ಇತ್ತೀಚಿನ ಸುದ್ದಿ
ಸ್ಮಾರ್ಟ್ ಸಿಟಿ ಮಂಗಳೂರು: ತ್ಯಾಜ್ಯ ವಿಲೇವಾರಿಯಲ್ಲೂ ಆಗಲಿ ವೆರಿ ಸ್ಮಾರ್ಟ್
31/10/2022, 23:19

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕಾಮಗಾರಿಯ ರೆಸಿಗೆ ನಿಂತಿರುವ ಮಂಗಳೂರು ನಗರದ ಅಲ್ಲಲ್ಲಿ ಕಸದ ರಾಶಿಗಳು ಕಂಡು ಬರುತ್ತಿದ್ದು, ಕಡಲ ನಗರಿಗೆ ಇದು ಕಪ್ಪುಚುಕ್ಕೆ ಯಾಗಿ ಪರಿಣಮಿಸಿದೆ. ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮಕೃಷ್ಣ ಮಿಷನ್ ನವರು ಸ್ವಚ್ಚ ಮಂಗಳೂರು ಮಾಡಿದರೆ” , ಕಾರ್ಪೋರೇಶನ್ ನವರು ಅಸ್ವಚ್ಛ ಮಂಗಳೂರು ಅಂತಾರೆ ಎಂದು ಜನರು ಆಡಿಕೊಳ್ಳುತ್ತಾರೆ.
ಮಂಗಳೂರು ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿದೆ. ಆದರೆ ಕಸದ ಸಮಸ್ಯೆಗೆ ಮಾತ್ರ ಮುಕ್ತಿ ಇಲ್ಲ. ನಗರದ ವಿವಿ ಕಾಲೇಜಿನ ಆವರಣ ದ ಹೊರಗಿರುವ ಫುಟ್ ಭಾತ್ ನಲ್ಲಿ ಇತ್ತೀಚಿಗೆ ಕಸದ ರಾಶಿಯು ತುಂಬಿಕೊಂಡಿದ್ದು ಪಾದಚಾರಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ವರ್ಷದ ಹಿಂದೆ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ನಗರದಾದ್ಯಂತ ಕಸ ಶುಚಿಗೊಳಿಸುವ ಕಾರ್ಯ ನಡೆದಿತ್ತು. ಇದೇ ವೇಳೆ ಆವರಣ ಗೋಡೆಗಳನ್ನು ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆ ಗಳು ಶುಚಿ ಗೊಳಿಸಿ,ಬಣ್ಣ ಬಳಿದು ನಗರಕ್ಕೆ ಮೆರುಗು ತಂದಿದ್ದರು. ಇದೀಗ ಅದೇ ಸ್ಥಳದಲ್ಲಿ ಮತ್ತೆ ಬಿದ್ದಿರುವ ಕಸವನ್ನು ಪಾಲಿಕೆಯು ಶುಚಿಗೊಳಿಸದೆ ತನ್ನ ಆಲಾಸ್ಯ ತನವನ್ನು ತೋರಿಸಿದೆ.
ಕಸ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಪಾಲಿಕೆಗೆ ನಗರವನ್ನು ಅಂದ ಗೊಳಿಸಲು ಸಾಧ್ಯವಾಗಿಲ್ಲ. ಆದರೆ ಸಂಘ ಸಂಸ್ಥೆಗಳು ಶುಚಿಗೊಳಿಸಿ ಕೊಟ್ಟಿದ್ದನ್ನು ನಿರ್ವಹಿಸಲಾಗದೆ ಕುಂಭ ಕರ್ಣನಂತೆ ಗೊರಕೆಗೆ ಜಾರಿದ್ದು, ತಿಂಗಳ ಹಿಂದೆ ಗಾಂಧೀ ಜಯಂತಿಯಂದು ಪೊರಕೆ ಹಿಡಿದು ಫೋಟೋಗೆ ಪೋಸು ಕೊಟ್ಟವರು, ಚುನಾವಣೆ ಸಮೀಪಿಸುತ್ತಿದಂತೆ ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.