1:17 PM Saturday31 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಸುರತ್ಕಲ್ ಟೋಲ್ ತೆರವು ದಿನಾಂಕ ಪ್ರಕಟಿಸಿ: ಹೋರಾಟ ಸಮಿತಿ ಆಗ್ರಹ;  ಸೆ.13ರಂದು ಟೋಲ್ ಮುಂಭಾಗ ಸಾಮೂಹಿಕ ಧರಣಿ

27/08/2022, 15:02

ಮಂಗಳೂರು(reporterkarnataka.com): ಸುರತ್ಕಲ್ ಟೋಲ್ ಗೇಟ್ ತೆರವಿನ ದಿನಾಂಕವನ್ನು ಹೆದ್ದಾರಿ ಪ್ರಾಧಿಕಾರ ಅಥವಾ ಜಿಲ್ಲಾಡಳಿತ ಅಧಿಕೃತವಾಗಿ ಘೋಷಿಸಬೇಕು, ಟೋಲ್ ಗೇಟ್ ತೆರವಿಗೆ ಸಂಬಂಧಿಸಿದ ಪ್ರಕ್ರಿಯೆಗಳ ವಿವರವನ್ನೂ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರು, ಇದೇ ಬೇಡಿಕೆಯನ್ನು ಮುಂದಿಟ್ಟು ಎನ್ಐಟಿಕೆ ಬಳಿ ಇರುವ ಟೋಲ್ ಗೇಟ್ ಮುಂಭಾಗ ಸೆಪ್ಟಂಬರ್ 13 ರಂದು ಸಹಭಾಗಿ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿಯನ್ನು ನಡೆಸಲಿದ್ದೇವೆ ಎಂದರು.

ಸುಮಾರು 6 ವರ್ಷಗಳಿಂದ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ಒಂದು ತಿಂಗಳಲ್ಲಿ ತೆರವುಗೊಳಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಅಧಿಕಾರಿ ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿ ಹೇಳಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಟೋಲ್ ತೆರವಿಗೆ ಆಗ್ರಹಿಸಿ ವರ್ಷಗಳಿಂದ ನಡೆಯುತ್ತಿರುವ ಹೋರಾಟಗಳ ಹಿನ್ನಲೆಯಲ್ಲಿ ಅಧಿಕಾರಿಯ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ.‌ ಆದರೆ, ಹಿಂದಿನ ಕಹಿ ಅನುಭವಗಳಿಂದ ಇಂತಹ ಮಾತುಗಳ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಇದೇ ಸಂದರ್ಭ ಟೋಲ್ ಸಂಗ್ರಹದ ಗುತ್ತಿಗೆ ಒಂದು ವರ್ಷದ ಅವಧಿಗೆ ನವೀಕರಿಸಿರುವುದನ್ನು ಗಮನಿಸಬೇಕು. ಆದ್ದರಿಂದ ಸುರತ್ಕಲ್ ಟೋಲ್ ಗೇಟ್ ತೆರವಿನ ದಿನಾಂಕವನ್ನು ಹೆದ್ದಾರಿ ಪ್ರಾಧಿಕಾರ ಅಥವಾ ಜಿಲ್ಲಾಡಳಿತ ಅಧಿಕೃತವಾಗಿ ಘೋಷಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

6 ವರ್ಷಗಳಿಗೆ ಹಿಂದೆ 6 ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ ಬೂತ್ ಈಗಲೂ ಮುಂದುವರಿಯುತ್ತಿರುವುದು ಖೇದಕರ. ಬಿ. ಸಿ. ರೋಡ್ ನಿಂದ ಮುಕ್ಕವರೆಗಿನ ಈ ಹೆದ್ದಾರಿಯಲ್ಲಿ  ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ಎರಡು ಟೋಲ್ ಬೂತ್ ಗಳು ಕಾರ್ಯಾಚರಿಸುತ್ತಿದ್ದು, ಇದುವರಗೆ ಸರಿ ಸಮಾರು ರೂಪಾಯಿ 450 ಕೋಟಿಗೂ ಹೆಚ್ಚು ಸುಂಕ ಸಂಗ್ರಹಿಸಿದೆ. ಈ ಹೆದ್ದಾರಿಗಾಗಿ ಹೂಡಿಕೆ ಮಾಡಿರುವುದಕ್ಕಿಂತಲೂ ಹೆಚ್ಚುವರಿ ಹಣ ಸಂಗ್ರಹ ಸಂಗ್ರಹಗೊಂಡಿದೆ. 


ಭರವಸೆಯಂತೆ ಸುರತ್ಕಲ್ ಟೋಲ್ ಬೂತ್ ಆರು ತಿಂಗಳಲ್ಲಿ ಮುಚ್ಚದೆ ಇದ್ದಾಗ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ನೇತೃತ್ವದಲ್ಲಿ ಸತತ ಹೋರಾಟಗಳನ್ನು ಸಂಘಟಿಸಲಾಗಿದೆ. ಈ ಎಲ್ಲಾ ಸಂದರ್ಭದಲ್ಲಿ ಟೋಲ್ ಬೂತ್ ತೆರವಿನ ಭರವಸೆಗಳನ್ನು ನೀಡಿ ಹೋರಾಟದ ತೀವ್ರತೆಯನ್ನು ತಗ್ಗಿಸಲು ಯತ್ನಿಸಲಾಗಿದೆ. ಬಹಳ ಪ್ರಧಾನವಾಗಿ 2018 ಜನವರಿಯಲ್ಲಿ ಸುರತ್ಕಲ್ ಟೋಲ್ ಬೂತ್ ಅನ್ನು ಹೆಜಮಾಡಿಯ ನವಯುಗ್ ಟೋಲ್ ಬೂತ್ ನೊಂದಿಗೆ ವಿಲೀನಗೊಳಿಸುವ ನಿರ್ಧಾರವನ್ನು ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿತ್ತು. ಆದರೆ ನವಯುಗ್ ಹಾಗೂ ಸುರತ್ಕಲ್ ಟೋಲ್ ಗುತ್ತಿಗೆ ಲಾಭಿಯ ಹಿತಾಸಕ್ತಿಗಳಿಗಾಗಿ ವಿಲೀನ ತೀರ್ಮಾನ ಈ ವರೆಗೂ ಜಾರಿಯಾಗಿಲ್ಲ. ಈ ನಡುವೆ ಹೋರಾಟಗಳು ತೀವ್ರಗೊಂಡಾಗ ವಿವಿಧ ಭರವಸೆ, ಹೇಳಿಕೆಗಳನ್ನು ನೀಡಲಾಗಿದೆ. ಬಿ.ಸಿ. ರೋಡ್ ಮುಕ್ಕ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯಾಗಿಸುವುದು, ಸುರತ್ಕಲ್ ಟೋಲ್ ಅನ್ನು ನವಮಂಗಳೂರು ಬಂದರು ಒಳಗಡೆ ಸ್ಥಳಾಂತರಿಸುವುದು, 2018 ರ ವಿಲೀನ ನಿರ್ಧಾರವನ್ನು ಶೀಘ್ರ ಜಾರಿಗೊಳಿಸುವುದು ಇದರಲ್ಲಿ ಪ್ರಮುಖವಾದದ್ದು. ಪ್ರಧಾನವಾಗಿ ಇದೇ ಮಾರ್ಚ್ 22 ರಂದು ಹೆಜಮಾಡಿಯಿಂದ ಸುರತ್ಕಲ್ ಟೋಲ್ ಬೂತ್ ವರಗೆ ನಡೆದ ಬೃಹತ್ ಪಾದಯಾತ್ರೆ ಸಂದರ್ಭ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು 60 ಕಿಮೀ ಒಳಗಡೆ ಇರುವ ಎಲ್ಲಾ ಟೋಲ್ ಬೂತ್ ಗಳನ್ನು ತೆರವು ಗೊಳಿಸುವ ಘೋಷಣೆ ಮಾಡಿ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದರು‌. ಆದರೆ ಈ ಯಾವ ಭರವಸೆಗಳೂ ಈಡೇರಿಲ್ಲ. ಅದರಿಂದಾಗಿ ಈಗ ತಿಂಗಳ ಒಳಗಡೆ ಸುರತ್ಕಲ್ ಟೋಲ್ ಬೂತ್ ತೆರವು ಗೊಳ್ಳುತ್ತದೆ ಎಂಬ ಬಾಯಿ ಮಾತಿನ ಭರವಸೆಯನ್ನು ಜನರು ನಂಬುವ ಸ್ಥಿತಿಯಲ್ಲಿ ಇಲ್ಲ.  

ಈ ಹಿನ್ನಲೆಯಲ್ಲಿ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕವನ್ನು ಹೆದ್ದಾರಿ ಪ್ರಾಧಿಕಾರ ಅಥವಾ ಜಿಲ್ಲಾಡಳಿತ ಅಧಿಕೃತವಾಗಿ ಘೋಷಿಸಬೇಕು. ತೆರವಿನ ಸಂದರ್ಭ ಯಾವುದೇ ಕಾರಣಕ್ಕೂ ಹೆಜಮಾಡಿ ಹಾಗೂ ತಲಪಾಡಿ ಟೋಲ್ ಬೂತ್ ಗಳಲ್ಲಿ ದರ ಹೆಚ್ಚಳ ಮಾಡಬಾರದು, ಹೆದ್ದಾರಿ ಗುಂಡಿ ಮುಚ್ಚುವುದು, ದಾರಿ ದೀಪ ಅಳವಡಿಸುವುದು ಸಹಿತ ಹೆದ್ದಾರಿ ದುರವಸ್ಥೆಗಳನ್ನು ತಕ್ಷಣ ಸರಿಪಡಿಸಬೇಕು, ಕೂಳೂರು ಹೊಸ ಸೇತುವೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಒಂದು ದಿನದ ಸಾಮೂಹಿಕ‌ ಧರಣಿ ನಡೆಸಲಿದ್ದೇವೆ. ಆ ಸಂದರ್ಭದಲ್ಲಿಯೂ ಟೋಲ್ ಗೇಟ್ ತೆರವಿನ ದಿನಾಂಕ ಪ್ರಕಟಿಸದಿದ್ದಲ್ಲಿ ಧರಣಿಯಲ್ಲಿಯೇ ಬೃಹತ್ ಟೋಲ್ ಗೇಟ್ ಮುತ್ತಿಗೆಯ ದಿನಾಂಕವನ್ನು ಪ್ರಕಟಿಸಲಿದ್ದೇವೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕರಾದ ವೈ. ರಾಘವೇಂದ್ರ ರಾವ್, ಪುರುಷೋತ್ತಮ ಚಿತ್ರಾಪುರ, ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಜ್,

ದಲಿತ ಸಂಘರ್ಷ ಸಮಿತಿಯ ಸಂಚಾಲಕ ರಘು ಎಕ್ಕಾರು, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, 

ದ. ಕ. ಜಿಲ್ಲಾ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ

ಮೂಸಬ್ಬ ಪಕ್ಷಿಕೆರೆ, ದ. ಕ. ಜಿಲ್ಲಾ ಟ್ಯಾಕ್ಸಿಮೆನ್ ಹಾಗೂ ಮ್ಯಾಕ್ಸಿಕ್ಯಾಬ್ ಎಸೋಷಿಯೇಷನ್ ಅಧ್ಯಕ್ಷ ದಿನೇಶ್ ಕುಂಪಲ, ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಪೂಜಾರಿ ಕುಳಾಯಿ, ಶ್ರೀನಾಥ್ ಕುಲಾಲ್, ಎಂ.ಜಿ. ಹೆಗ್ಡೆ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು