ಇತ್ತೀಚಿನ ಸುದ್ದಿ
ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ ಸೇರಿ ಕುಟುಂಬದ ವಿರುದ್ಧ ದೂರು ದಾಖಲು
28/06/2026, 20:51
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಯುಪಿಡಿ ಕಾಯಿನ್ ಕ್ರಿಪ್ಟೋ ಕರೆನ್ಸಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹಲವು ಪಟ್ಟು ಲಾಭ ದೊರೆಯುತ್ತದೆ ಎಂದು ಆಮೀಷವೊಡ್ಡಿ, ನಂಬಿಸಿ ಹಲವರಿಂದ ಕೋಟ್ಯಂತರ ರೂ. ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಾಧ್ಯಾಪಕ ಸೇರಿದಂತೆ ಅವರ ಕುಟುಂಬದ ವಿರುದ್ಧ ದೂರು ದಾಖಲಾಗಿದೆ.
ತೀರ್ಥಹಳ್ಳಿಯ ಸಹಾದ್ರಿ ಪಾಲಿಟೆಕ್ನಿಕ್ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್, ಅವರ ಪತ್ನಿ ಕುಸುಮಾ, ಪುತ್ರ ಜೀವನ್ ಹಾಗೂ ಪುತ್ರಿ ಸಮೃದ್ಧಿ ಹಾಗೂ ಶ್ವೇತಾ ಎಂಬುವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಸರ್ಕಾರಿ ನೌಕರರು, ಶಿಕ್ಷಕರು, ರೈತರು, ಅಡಿಕೆ ಬೆಳೆಗಾರರು, ಕೃಷಿ ಕಾರ್ಮಿಕರು, ಗ್ಯಾರೇಜ್ಗಳಲ್ಲಿ ಕೆಲಸ ಮಾಡುವವರಿಂದ ಹಣ ವಸೂಲಿ ಮಾಡಿರುವ ಆರೋಪದ ಜೊತೆಗೆ ಪಟ್ಟಣದ ಎಷ್ಟೋ ಸಣ್ಣ ವ್ಯಾಪಾರಿಗಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಮೋಸ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ತಿಂಗಳಲ್ಲಿ ಹಲವು ಪಟ್ಟು ಲಾಭವಾಗುತ್ತದೆ ಎಂದು ಹೇಳಿ ತಮ್ಮ ಮನೆಗೆ ಕರೆಯಿಸಿ ಕೊಂಡು ಯೂ ಬಿಟ್, ಬಿಟ್ ಕಾಯಿನ್ ಎಂಬ ಕಂಪನಿ ಇದ್ದು ಅದರಲ್ಲಿ ಹಣ ತೊಡಗಿಸಿದಲ್ಲಿ ನಿಮ್ಮ ಹಣ ಗ್ಯಾರಂಟಿ
ರಿಟರ್ನ್ ಇದ್ದು ಮತ್ತು ಹೆಚ್ಚಿನ ಲಾಭ ಸಿಗುತ್ತದೆ ಎಂದೆಲ್ಲಾ ತಿಳಿಸಿದ್ದು ನಾನು ಈ ಬಗ್ಗೆ ಕಂಪನಿಯ ವಿವರ ಕೇಳಿದಾಗ ಅವರ ಮೊಬೈಲ್ ನಲ್ಲಿ ತಮಗೆ ಕಂಪನಿಯಿಂದ ಬಂದಂತಹ ಲಾಭದ ಹಣವನ್ನು ತೋರಿಸಿ ನಂಬಿಸಿದ್ದು ಹೀಗೆ ಕಂಪನಿಯ ಯಾವುದೇ ವಿವರ ನೀಡದೇ 11,00,000/- ರೂಗಳನ್ನು ಕಂಪನಿಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಹಣವನ್ನು ಪಡೆದು ಯಾವುದೇ ಲಾಭದ ಹಣವಾಗಲೀ ನನ್ನ ಹೂಡಿಕೆಯ ಹಣವಾಗಲೀ ನೀಡಿರುವುದಿಲ್ಲ.
ಉಳಿದಂತೆ ಬೆಟ್ಟಮಕ್ಕಿ ನಿವಾಸಿ ಒಬ್ಬರಿಂದ 8,00,000/- ರೂಗಳು, ಹುಂಚದಕಟ್ಟೆ ವಾಸಿಯೊಬ್ಬರಿಂದ
ರವರಿಂದ 5,00,000/- ರೂ , ಹುಂಚದಕಟ್ಟೆ ನಿವಾಸಿ ಮತ್ತೊಬ್ಬರಿಂದ 5,00,000/- ರೂ, ನೊಣಬೂರು ಚಂದವಳ್ಳಿ
ನಿವಾಸಿಯೊಬ್ಬರಿಂದ 18,00,000/- ರೂಗಳು , ಬೆಟ್ಟಮಕ್ಕಿ ನಿವಾಸಿಯೊಬ್ಬರಿಂದ 3,00,000/- ರೂಗಳು
ಹೀಗೇ ಒಟ್ಟು ನಮ್ಮೆಲ್ಲರಿಂದ 48,00,000/- ರೂಗಳನ್ನು ಪಡೆದಿರುತ್ತಾರೆ. ಹೀಗೆ ಸುಳ್ಳು ಕಂಪನಿಯ ಕಥೆ ಹೇಳಿ ಹಾಗೂ ಇತರರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕುಮಾರ್ ಮನೆಯಲ್ಲಿ ಆತನ ಹೆಂಡತಿ ಕುಸುಮಾ ಮಗ ಜೀವನ್, ಮಗಳು ಸಮೃದ್ಧಿ ಹಾಗೂ ಇವರ ಸಂಬಂಧಿ ಎಂದು ಹೇಳಿಕೊಂಡಿರುವ ಶ್ವೇತಾ ಎಲ್ಲರೂ ಸೇರಿ ಹಣ
ತೆಗೆದುಕೊಂಡಿರುತ್ತಾರೆ. ಕೊಟ್ಟ ಹಣ ಕೇಳಲು ಹೋದರೆ ಇನ್ನು ಈ ಕಡೆ ಬರಬೇಡ ಬಂದರೆ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಪಡೆದ ಹಣವನ್ನು ಹಿಂತಿರುಗಿಸದೇ ನಂಬಿಕೆ ದ್ರೋಹ ಮಾಡಿ, ಮೋಸ ಮಾಡುವ ಉದ್ದೇಶದಿಂದಲೇ ಹಣವನ್ನು ವಸೂಲಿ ಮಾಡಿದ ಕುಮಾರ್ ಸೇರಿ ಉಳಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿದೆ.
ದೂರು ದಾಖಲಾದ ಬಳಿಕ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಪ್ರಕರಣದ ಸಂಬಂಧ ತೀರ್ಥಹಳ್ಳಿ ಪೊಲೀಸರಿಂದ ತನಿಖೆ ಆರಂಭಗೊಂಡಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












