ಇತ್ತೀಚಿನ ಸುದ್ದಿ
ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವ ಧನ ಕನಿಷ್ಠ ಪಕ್ಷ 5 ಸಾವಿರಕ್ಕೆ ಹೆಚ್ಚಿಸಿ: ಶಾಸಕ ಮಂಜುನಾಥ ಭಂಡಾರಿ ಒತ್ತಾಯ
19/12/2022, 20:33

ಮಂಗಳೂರು(reporterkarnataka.com): ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಠ ಪಕ್ಷ 5 ಸಾವಿರಕ್ಕೆ ಹೆಚ್ಚಿಸಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.
ಕಳೆದ ಎರಡು ಅಧಿವೇಶನದಲ್ಲಿ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಟ ಪಕ್ಷ ತಿಂಗಳಿಗೆ 10 ಸಾವಿರ ರೂಪಾಯಿ ಹೆಚ್ಚಿಸಬೇಕು ಹಾಗೂ ಕೇರಳ ಮಾದರಿಯ ಆಡಳಿತವನ್ನು ಅನುಸರಿಸಬೇಕೆಂಬುದರ ಬಗ್ಗೆ ನಾನು ವಿಧಾನ ಪರಿಷತ್ತಿನಲ್ಲಿ ಸುರ್ಧೀಘವಾಗಿ ಚರ್ಚೆ ನಡೆಸಿದ್ದೆ. ಆದರೆ ರಾಜ್ಯ ಸರ್ಕಾರ ಇಂದು ಗೌರವಧನವನ್ನು ಕೇವಲ ರೂಪಾಯಿ 1 ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಿದೆ.
ಕೊನೆಯ ಪಕ್ಷ 5 ಸಾವಿರ ರೂಪಾಯಿ ಹೆಚ್ಚಿಸುವರೆಂಬ ಆಶಾ ಭಾವನೆ ನನ್ನಲ್ಲಿತ್ತು. ಇದಕ್ಕೆ ಮುಖ್ಯ ಕಾರಣ ಪಂಚಾಯತ್ನ ಚುನಾಯಿತ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸುವವರಾಗಿರುತ್ತಾರೆ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಿಸಲಾತಿ ಇರುವುದರಿಂದ ಮಹಿಳೆಯರು ಮತ್ತು ದುರ್ಬಲ ವರ್ಗದವರು ಚುನಾಯಿತ ಪ್ರತಿನಿಧಿಗಳಾಗಿದ್ದು ಅವರ ದೈನಂದಿನ ಜೀವನ ನಡೆಸಲು ಆರ್ಥಿಕವಾಗಿ ಹಿಂದುಳಿದವರಾಗಿರುತ್ತಾರೆ.
ಆದುದರಿಂದ ಕನಿಷ್ಟ ಪಕ್ಷ 5 ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಿಸಿದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಈ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬಹುದು ಎಂಬುದು ನನ್ನ ಭಾವನೆ.
ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಗೌರವಧನ ಹೆಚ್ಚಳದ ಬಗ್ಗೆ ನಮ್ಮ ಸಂಘಟಿತ ಹೋರಾಟವು ಇನ್ನೂ ಮುಂದುವರಿಯುತ್ತದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.