರ ವಿರುದ್ಧ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರು.
ಸದನದಲ್ಲಿ ತಾನು ಪ್ರಶ್ನೆ ಕೇಳಿದಾಗ ಸಚಿವರು ಉತ್ತರ ನೀಡಿದ್ದಾರೆ. ಆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಉಪ ನಾಯಕ ಯು.ಟಿ. ಖಾದರ್ ಹಾಜರಿದ್ದರು. ಸದನದಲ್ಲಿ ಸುಳ್ಳು ಹೇಳಲು ಸಾಧ್ಯವಿಲ್ಲ. ಸಚಿವರು ಎಲ್ಲವನ್ನು ಪರಿಶೀಲಿಸಿ ಉತ್ತರ ನೀಡಿದ್ದಾರೆ ಎಂದು ಡಾ. ಭರತ್ ಶೆಟ್ಟಿ ನುಡಿದರು.
ಸುರತ್ಕಲ್ ಮಾರುಕಟ್ಟೆಗೆ ಸಂಬಂಧಿಸಿದ ಜಾಗವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸದೆ ವಿಳಂಬವಾಗಿದೆ. ಜಿಎಸ್ ಟಿ ಸೇರಿಸಿಲ್ಲ. ಎಸ್ ಆರ್ ರೇಟ್ ಜಾಸ್ತಿಯಾಗಿದೆ. ಅದನ್ನು ಸರಿಪಡಿಸಲು ಗುತ್ತಿಗೆದಾರರು ಒತ್ತಾಯಿಸಿದ್ದಾರೆ. ಇದನ್ನೆಲ್ಲ ಸೇರಿಸಿ ಹೊಸ ಟೆಂಡರ್ ಕರೆಯಬೇಕು. ಗುತ್ತಿಗೆದಾರರ ಹಳೆ ಬಿಲ್ ನ್ನು ಸರಕಾರ ಪಾವತಿಸಿದೆ ಎಂದು ಶಾಸಕರು ವಿವರಿಸಿದರರು.
ಮಂಗಳೂರು ಉತ್ತರ ಕ್ಷೇತ್ರ ಈಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ರಸ್ತೆ, ತಡೆಗೋಡೆ ಸೇರಿದಂತೆ ಎಲ್ಲ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದನ್ನು ಸಹಿಸಲಾಗದೆ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಶಾಸಕ ಬಾವಾ ಅವರು ಮಾತನಾಡುವ ಭರದಲ್ಲಿ ಏನೋ ಹೇಳಿದ್ದಾರೆ ಎಂದು ಸುಮ್ಮನಿರಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.