12:00 PM Friday20 - September 2024
ಬ್ರೇಕಿಂಗ್ ನ್ಯೂಸ್
ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ

ಇತ್ತೀಚಿನ ಸುದ್ದಿ

ಹಿತ ಮಿತವಾಗಿರಲಿ ಮೊಬೈಲ್ ಬಳಕೆ…. ತಪ್ಪದಿರಲಿ ಬಾಳಿನ ಭವಿಷ್ಯದ ಕುಣಿಕೆ….

24/12/2021, 10:26

ಇಡೀ ವಿಶ್ವವನ್ನೇ ವ್ಯಾಪಿಸಿದ ಕೊರೋನಾ ಮಹಾಮಾರಿಯ ಎರಡನೆಯ ಅಲೆ ಕಡಿಮೆಯಾಗುತ್ತಿದ್ದಂತೆ ಆಗ ತಾನೆ ಮುಚ್ಚಿದ ಶಾಲಾ-ಕಾಲೇಜುಗಳುಆರಂಭವಾಗಲು ತೊಡಗಿದವು .ಮಕ್ಕಳು ಶಾಲೆಯ ಕಡೆ ಮುಖ ಹಾಕಲು ಪ್ರಾರಂಭಿಸಿದರು.. ಶೈಕ್ಷಣಿಕ ಚಟುವಟಿಕೆಗಳು ಮೊದಲಿನಂತೆ ನಡೆಯಲು ಆರಂಭಗೊಂಡಿತ್ತು.ಒಂದು ದಿನ ಒಬ್ಬ ಹುಡುಗನ ತಾಯಿ ಶಾಲೆಗೆ ಬಂದವರು ನನ್ನ ಜೊತೆ ಮಾತನಾಡುತ್ತಾ” ನನ್ನ ಮಗ ಎಷ್ಟು ಹೊತ್ತಿಗೂ ಮೊಬೈಲ್ ನೋಡ್ತಾ ಇರುತ್ತಾನೆ.ಏನು ಕಲಿಯುವುದಿಲ್ಲ. ನೀವಾದರೂ ಸ್ವಲ್ಪ ಹೇಳಿ ಟೀಚರ್..ಎಂದುಬಡಬಡಿಸಲು ಆರಂಭಿಸಿದರು.ಇದನ್ನು
ಕೇಳಿದ ನಾನು ನನ್ನ ಟೀಚರ್ ವರಸೆಯಲ್ಲಿ ಹೇಳಿದೆ ..ನಿಮ್ಮ ಮಗನಿಗೆ ಅಗತ್ಯ ಇದ್ದರೆ ಮಾತ್ರ ಮೊಬೈಲ್ ಕೊಡಬೇಕು.. ನಿಮ್ಮ ಅನುಮತಿ ಇಲ್ಲದೆ ಮೊಬೈಲ್ ನೋಡಬಾರದು .ಎಂಬುದಾಗಿ ದೊಡ್ಡ ದೊಡ್ಡ ಮಾತುಗಳನ್ನು ಹೇಳಿಬಿಟ್ಟೆ.ಅವರಿಗೆ ಮನಸ್ಸಿನಲ್ಲಿ ಏನು ಅನ್ನಿಸಿತೋ. ಇನ್ನು ಮುಂದೆ ನನ್ನ ಮಗನ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಹೇಳಿ ನಮಸ್ತೆ ಮಾಡಿ ಪೆಚ್ಚುಮೋರೆ ಹಾಕಿಕೊಂಡು ತಿರುಗಿ ಹೋಗಿಬಿಟ್ಟರು….
ಅವರು ಹೋದ ನಂತರ ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು.ಈಗ ನಮ್ಮ ಮಕ್ಕಳು ಯಾಕೆ ಮೊಬೈಲ್ ದಾಸರಾಗುತ್ತಿದ್ದಾರೆ?? ಈ ಮೊಬೈಲ್ ಎಂಬ ಮಾಯೆ ಪ್ರಪಂಚ ಮಕ್ಕಳನ್ನು ಯಾವ ರೀತಿ ಮೋಡಿ ಮಾಡಿದೆ?? ನಾವು ಎಲ್ಲಿ ಎಡವುತ್ತಿದ್ದೇವೆ?? ಮೊಬೈಲ್ ಎಂಬ ಮ್ಯಾಜಿಕ್ ನಿಂದ ಮಕ್ಕಳನ್ನು ಕಲಿಕೆಯ ಕಡೆಗೆ ಕೇಂದ್ರೀಕರಿಸುವುದು ಹೇಗೆ???

ಹೀಗೆ ಹತ್ತು ಹಲವು ಪ್ರಶ್ನೆಗಳು ನನ್ನ ಮನಃಪಟಲದಲ್ಲಿ ಹಾದುಹೋಗಲು ಆರಂಭಗೊಂಡಿತು.ಹೌದು.ಈ ಮೊಬೈಲ್ ಎಂಬ ಪುಟ್ಟ ವಸ್ತು ಯಾವ ರೀತಿ ಮಕ್ಕಳನ್ನು ಹಿರಿಯರನ್ನು ಮುದುಕರನ್ನು ತನ್ನಡೆಗೆ ಸೆಳೆಯುತ್ತಾ ಮೋಡಿ ಮಾಡಿದೆ.ನೋಡಿ.ಮೊಬೈಲ್ ಇಂದಿನ ಜಗತ್ತನ್ನು ಎಷ್ಟೊಂದು ಬದಲಾಯಿಸಿದೆ ಎಂಬುದರ ಬಗ್ಗೆ ಚಿಂತನೆ ಮೂಡಲಾರಂಬಿತು.

ತಂತ್ರಜ್ಞಾನ,ಆಧುನಿಕತೆ ಬೆಳೆದಂತೆಲ್ಲ ಮೊಬೈಲ್ ಎಂಬ ವಸ್ತು ಬದುಕಿನ ಅನಿವಾರ್ಯತೆ ಮತ್ತು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.
ಹಿಂದೆ ಮಗುವಿಗೆ ಊಟ ಮಾಡಿಸಬೇಕಾದರೆ ಅಮ್ಮ ಚಂದಮಾಮನನ್ನು ತೋರಿಸುತ್ತಾ ಕೈ ತುತ್ತು ನೀಡುತ್ತಿದ್ದಳು.ಆದರೆ ಈಗ ಮೊಬೈಲ್ ಕೈಯಲ್ಲಿ ಕೊಟ್ಟರೆ ಸಾಕು ಮಗು ಬಹಳ ಚೆನ್ನಾಗಿ ಊಟ ಮಾಡುತ್ತದೆ. ಮಕ್ಕಳು ಅಳುವುದನ್ನು ನಿಲ್ಲಿಸಬೇಕಾದರೆ ಮೊಬೈಲ್ ಬೇಕಾದ ಪರಿಸ್ಥಿತಿ ಎದುರಾಗಿದೆ.ಮಕ್ಕಳು ಆಟ ಆಡಲು ಮನೆಯಿಂದ ಹೊರಗೆ ಹೋಗುವ ಬದಲು ಮೊಬೈಲ್ ನಲ್ಲಿರುವ ಅನಗತ್ಯ ಗೇಮ್ಸ್ ಗಳನ್ನು ಆಡುವ ಮೂಲಕ ಮೊಬೈಲ್ ಚಟಕ್ಕೆ ಬೀಳುತ್ತಿದ್ದಾರೆ.

ಇರುವುದನ್ನು ಬಿಟ್ಟು ಇರದುದರ ಕಡೆಗೆ ಮಕ್ಕಳ ಗಮನ ಹರಿಯುತ್ತಿದೆ..
ಕೊರೋನಾ ಬರುವ ಮೊದಲು ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ಎಂಬ ಕಡ್ಡಾಯ ವಿತ್ತು. ಶಾಲೆಗಳಲ್ಲಿ ಎಲ್ಲಿಯಾದರೂ ವಿದ್ಯಾರ್ಥಿಗಳಲ್ಲಿ ಮೊಬೈಲ್ ಕಂಡುಬಂದರೆ ಅದು ವಾಪಸ್ ಸಿಗುವುದಂತೂ ಕನಸಿನ ಮಾತಾಗಿತ್ತು.

ಆದರೆ ಕೊರೋನಾ ಮಹಾಮಾರಿ ಶಾಲೆ-ಕಾಲೇಜುಗಳನ್ನು ಬಂದ್ ಮಾಡಿಸಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವ ಹಾಗೆ ಬದಲಾವಣೆಯನ್ನು ಇಡೀ ಜಗತ್ತಿನಲ್ಲಿ ತಂದುಬಿಟ್ಟಿತು.

ಹೆತ್ತವರಿಗೆ ಮಕ್ಕಳ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸುವುದೇ ಒಂದು ದೊಡ್ಡ ತಲೆನೋವಾಗಿ ಬಿಟ್ಟಿತ್ತು.
ಆನ್ಲೈನ್ ಮೂಲಕ ಶಿಕ್ಷಣ ನೀಡುವ ಅನಿವಾರ್ಯತೆ ಒದಗಿ ಬಿಟ್ಟಿತು.ಆನ್ಲೈನ್ ಶಿಕ್ಷಣದ ನೆಪದಲ್ಲಿ ಮೊಬೈಲ್ ನಲ್ಲಿರುವ ಪ್ರತಿಯೊಂದು ವಿಷಯಗಳನ್ನು ಮಕ್ಕಳು ಜಾಲಾಡಿ ಮೊಬೈಲ್ ಸರ್ವಜ್ಞ ರಾಗಿ ಬಿಟ್ಟರು.

ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಹತ್ತಿರ ಹಾವು ಬಂದು ಬುಸುಗುಟ್ಟಿದರೂ ಗೊತ್ತಾಗದಷ್ಟು ತಲ್ಲೀನರಾಗಿ ಬಿಡುತ್ತಾರೆ.

ಪಠ್ಯ ವಿಷಯದಲ್ಲಿ ಆಸಕ್ತಿ ಇಲ್ಲದ ಮಗುವಿಗೂ ಕೂಡ ಮೊಬೈಲ್ ನಲ್ಲಿರುವ ಪ್ರತಿಯೊಂದುApp ಗಳ ಬಗ್ಗೆ ,ಅದನ್ನು ಕಾರ್ಯನಿರ್ವಹಿಸುವ ಬಗ್ಗೆ ತಿಳಿದಿರುತ್ತದೆ. ತಂದೆ-ತಾಯಿಗೆ ಮಕ್ಕಳು ಗುರುವಾಗಿರುವ ಸನ್ನಿವೇಶವನ್ನು ಈಗ ನೋಡಬಹುದು.

ಮೊಬೈಲ್ ಇಲ್ಲದೆ ಜೀವನ ಇಲ್ಲವೇನೋ ಎಂಬಂತೆ ಆಗಿದೆ.ವಿದ್ಯಾರ್ಥಿಗಳಂತೂ ಆನ್ಲೈನ್ ಕ್ಲಾಸ್ ಎಂಬ ನೆಪವೊಡ್ಡಿ ಮೊಬೈಲ್ನಲ್ಲಿ ಹಲವಾರು ಗೇಮ್ ಗಳಿಗೆ ದಾಸರಾಗುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳನ್ನು ಅನಗತ್ಯ ವಾಗಿ ಉಪಯೋಗಿಸಿ ಹಲವಾರು ಸಮಸ್ಯೆಗಳಿಗೆ ಈಡಾಗುತ್ತಿದ್ದಾರೆ ಹೆಣ್ಣುಮಕ್ಕಳು ತಮಗೆ ಅರಿವಿಲ್ಲದಂತೆ ಹಲವಾರು ಮೋಸದ ಜಾಲಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಹೆಚ್ಚಿನ ಸಮಯ ಮೊಬೈಲನ್ನು ಉಪಯೋಗಿಸುವ ಕಾರಣ ಕಣ್ಣಿಗೆ ಆಯಾಸ ಹಾಗೂ ಹಲವಾರು ಮಾನಸಿಕ ಬೌದ್ಧಿಕ ಒತ್ತಡ, ಖಿನ್ನತೆ ಮೊದಲಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಶಾಲಾ ಶೈಕ್ಷಣಿಕ ವ್ಯವಸ್ಥೆಗೆ , ಹಾಗೂ ಪಠ್ಯದ ಕಡೆಗೆ ಕೇಂದ್ರೀಕರಿಸುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ.. ವಿದ್ಯಾರ್ಥಿಗಳನ್ನು ಮೊಬೈಲ್ ಪ್ರಪಂಚದಿಂದ ಕಲಿಕಾ ಪ್ರಪಂಚಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕಾದದ್ದು ಮುಖ್ಯ ಕೆಲಸವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹೆತ್ತವರು, ಪೋಷಕರ ಜೊತೆ ಚರ್ಚಿಸಬೇಕಾದದ್ದು ಕೂಡ ಅನಿವಾರ್ಯ ವಾಗಿದೆ.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಆಸಕ್ತಿದಾಯಕ ಆಟಗಳನ್ನು ,ಬುದ್ಧಿಗೆ ಸವಾಲನ್ನು ಎಸೆಯುವ,
ಚುರುಕುಗೊಳಿಸುವ , ಮತ್ತು ಬೌದ್ಧಿಕ ಕಸರತ್ತು ಹೆಚ್ಚಿಸುವ ಆಟಗಳನ್ನು ಆಡಿಸುವ ಮೂಲಕ ಮಕ್ಕಳ ಮಾನಸಿಕ, ದೈಹಿಕ ,ಬೆಳವಣಿಗೆಗೆ ಸಹಾಯ ಮಾಡಬಹುದು

ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾದುದು ಅನಿವಾರ್ಯವಾಗಿದೆ.ಯಾವುದೇ ವಸ್ತುವನ್ನಾಗಲಿ ಹಿತಮಿತವಾಗಿ, ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಜೀವನದಲ್ಲಿ ಗುರಿ ತಲುಪಲು ಸಾಧ್ಯ.

ಮೊಬೈಲ್ ನಿಂದ ಎಷ್ಟು ಉಪಯೋಗವಿದೆಯೇ ಅಷ್ಟೇ ಹಾನಿಯೂ ಇದೆ…”ಅತಿಯಾದರೆ ಅಮೃತವೂ ವಿಷವೇ” ಎನ್ನುವ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಂಡು ಬಳಸಿದರೆ ಜೀವನದಲ್ಲಿ ಯಶಸ್ಸು ಕಾಣುವುದರಲ್ಲಿ ಎರಡು ಮಾತಿಲ್ಲ….

✍️

ಇತ್ತೀಚಿನ ಸುದ್ದಿ

ಜಾಹೀರಾತು